ಬಿಎಂಟಿಸಿ ದುರಾಳ ನೀತಿಯಿಂದ ಇಕ್ಕಟ್ಟಿಗೆ ಸಿಲುಕಿದ ಚಾಲಕ ಮತ್ತು ನಿರ್ವಾಹಕರು!
ಬೆಂಗಳೂರು, ಅ. 16: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಚಯಿಸಿದ್ದ ಹೊಸ ಪಾಳಿ ವ್ಯವಸ್ಥೆಯಿಂದ ಚಾಲಕ ಮತ್ತು ನಿರ್ವಾಹಕರು ದಿನಕ್ಕೆ ಹನ್ನೆರಡು ತಾಸು ದುಡಿದು ಹೈರಾಣ ಆಗುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನದಿಂದಾಗಿ ಬಿಎಂಟಿಸಿ ಖಾಸಗಿ ಕ್ಯಾಬ್ ಗಳಿಗೆ ಲಾಭ ಮಾಡಿಕೊಟ್ಟು ನಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.
ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರಗೆ ಎರಡನೇ ಪಾಳಿ, ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆ ವರೆಗೆ ಜನರಲ್ ಪಾಳಿ, ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ಮೂರನೇ ಪಾಳಿಯನ್ನು ಪರಿಚಯಿಸಿತ್ತು. ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೂರು ಪಾಳಿಯ ಬದಲಿಗೆ ಎರಡು ಪಾಳಿ ಪರಿಚಯಿಸಿತ್ತು. ಹೊಸ ಪಾಳಿ ನೀತಿಯಿಂದಾಗಿ ಚಾಲಕರು ಮತ್ತು ನಿರ್ವಾಹಕರು ಪ್ರತಿ ನಿತ್ಯ ಎಂಟು ತಾಸು ಕೆಲಸದ ಬದಲಿಗೆ ಹನ್ನೆರಡು ತಾಸು ಕೆಲಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಹನ್ನೆರಡು ತಾಸು ದುಡಿಸಿಕೊಂಡರೂ ಐವತ್ತು ರೂಪಾಯಿ ಕೂಡ ಹೆಚ್ಚುವರಿ ಒಂದು ರೂಪಾಯಿ ವೇತನ ನೀಡುತ್ತಿಲ್ಲ!
ಪಾಳಿ ರದ್ದು ಮಾಡಿ ಪಾಪಿ ಕೆಲಸ
ಚಾಲಕ ಮತ್ತು ನಿರ್ವಾಹಕರಿಂದ ಹೆಚ್ಚುವರಿ ಸಮಯ ದುಡಿಸಿಕೊಂಡು ಬಿಎಂಟಿಸಿ ಸಂಸ್ಥೆಯನ್ನು ಶ್ರೀಮಂತಗೊಳಿಸುವ ಕನಸು ಕಟ್ಟಿಕೊಂಡಿರುವ ಅಧಿಕಾರಿಗಳ ಅವೈಜ್ಞಾನಿಕ ನೀತಿಯಿಂದಾಗಿ ಬಿಎಂಟಿಸಿ ಮತ್ತಷ್ಟು ನಷ್ಟದ ಹೊರಗೆ ಸಿಕ್ಕಿ ನಲಗುತ್ತಿದೆ. ಬಿಎಂಟಿಸಿ ಸಿಬ್ಬಂದಿಯು ಹೆಚ್ಚುವರಿ ನಾಲ್ಕು ತಾಸು ಪುಕ್ಕಟ್ಟೆಯಾಗಿ ದುಡಿಯವಂತಾಗಿದೆ. ಇದರ ಎಲ್ಲಾ ಲಾಭ ಊಬರ್, ಓಲಾ ಖಾಸಗಿ ವಾಹನಗಳ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ಬಿಎಂಟಿಸಿ ಅಧಿಕಾರಿಗಳ ಈ ಅವೈಜ್ಞಾನಿಕ ನೀತಿ ವಿರುದ್ಧ ಚಾಲಕರು ಮತ್ತು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ಮೂರು ಪಾಳಿ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಬಿಎಂಟಿಸಿ ಬಸ್ ಸೇವೆ ಆರಂಭವಾಗುತ್ತಿತ್ತು. ಪ್ರತಿ ನಿತ್ಯ 6500 ಬಸ್ ಗಳು ಸಂಚರಿಸುತ್ತಿದ್ದವು. ಮೂರು ಪಾಳಿಯಲ್ಲಿ 35 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದಾಗಿ ಕಡಿಮೆ ಬಸ್ ಗಳಿಂದ ಹೆಚ್ಚು ಟ್ರಿಪ್ ಮಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚು ಸೇವೆ ಜತೆಗೆ ಅಷ್ಟೇ ಪ್ರಮಾಣದಲ್ಲಿ ಹಣವನ್ನು ಸಂಪಾದನೆ ಮಾಡುತ್ತಿತ್ತು.
ಮೊದಲ ಪಾಳಿ ರದ್ದು ಯಾಕೆ?
ಇದೀಗ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಪರಿಚಯಿಸಿದ್ದ ಮೊದಲ ಶಿಫ್ಟ್ ರದ್ದು ಮಾಡಲಾಗಿದೆ. ಬೆಳಗಿನ ಜಾವ ಸಂಚರಿಸುತ್ತದ್ದ ಬಸ್ ಗಳನ್ನು ಅನಿವಾರ್ಯವಾಗಿ ನಿಲ್ಲಿಸಲಾಗಿದೆ. ಬೆಳಗ್ಗೆ ತರಕಾರಿ ಮಾರುಕಟ್ಟೆಗಳಿಗೆ ಹೋಗುವರು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕಾರ್ಖಾನೆಗಳಿಗೆ ಹೋಗುವರು ಬಿಎಂಟಿಸಿ ಬಸ್ ಗಳನ್ನೇ ನಂಬಿ ಕೊಂಡಿದ್ದರು. ಕೊರೊನಾ ನೆಪದಲ್ಲಿ ಬೆಳಗಿನ ಪಾಳಿ ರದ್ದು ಪಡಿಸಿರುವುದರಿಂದ ಅನಿವಾರ್ಯವಾಗಿ ಜನರು ಅನ್ಯ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬಿತರಾಗಿದ್ದು, ಬಿಎಂಟಿಸಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಬಿಎಂಟಿಸಿ ಸಿಬ್ಬಂದಿಯಿಂದ ಹೆಚ್ಚುವರಿ ದುಡಿಮೆಯಿಂದ ಹೆಚ್ಚು ಲಾಭ ಮಾಡುವ ಅಜ್ಞಾನ ಆಲೋಚನೆಯಿಂದಾಗಿ ಬಿಎಂಟಿಸಿ ನಷ್ಟ ಅನುಭವಿಸುವಂತಾಗಿದೆ ಎಂದು ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಬ ಕರ್ಣ ನಿದ್ದೆಯಲ್ಲಿ ಬಿಎಂಟಿಸಿ
ಒಂದು ಪಾಳಿ ಪದ್ಧತಿ ರದ್ದು ಮಾಡುವುದರಿಂದ ಬಿಎಂಟಿಸಿಗೆ ಲಾಭ ಅಗಲ್ಲ. ಬೆಳಗ್ಗೆ ಬಿಎಂಟಿಸಿ ಬಸ್ ಗಳು ಸಂಚಾರ ಮಾಡದ ಕಾರಣ ಓಲಾ, ಊಬರ್ ಮತ್ತು ಆಟೋಗಳ ಓಡಾಟ ಜಾಸ್ತಿಯಾಗಿದೆ. ಬಹುತೇಕ ಪ್ರಯಾಣಿಕರು ಅನಿವಾರ್ಯವಾಗಿ ಸ್ವಂತ ವಾಹನ ಮೊರೆ ಹೋಗುವಂತಾಗಿದೆ. ಇದರಿಂದ ಬೆಳಗ್ಗೆ ಎಲ್ಲಾ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ವೇಳೆ ಟ್ರಾಫಿಕ್ ಜಾಮ್ ಆಗಲು ಬಿಎಂಟಿಸಿ ಅಧಿಕಾರಿಗಳ ದುರಾಡಳಿತವೇ ಕಾರಣ. ಕೊರೊನಾ ಸೋಂಕು ತೀರಾ ಕಡಿಮೆಯಾಗಿದೆ. ಎಲ್ಲಾ ಸೇವೆ ಶೇ. 100 ರಷ್ಟ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಆದರೆ ಬಿಎಂಟಿಸಿ ಅಧಿಕಾರಿಗಳು ಕೊರೊನಾ ನೆಪದಲ್ಲಿ ಇನ್ನೂ ಕುಂಭಕರ್ಣ ನಿದ್ದೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಜತೆಗೆ ಅರ್ಥಿಕವಾಗಿ ಬಿಎಂಟಿಸಿಗೆ ನಷ್ಟವಾಗುತ್ತಿದೆ. ಒಂದು ವಾಹನ ಅತಿ ಹೆಚ್ಚು ಸಲ ಸಂಚರಿಸಿದರೆ ಮಾತ್ರ ಹೆಚ್ಚು ಲಾಭ ಗಳಿಸಲು ಸಾಧ್ಯ ಎಂಬ ಮೂಲ ಸತ್ಯವನ್ನೇ ಅರಿತುಕೊಳ್ಳುವಲ್ಲಿ ಬಿಎಂಟಿಸಿ ಅಧಿಕಾರಿಗಳು ವಿಫಲರಾಗಿದ್ದಾರೆ.
ನಾಲ್ಕು ತಾಸು ಹೆಚ್ಚುವರಿ ದುಡಿಮೆ
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದ ಬಿಎಂಟಿಸಿ ಸಿಬ್ಬಂದಿಯ ಮೇಲೆ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ದಿನಕ್ಕೆ ನಾಲ್ಕು ತಾಸು ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಿದೆ. ಬೆಳಗ್ಗೆ ಹತ್ತು ಗಂಟೆಗೆ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದರೆ ರಾತ್ರಿ ಹತ್ತು ಗಂಟೆಗೆ ಮನೆಗೆ ಹೋಗಬೇಕು. ಇನ್ನು ಬಸ್ ಎಲ್ಲಿ ನಿಲ್ಲುತ್ತದೆಯೋ ಅಲ್ಲಿಂದಲೇ ಮನೆಗೆ ತೆರಳಬೇಕು. ಗಣನೀಯವಾಗಿ ಬಸ್ ಗಳ ಸಂಖ್ಯೆಯನ್ನು ಬಿಎಂಟಿಸಿ ಸ್ಥಗಿತಗೊಳಿಸಿರುವುದರಿಂದ ದೂರದಿಂದ ಬರುವ ಚಾಲಕ ಮತ್ತು ನಿರ್ವಾಹಕರು ಮನೆ ಸೇರಲು ಪರದಾಡುವಂತಾಗಿದೆ. ಅದರಲ್ಲೂ ಮನೆಯಲ್ಲಿ ಕೆಲಸ ಮಾಡಿ 12 ತಾಸು ಕೆಲಸ ಮಾಡಲು ಆಗದೇ ಬಿಎಂಟಿಸಿ ಮಹಿಳಾ ಸಿಬ್ಬಂದಿ ಒತ್ತಡಕ್ಕೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ನಾಲ್ಕು ತಾಸು ಹೆಚ್ಚುವರಿ ದುಡಿಸಿಕೊಂಡರೂ ಅದಕ್ಕೆ ಐದು ರೂಪಾಯಿ ಕೂಡ ಹೆಚ್ಚುವರಿ ವೇತನ ನೀಡುತ್ತಿಲ್ಲ. ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಕೆಲಸದ ಅವಧಿ ವಿಚಾರದಲ್ಲಿ ಕಾರ್ಮಿಕ ಕಾನೂನುಗಳನ್ನು ಬೆಂಗಳೂರು ಮಹಾನಗರ ಸಂಸ್ಥೆ ಉಲ್ಲಂಘನೆ ಮಾಡುತ್ತಿದೆ. ಬಿಎಂಟಿಸಿ ಈ ನಿರ್ಧಾರದಿಂದಾಗಿ ಚಾಲಕರು ಮತ್ತು ನಿರ್ವಾಹಕರು ಕಂಗಾಲಾಗಿದ್ದಾರೆ.
ಬಲವಂತದ ರಜೆಗಳು, ಡ್ಯೂಟಿ ಕಡಿತ
ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 35 ಸಾವಿರ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡಿದರೆ ಯಾವುದೇ ತೊಂದರೆಯಾಗಲ್ಲ. ಬೆಂಗಳೂರಿನಾದ್ಯಂತ ಬಡವರು ಸುಖಕರ ಪ್ರಯಾಣ ಮಾಡಲು ಸಾಧ್ಯ. ಎರಡು ಪಾಳಿ ಮಾಡಿರುವುದರಿಂದ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಕರ್ತವ್ಯವೇ ಸಿಗುತ್ತಿಲ್ಲ. ಅಗತ್ಯ ಬಸ್ ಗಳಿಗೆ ಬಿಎಂಟಿಸಿ ಸಿಬ್ಬಂದಿ ತುಂಬಿದ ಮೇಲೆ ಕರ್ತವ್ಯಕ್ಕೆ ಹಾಜರಾಗುವರಿಗೆ ಬಲವಂತವಾಗಿ ರಜೆ ಮೇಲೆ ಕಳಿಸಲಾಗುತ್ತಿದೆ. ರಜೆ ಇಲ್ಲದ ಚಾಲಕ ಮತ್ತು ನಿರ್ವಾಹಕರಿಗೆ ವೇತನ ಕಡಿತ ಷರತ್ತಿನೊಂದಿಗೆ ಮನೆಗೆ ಕಳುಹಿಸಲಾಗುತ್ತಿದೆ. ಇದು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಲ್ಲಿ ಮತ್ತೆ ಆಕ್ರೋಶ ಮನೆ ಮಾಡಲು ಕಾರಣವಾಗಿದೆ.
ಹೋರಾಟದ ಬಗೆಗಿನ ಸಿಟ್ಟು
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಹೋರಾಟ ನಡೆಸಿದ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ತೀರ್ಮಾನದಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರವೇ ಸ್ಥಗಿತಗೊಂಡಿತ್ತು. ಇದರಿಂದಾಗಿ ಬಿಎಂಟಿಸಿ ಮೇಲಾಧಿಕಾರಿಗಳು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಆ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಕಷ್ಡಿರುವ ಬಿಎಂಟಿಸಿ ಅಧಿಕಾರಿಗಳು ಇದೀಗ ಕೊರೊನಾ ಹೆಸರಿನಲ್ಲಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ನಾನಾ ತರಹದ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಾಳಿ ರದ್ದು ಮಾಡಿ ಬಿಎಂಟಿಸಿ ಸಿಬ್ಬಂದಿ ದಿನ ನಿತ್ಯ ನಾಲ್ಕು ತಾಸು ವೇತನ ವಿಲ್ಲದೇ ದುಡಿಯುವ ಸಿಬ್ಬಂದಿ ಮತ್ತೊಂದೆಡೆ ಬಲವಂತದ ರಜೆ ತೆಗೆದುಕೊಂಡು ತಿಂಗಳ ಸಂಬಳದಲ್ಲಿ ಕಡಿತ ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
Recommended Video