ಒಕ್ಕಲಿಗರ ಸಂಘ : ಅಪ್ಪಾಜಿಗೌಡಗೆ ಮತ್ತೆ ಪಟ್ಟ ಸಾಧ್ಯತೆ!
ಬೆಂಗಳೂರು, ಫೆಬ್ರವರಿ 04 : ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ಅಕ್ರಮಗಳ ವಿರುದ್ಧ ಸಿಡಿದೆದ್ದ ಪ್ರೊ.ನಾಗರಾಜ್ ಅವರು ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡರಿಗೆ ಬೆಂಬಲ ಪ್ರಕಟಿಸುವದರೊಂದಿಗೆ ಬೃಹನ್ನಾಟಕ ಮತ್ತೊಂದು ಅಧ್ಯಾಯ ಸಂಘದಲ್ಲಿ ಆರಂಭವಾಗಿದೆ.
ಬೆಟ್ಟೇಗೌಡರ ಹಿನ್ನೆಲೆ ನಮಗೆ ಗೊತ್ತಿಲ್ಲದೇ ಅವರಿಗೆ ಬೆಂಬಲ ನೀಡಿದ್ದೆವು. ಖಾಸಗಿ ಟೀವಿ ಅವರ ಬಗ್ಗೆ ಸಮಗ್ರ ಮಾಹಿತಿ ನೀಡಿದೆ. ಅವರು ನನಗೆ ಕಾರ್ಯದರ್ಶಿ, ಖಜಾಂಚಿ ಇತ್ಯಾದಿ ಆಫರ್ ನೀಡಿದ್ದರು. ಆದರೆ ಸುಳ್ಳು ಹೇಳಿದರೇ ಹೊರತು ಏನೂ ಮಾಡಲಿಲ್ಲ. ಆತ್ಮಾಭಿಮಾನಕ್ಕೆ ದ್ರೋಹ ಆಗಿದ್ದರಿಂದ ಹೊರಗೆ ಬಂದಿದ್ದೇನೆ ಎಂದು ನಾಗರಾಜ್ ಆಕ್ರೋಶದಿಂದ ಹೇಳಿದರು.[ಬ್ರೇಕಿಂಗ್ - ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಪದಚ್ಯುತಿ]
ಅಪ್ಪಾಜಿಗೌಡ ಅವರಿಗೆ ಸಮುದಾಯದಲ್ಲಿ ಇರುವ ಮಾನ್ಯತೆ, ಅವರ ಜನಪ್ರಿಯತೆ ಹಾಗೂ ಅವರ ಕಾರ್ಯ ನಿರ್ವಹಣೆಯ ಕುರಿತು ಸಹಿಸಿಕೊಳ್ಳದೆ ಅವರನ್ನು ಕುತಂತ್ರದಿಂದ ರಾಜ್ಯ ಒಕ್ಕಲಿಗರ ಸಂಘದಿಂದ ಕೆಳಗಿಳಿಸಲಾಗಿತ್ತು. ಆದ್ದರಿಂದ ಬೆಟ್ಟೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಕೆಳಕ್ಕೆ ಇಳಿಸಲಾಗಿದೆ ಎಂದರು.
ಡಾ.ಅಪ್ಪಾಜಿಗೌಡರ ಹಾದಿ ಸುಗಮವಾಗಿದ್ದು, ಮತ್ತೆ ಆಯ್ಕೆಯಾಗುವ ಸಂಭವನೀಯತೆ ಇದೆ. ಸಂಘದ ಒಟ್ಟು ಹದಿನೆಂಟು ನಿರ್ದೇಶಕರು ಬೆಟ್ಟೇಗೌಡರ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಜನವರಿ 6ರಂದು ಅಪ್ಪಾಜಿಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಲಾಗಿತ್ತು.
ಬಿಡಿಎನಲ್ಲಿ ಈಗಾಗಲೇ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಿದ ಬೆಟ್ಟೇಗೌಡ ಸಂಘದ ಜಮೀನು ಹೊಡೆಯಲು ಸಂಚು ಹೂಡಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಪ್ಪಾಜಿಗೌಡರ ವಿರುದ್ಧ ಕುತಂತ್ರ ಮಾಡಿದ್ದರು ಎಂದು ಅವರು ಆರೋಪಿಸಿದರು.
ಸಂಘದ ನರ್ಸಿಂಗ್ ಕಾಲೇಜಿನಲ್ಲಿ ಹಾಲಿ ಅಧ್ಯಕ್ಷ ಬೆಟ್ಟೇಗೌಡ ನಡೆಸಿದ ಅಕ್ರಮ ಗೊತ್ತಾಗುತ್ತಿದ್ದಂತೆ ಬಹುತೇಕ ನಿರ್ದೇಶಕರು ಬೆಟ್ಟೇಗೌಡರ ಬಣದಿಂದ ಹೊರಬಂದಿದ್ದಾರೆ.