ಪೊಲೀಸ್ ಮಾಹಿತಿದಾರನ ಹೆಸರಿನಲ್ಲಿ ಡ್ರಗ್ ಮಾರಾಟ ಮಾಡ್ತಿದ್ದವ ಅಂದರ್
ಬೆಂಗಳೂರು, ಸೆ. 14: ಮಾದಕ ಜಾಲದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿಕೊಂಡು ಡ್ರಗ್ ಮಾರಾಟ ಮಾಡುತ್ತಿದ್ದ ಪೊಲೀಸ್ ಮಾಹಿತಿದಾರ ಸೇರಿ ಮೂವರನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿದಾರ ರವಿ ಬಂಧನಕ್ಕೆ ಒಳಗಾದವ. ಇತನಿಂದ ಐದು ಲಕ್ಷ ರೂ. ಮೌಲ್ಯದ ಎಕ್ಸೆಟೆಸಿ ಪಿಲ್ಸ್, ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ರವಿ ನೀಡಿದ ಮಾಹಿತಿ ಮೇರೆಗೆ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ನನಗೆ ಮಾದಕ ವಸ್ತು ಮಾರಾಟದ ನೆಟ್ವರ್ಕ್ ಗೊತ್ತಿದೆ. ನಿಮಗೆ ಮಾಹಿತಿ ನೀಡುತ್ತೇನೆ ಎಂದು ಪೊಲೀಸರನ್ನು ಪರಿಚಯಿಸಿಕೊಂಡಿದ್ದ ಭೂಪ, ತನಗೆ ಆಗದವರನ್ನು ಪೊಲೀಸರಿಗೆ ಹಾಕಿ ಕೊಡುತ್ತಿದ್ದ. ರವಿ ನೀಡಿದ ಮಾಹಿತಿ ಮೇರೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸುತ್ತಿದ್ದರು. ಆನಂತರ ರವಿಯೇ ಡ್ರಗ್ ತರಿಸಿ ತನ್ನ ಸಂಪರ್ಕದಲ್ಲಿರುವರಿಗೆ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಆಧರಿಸಿ ಕೆ.ಜಿ. ಹಳ್ಳಿ ಪೊಲೀಸರು ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಡ್ರಗ್ ಮಾರಾಟ ಮಾಡುತ್ತಿದ್ದ ವಿಚಾರವನ್ನು ಬಾಯಿ ಬಿಟ್ಟಿದ್ದು, ಈತನ ಜತೆ ಸೇರಿ ಡ್ರಗ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ನುಡುಬಾ, ಶಾಕೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರನ್ನು ಎನ್ಡಿಪಿಎಸ್ ಆಕ್ಟ್ ಅಡಿಯಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಪೊಲೀಸರಿಗೆ ಮಾಹಿತಿದಾರ ಅಂತ ಹೇಳಿಕೊಂಡು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ರವಿ ಖತರ್ನಾಕ್ ಐಡಿಯಾ ನೋಡಿ ಪೊಲಿಸರೇ ದಂಗಾಗಿದ್ದಾರೆ. ಕೆ.ಜಿ. ಹಳ್ಳಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್ ಗಳ ವಿರುದ್ಧ ಸಮರ: ಇನ್ನು ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಹೊರ ಬಂದು ಅದೇ ಕಾಯಕದಲ್ಲಿ ತೊಡಗಿರುವ ವಿದೇಶಿ ಡ್ರಗ್ ಪೆಡ್ಲರ್ಗಳ ವಿರುದ್ಧ ಪೂರ್ವ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅನಧಿಕೃತವಾಗಿ ದೇಶದಲ್ಲಿ ನೆಲೆಸಿ ಮಾದಕ ವಸ್ತು ಮಾರಾಟದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ " ಅಕ್ರಮ ವಾಸಿಗಳ ಕೇಂದ್ರಕ್ಕೆ ರವಾನಿಸಲಾಗುತ್ತಿದೆ.
ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನಿರ್ದೇಶನದ ಮೇರೆಗೆ ಬಾಣಸವಾಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೂರ್ವ ವಿಭಾಗದ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿದೇಶಿ ಪ್ರಜೆಗಳ ನೋಂದಣಿ ಕೇಂದ್ರದ ಮುಂದೆ ಹಾಜರು ಪಡಿಸಿದ್ದಾರೆ. ಬಳಿಕ ಅವರನ್ನು ನೆಲಮಂಗಲದಲ್ಲಿರುವ ಅಕ್ರಮ ವಾಸಿಗಳ ಕೇಂದ್ರಕ್ಕೆ ಬಿಡಲಾಗಿದೆ. ಕಾಂಗೋ ಮೂಲದ ನಾದಾಶಿ ಡೈದೀರ್, ಬುಹೇಶೀ ಬಹೋಗ್ವರೇ ವಿನ್ನಿ ಬಂಧಿತ ಆರೋಪಿಗಳು. ಇಬ್ಬರು ವಿದೇಶಿ ಪ್ರಜೆಗಳು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಮೇಲೆ ಬಿಡುಗಡೆಗೊಂಡು ಮತ್ತೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದರು.
ಡಿಟೆಂಷನ್ ಸೆಂಟರ್ ನಲ್ಲಿ ಇರಲ್ಲ: ವಿದೇಶಿ ಪ್ರಜೆಗಳು ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋದ್ರೂ ಇರುತ್ತಾರೆ. ಆದರೆ ಅಕ್ರಮ ವಾಸಿಗಳ ಆಶ್ರಯ ತಾಣದಲ್ಲಿ ಅವರು ಇರಲ್ಲ. ಅಲ್ಲಿನ ಸೌಲಭ್ಯಗಳು ವಿದೇಶಿ ಪ್ರಜೆಗಳಿಗೆ ಹಿಡಿಸುವುದಿಲ್ಲ. ಹುಚ್ಚು ಹಿಡಿಸಿದಂತಾಗುತ್ತದೆ. ಹೀಗಾಗಿ ದೇಶವನ್ನೇ ಅವರು ತ್ಯಜಿಸುತ್ತಾರೆ. ಎಲ್ಲಾ ಪೊಲೀಸರು ಇದೇ ರೀತಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಬಂಧಿಸಿದರೆ ಎಲ್ಲರನ್ನು ದೇಶದಿಂದ ಓಡಿಸಬಹುದು. ಜೈಲಿಗೆ ಹೋಗಿದ್ರೆ ಹಣ ವ್ಯಯಿಸಿ ಏನು ಸೌಲಭ್ಯ ಬೇಕಾದರೂ ಜೈಲಿನಲ್ಲಿ ಅವರು ಪಡೆದುಕೊಳ್ಳುತ್ತಾರೆ. ಹೀಗಾಗಿ ಅಕ್ರಮ ವಾಸಿಗಳನ್ನು ಅಕ್ರಮ ವಾಸಿಗಳ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ಬೆಂಗಳೂರಿನಲ್ಲಿ ಒಂದೇ ಸಲ ಆರಂಭಿಸಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.