ಮಾದಕ ವ್ಯಸನಿ ಕೊಟ್ಟ ಕ್ವಾಟ್ಲೆಗೆ ಪೊಲೀಸ್ ವಿರುದ್ಧವೇ ಎಫ್ಐಆರ್ ದಾಖಲು
ಬೆಂಗಳೂರು, ಜು. 30: ಮಾದಕ ವ್ಯಸನ ಆರೋಪದ ಮೇಲೆ ಕರೆ ತಂದಿದ್ದ ವ್ಯಕ್ತಿಯೊಬ್ಬನಿಗೆ ದಿನಪೂರ್ತಿ ಪೋಲೀಸರು ಕ್ವಾಟ್ಲೆ ಕೊಟ್ಟಿದ್ದರು. ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡ ವೇಳೆ ಆ ವ್ಯಕ್ತಿ ಕೊಟ್ಟಿರುವ ಕ್ವಾಟ್ಲೆಯಿಂದ ಪೊಲೀಸ್ ಪೇದೆಯ ವಿರುದ್ಧವೇ ಕೇಸು ದಾಖಲಾಗಿದೆ. ಕೊನೆಗೂ ಕೈಕೋಳ ಸಮೇತ ಎಸ್ಕೇಪ್ ಆಗಿದ್ದ ಮಾದಕ ವಸ್ತು ವ್ಯಸನಿಯನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಹೌದು. ಮಾದಕ ವ್ಯಸನ ಆರೋಪದ ಮೇಲೆ ಠಾಣೆಗೆ ಕರೆತಂದಿದ್ದ ಶಂಕಿತ ಆರೋಪಿ ವೈದ್ಯಕೀಯ ಪರೀಕ್ಷೆ ವೇಳೆ ಕೈಕೋಳ ಸಮೇತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯ ಸುಳಿವು ಸಿಗದ ಕಾರಣ ಆತನನ್ನು ಕರೆದುಕೊಂಡು ಹೋಗಿದ್ದ ಮುಖ್ಯ ಪೇದೆಯ ವಿರುದ್ಧ ಪೊಲೀಸ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ದೂರು ನೀಡಿದ್ದಾರೆ. ಆರೋಪಿ ತಪ್ಪಿಸಿಕೊಳ್ಳಲು ಕಾರಣವಾದ ಮುಖ್ಯಪೇದೆ ಕೇಶವಮೂರ್ತಿ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಮಾದಕ ವ್ಯಸನಿ ಎಂದು ಶಂಕಿಸಿ ಕಿರಣ್ ಕುಮಾರ್ ಎಂಬಾತನನ್ನು ಜೆ.ಸಿ,ನಗರ ಪೊಲೀಸರು ಕರೆತಂದಿದ್ದರು. ವಿಚಾರಣೆಯ ಬಳಿಕ ಬಂಧನ ಪ್ರಕ್ರಿಯೆ ಮುಗಿಸಲು ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದರು. ಮುಖ್ಯಪೇದೆ ಕೇಶವಮೂರ್ತಿ, ಆರೋಪಿ ಕಿರಣ್ ಕುಮಾರ್ ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಶಿವಾಜಿನಗರ ಸಮೀಪ ಕೈಕೋಳ ಸಮೇತ ಕಿರಣ್ ಎಸ್ಕೇಪ್ ಆಗಿದ್ದಾನೆ. ಕೋಳ ಹಿಡಿದುಕೊಂಡಿದ್ದ ಮುಖ್ಯ ಪೇದೆ ಕೇಶವಮೂರ್ತಿಯನ್ನು ಹೊರಗೆ ತಳ್ಳಿ ಪರಾರಿಯಾಗಿದ್ದಾನೆ. ಜೆ.ಸಿ.ನಗರ ಪಿಎಸ್ಐ ರಘುಪತಿ ಕಮರ್ಷಿಯಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Recommended Video
ಎಫ್ಐಆರ್ ದಾಖಲಾದ ಬೆನ್ನಲ್ಲೇ ಪೊಲೀಸರು ಕೈಕೋಳ ಸಮೇತ ಪರಾರಿಯಾಗಿದ್ದ ಕಿರಣ್ ಕುಮಾರ್ನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯ ಪೇದೆ ಕೇಶವಮೂರ್ತಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.