ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?
ಬೆಂಗಳೂರು, ಸೆ. 6: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವರ ಮೇಲೆ ಎಫ್ಐಆರ್ ಹಾಕಲಾಗಿದೆ. ಆದರೆ, ರಾಗಿಣಿ ಅವರ ಆಪ್ತ ಎನ್ನಲಾದ ರವಿಶಂಕರ್ ಹೆಸರು ಮಾತ್ರ ಎಲ್ಲೂ ಪ್ರಸ್ತಾಪಿಸಲಾಗಿಲ್ಲ.
ಬದಲಿಗೆ ಶಿವಶಂಕರ್ ಎಂಬ ಪೆಡ್ಲರ್ ಈ ಪ್ರಕರಣದಲ್ಲಿ ಆರೋಪಿ ನಂ.1 ಎನಿಸಿಕೊಂಡಿದ್ದಾನೆ. ರಾಗಿಣಿ ದ್ವಿವೇದಿ ಎ2, ಫ್ಯಾಷನ್ ಲೋಕದ ಸೆಲೆಬ್ರಿಟಿ, ಪಾರ್ಟಿ ಆಯೋಜಕ ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ 4, ವೈಭವ್ ಜೈನ್ ಎ 5, ಆದಿತ್ಯ ಆಳ್ವ ಎ 6, ಸೆನೆಗೆಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಎ 7, ಸೈಮನ್ ಎ 8, ಪ್ರಶಾಂತ್ ಬಾಬು ಎ 9, ಅಶ್ವಿನ್ ಅಲಿಯಾಸ್ ಬೂಗಿ ಎ 10, ರಾಹುಲ್ ತೋನ್ಸೆ ಎ 11, ವಿನಯ್ ಎ 12 ಎಂದು ಕಾಟನ್ ಪೇಟೆ ಪೊಲೀಸರು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.
ಡ್ರಗ್ಸ್, ಕ್ಯಾಸಿನೋ, ಸಂಜನಾ ಮತ್ತು ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಶಾಸಕನ ನಂಟು
ನಟಿ ರಾಗಿಣಿ ದ್ವಿವೇದಿ ಅವರು ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು ,ಇಂದು ಸಿಸಿಬಿ ವಿಚಾರಣೆ ಮುಂದುವರೆಸಲಿದೆ. ರಾಗಿಣಿ ಅವರ ಡೋಪ್ ಟೆಸ್ಟ್ ವರದಿಗಾಗಿ ಕಾಯಲಾಗುತ್ತಿದ್ದು, ಡ್ರಗ್ ಸೇವನೆ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಇದಾದ ಬಳಿಕ ಹೆಚ್ಚುವರಿ ತನಿಖೆಗಾಗಿ ಕಸ್ಟಡಿ ಅವಧಿ ವಿಸ್ತರಿಸುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಎನ್ ಡಿ ಪಿಎಸ್ ಕಾಯ್ದೆಯಡಿ ಪ್ರಕರಣ
ಎಲ್ಲಾ ಆರೋಪಿಗಳ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆ ಸೆಕ್ಷನ್ 21, 21 ಸಿ, 27 ಎ, 27 ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಪ್ರಕರಣ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 10 ರಿಂದ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು ತನಕ ದಂಡ ವಿಧಿಸಬಹುದು.
ಡ್ರಗ್ಸ್ ತರೆಸಿಕೊಳ್ಳುತ್ತಿದ್ದ ಲೂಮ್ ಪೆಪ್ಪರ್
ಡ್ರಗ್ಸ್ ಪೂರೈಕೆ: ವಿದೇಶದಿಂದ ಡ್ರಗ್ಸ್ ತರೆಸಿಕೊಳ್ಳುತ್ತಿದ್ದ ಲೂಮ್ ಪೆಪ್ಪರ್ ಅದನ್ನು ಇಲ್ಲಿನ ನಟ, ನಟಿಯರು, ಡಿಜೆಗಳು, ಐಟಿ ಉದ್ಯೋಗಿಗಳು, ಅನೇಕ ಸೆಲೆಬ್ರಿಟಿಗಳಿಗೆ ಹಂಚುತ್ತಿದ್ದ. ಈ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಇಲ್ಲಿ ತನಕ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ 7 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ
ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ
ಆದಿತ್ಯ ಆಳ್ವ ನಾಪತ್ತೆ: ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಆದಿತ್ಯ ಅವರ ಸೋದರಿ ಪ್ರಿಯಾಂಕಾ ಅವರು ನಟ ವಿವೇಕ್ ಒಬೆರಾಯ್ ವರಿಸಿದ್ದಾರೆ. ಆದಿತ್ಯ ಆಳ್ವ ಅವರ ಸದಾಶಿವ ನಗರದಲ್ಲಿರುವ ಮನೆ ಸದ್ಯ ಖಾಲಿಯಾಗಿದ್ದು, ಆಳ್ವ ಎಲ್ಲಿದ್ದಾರೆ ಎಂಬುದರ ಮಾಹಿತಿಯಿಲ್ಲ.
ರವಿಶಂಕರ್ ಹೆಸರು ಏಕಿಲ್ಲ
ರವಿಶಂಕರ್ ಹೆಸರು ಏಕಿಲ್ಲ: ಜಯನಗರ ಆರ್ ಟಿಎಯಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಗ ಅಮಾನತುಗೊಂಡಿರುವ ರವಿಶಂಕರ್ ಈ ಪ್ರಕರಣದಲ್ಲಿ ಮೊದಲಿಗೆ ಬಂಧಿತನಾದ ವ್ಯಕ್ತಿ. ಆತನ ಹೇಳಿಕೆ ಆಧಾರದ ಮೇಲೆ ಆತನ ಗೆಳತಿ ನಟಿ ರಾಗಿಣಿ ಬಂಧನವಾಗಿದೆ ಎಂಬ ವರದಿಯಿದೆ. ಆದರೆ, ಎಫ್ಐಆರ್ ನಲ್ಲಿ ರವಿಶಂಕರ್ ಹೆಸರು ನಾಪತ್ತೆಯಾಗಿದೆ. ಸೆನೆಗಲ್ ಮೂಲದ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್(38) ಜೊತೆ ರವಿಶಂಕರ್ ಸಂಪರ್ಕ ಹೊಂದಿದ್ದ. ರಾಹುಲ್ ಜೊತೆಗೂಡಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ರವಿಶಂಕರ್ ನನ್ನು ಇನ್ಫಾರ್ಮರ್ ರೀತಿ ಮಾತ್ರ ಪೊಲೀಸರು ಬಳಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.