ಡ್ರಗ್ಸ್ ಪ್ರಕರಣ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
ಬೆಂಗಳೂರು, ಸೆಪ್ಟೆಂಬರ್ 18: ಮಾದಕ ವಸ್ತು ಜಾಲದ ಕುರಿತಾದ ತನಿಖೆ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದ್ದು ಮತ್ತೆ ಮೂವರಿಗೆ ಕೇಂದ್ರ ಅಪರಾಧ ದಳ (ಸಿಸಿಬಿ) ನೋಟಿಸ್ ನೀಡಿದೆ.
ಶನಿವಾರ ವಿಚಾರಣೆಗೆ ಹಾಜರಾಗುವಂತೆ ಕಿರುತೆರೆ ನಿರೂಪಕ ಹಾಗೂ ನಟ ಅಕುಲ್ ಬಾಲಾಜಿ, ಮಾಜಿ ಶಾಸಕ ದಿ. ಆರ್ವಿ ದೇವರಾಜ್ ಅವರ ಮಗ, ಮಾಜಿ ಕಾರ್ಪೊರೇಟರ್ ಆರ್ವಿ ಯುವರಾಜ್ ಮತ್ತು ನಟ ಸಂತೋಷ್ ಕುಮಾರ್ ಅವರಿಗೆ ಸಿಸಿಬಿ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
"ಡ್ರಗ್ ತನಿಖೆ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗದಿರಲಿ"
ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನೀಡಿರುವ ಮಾಹಿತಿ ಆಧಾರದಲ್ಲಿ ಈ ಮೂವರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ತಮಗೆ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಈಗ ಹೈದರಾಬಾದ್ನಲ್ಲಿದ್ದು, ನಾಳೆ ಸಮಯಕ್ಕೆ ಸರಿಯಾಗಿ ಹಾಜರಾಗುವುದಾಗಿ ಸುದ್ದಿವಾಹಿನಿಯೊಂದಕ್ಕೆ ಅಕುಲ್ ಬಾಲಾಜಿ ತಿಳಿಸಿದ್ದಾರೆ.
'ಶೇ 100ರಷ್ಟು ಭರವಸೆ ನೀಡುತ್ತೇನೆ, ನನ್ನ ಮಗ ಎಂದು ಹೇಳುತ್ತಿಲ್ಲ, ಅವನು ಡ್ರಗ್ಸ್ ವ್ಯಸನಿ ಅಲ್ಲ. ಅವನಿಗೆ ದೇವರು ದಿಂಡಿರ ಭಕ್ತಿ ಜಾಸ್ತಿ. ಆತನಿಗೆ ಸಿಗರೇಟ್ ಅಭ್ಯಾಸ ಕೂಡ ಇಲ್ಲ. ಆತನ ಜೀವನದಲ್ಲಿ ಒಮ್ಮೆಯೂ ಡ್ರಗ್ಸ್ ತೆಗೆದುಕೊಂಡಿಲ್ಲ' ಎಂದು ಆರ್ವಿ ದೇವರಾಜ್ ಹೇಳಿದ್ದಾರೆ.
Recommended Video
ಕ್ಯಾಸಿನೋ: ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕರ ವಿಚಿತ್ರ ಸಲಹೆ!
ಇನ್ನೊಂದೆಡೆ ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ಸಂಜನಾ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆಯಾಗಿದೆ. ಶುಕ್ರವಾರ ಅರ್ಜಿ ವಿಚಾರಣೆಗೆ ನಡೆಸಿದ 33ನೇ ಸೆಷನ್ಸ್ ನ್ಯಾಯಾಲಯ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.