ನನಗೆ ಕೊರೊನಾ ಅಟ್ಯಾಕ ಆಗಿದೆ ಎಂದವನಿಗೆ ಪೊಲೀಸರು ಮಾಡಿದ್ದೇನು?
ಬೆಂಗಳೂರು, ಮಾರ್ಚ್ 27: "ನನಗೆ ಕೊರೊನಾ ಬಂದಿದೆ. ಪೊಲೀಸರೇ ಧಮ್ಮಿದ್ರೆ ನನ್ನ ಮುಟ್ಟಿ ನೋಡೋಣ' ಎಂದಿದ್ದ ಯುವಕನನ್ನು ಪೊಲೀಸರು ಹುಚ್ಚಾಸ್ಪತ್ರೆಗೆ ಸೇರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನ ಬೆದರಿಸಿ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊರೊನಾ:ಎಐಎಂಐಎಂ ಶಾಸಕ ಮತ್ತು ಬೆಂಬಲಿಗರಿಂದ ವೈದ್ಯರ ಮೇಲೆ ಹಲ್ಲೆ
ಬುಧವಾರ ರಾತ್ರಿ ಯಶವಂತಪುರದಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಯಶವಂತಪುರದ 1ನೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಯುವಕ, ನನಗೂ ಕೊರೊನಾ ಇದೆ. ಧಮ್ಮಿದ್ರೆ ನನ್ನನ್ನು ಮುಟ್ಟಿ ಎಂದು ಕೂಗಾಡಿದ್ದ. ಪೊಲೀಸರು ಹತ್ತಿರ ಹೋದಾಗ, ಹತ್ತಿರ ಬರಬೇಡಿ. ಮುಟ್ಟಬೇಡಿ. ನಿಮಗೂ ಕೊರೊನಾ ಬರುತ್ತೆ ಎಂದು ಹೆದರಿಸಿದ್ದ.
ಯುವಕನನ್ನು ವಶಕ್ಕೆ ಪಡೆದ ನಮ್ಮ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆತ ಮಾದಕ ದ್ರವ್ಯ ಸೇವಿಸಿದ್ದ ಎಂಬ ಸಂಗತಿ ಗೊತ್ತಾಯಿತು. ಆತ ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.