ಬಡವರಿಗೆ ಉಚಿತ ಕೋವಿಡ್ ಚಿಕಿತ್ಸೆ ನೀಡುತ್ತಿರುವ ಡಾ. ಸುನೀಲ್ ಕುಮಾರ್ ಹೆಬ್ಬಿ
ಬೆಂಗಳೂರು, ಮೇ. 14: ಕೊರೊನಾ ಎರಡನೇ ಅಲೆ ಪರಿಸ್ಥಿತಿ ಬಳಸಿಕೊಂಡು ಹಣ ಮಾಡುವ ವೈದ್ಯಲೋಕದಲ್ಲಿ ಒಬ್ಬ ನಿಷ್ಠಾವಂತ ವೈದ್ಯ ಮನೆ - ಮನೆಗೆ ತೆರಳಿ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಕೊರೊನಾ ಸೋಂಕಿತರ ಮನೆಗೆ ತೆರಳಿ ಪ್ರಥಮ ಚಿಕಿತ್ಸೆಯನ್ನು ಉಚಿತವಾಗಿ ನೀಡಿ ವೈದ್ಯ ನಾರಾಯಣೋ ಹರಿ ಎಂಬ ನುಡಿಗಟ್ಟಿಗೆ ಹೊಸ ಅರ್ಥವನ್ನು ಕಲ್ಪಿಸಿದ್ದಾರೆ. ಈವರೆಗೂ 720 ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿ ಬರೋಬ್ಬರಿ 35 ಸಾವಿರ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲೂ ತನ್ನ ವೈದ್ಯ ಸೇವೆಯನ್ನು ಮುಂದುವರೆಸುವ ಮೂಲಕ ಬಡವರ ಪಾಲಿನ ಜೀವದಾತ ಎನಿಸಿಕೊಂಡಿದ್ದಾರೆ.
ಇವರ ಹೆಸರು ಸುನೀಲ್ ಕುಮಾರ್ ಹೆಬ್ಬಿ, ಮಾತೃ ಸಿರಿ ಸಂಸ್ಥಾಪಕ." ಸೇವ್ ಲೈಫ್ - ಅಚೀವ್ ಮೆಂಟ್ " ಎಂಬ ತತ್ವದಲ್ಲಿ ನಿಷ್ಠೆಯಿಟ್ಟುಕೊಂಡು ಬೆಂಗಳೂರಿನ ಬಡವರ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ. 2007 ರಲ್ಲಿ ಮಾತೃ ಸಿರಿ ಎಂಬ ಫೌಂಡೇಷನ್ ಸ್ಥಾಪಿಸಿರುವ ಡಾ. ಸುನೀಲ್ ಕುಮಾರ್ ಹೆಬ್ಬಿ ಕಾರನ್ನೇ ಮಿನಿ ಆಸ್ಪತ್ರೆಯನ್ನಾಗಿ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಬರುವವರಿಗೆ ಚಿಕಿತ್ಸೆ ನೀಡುವ ಬದಲಿಗೆ ಅವರೇ ಮನೆಗಳಿಗೆ ಹೋಗಿ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ. ಬಡವರು ವಾಸಿಸುವ ಕಾಲೋನಿಗಳಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಆಯೋಜನೆ ಮಾಡುತ್ತಾರೆ. ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಹೀಗೆ ಬೆಂಗಳೂರಿನ ಮೂಲೆ ಮೂಲೆ ಸಂಚರಿಸಿ ವೈದ್ಯ ಸೇವೆಯನ್ನು ನೀಡುತ್ತಿದ್ದಾರೆ.
ಅಂದಹಾಗೆ ಈ ಸುನೀಲ್ ಕುಮಾರ್ ಹೆಬ್ಬಿ ಕಾರಿನಲ್ಲಿಯೇ ಥರ್ಮಾ ಮೀಟರ್, ಗ್ಲೂಕೋ ಮೀಟರ್, ಇಸಿಜಿ ಮಿಷನ್, ಫೋಲ್ಡಿಂಗ್ ಟೇಬಲ್ ಮತ್ತು ಚೇರ್ ಇಟ್ಟುಕೊಂಡಿದ್ದಾರೆ. ಇದೀಗ ಕೊರೊನಾ ಎರಡನೇ ಅಲೆ ಅಬ್ಬರಿಸಿದ್ದು ಬಡವರು ಚಿಕಿತ್ಸೆಯಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಬೆಂಗಳೂರಿನ ಮೂಲೆ ಮೂಲೆ ಸಂಚರಿಸಿ ಬಡವರಿಗೆ ಉಚಿತವಾಗಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಸುಮಾರು 35 ಸಾವಿರ ಮಂದಿಗೆ ಉಚಿತ ಚಿಕಿತ್ಸೆ ನೀಡಿರುವುದಾಗಿ ಅವರು ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
Recommended Video
ನಮ್ಮ ದೇಶದಲ್ಲಿ ವೈದ್ಯಕೀಯ ಸೇವೆ ವ್ಯಾಪಾರ ಆಗಿದೆ. ಒಬ್ಬ ಜವಾಬ್ಧಾರಿಯುತ ವೈದ್ಯನಾಗಿ ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ವೈದ್ಯಕೀಯ ಸೇವೆ ಮಾನವೀಯ ಸೇವೆಯಾಗಿರಬೇಕು ಎಂಬುದು ನನ್ನ ವೈಯಕ್ತಿಯ ಅಭಿಪ್ರಾಯ. ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಬಡವರು, ಶ್ರೀಮಂತರು ಎಲ್ಲರೂ ಪರದಾಡುತ್ತಿದ್ದಾರೆ. ಈ ಸಂಕಷ್ಟ ಕಾಲದಲ್ಲಿ ಜನರು ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ಎದುರಾಗಿದೆ. ಇಂಥ ಸಂಕಷ್ಟ ಕಾಲದಲ್ಲಿ ನಾನೇ ಜನರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದೇನೆ ಎನ್ನುತ್ತಾರೆ ಸುನೀಲ್ ಕುಮಾರ್ ಹೆಬ್ಬಿ. ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುತ್ತಿರುವ ಆಸ್ಪತ್ರೆಗಳಿಗೆ ವೈದ್ಯ ಲೋಕದಲ್ಲಿ ಸುನೀಲ್ ಕುಮಾರ್ ತನ್ನ ಕೈಲಾದ ಸೇವೆ ಮಾಡುವ ಮೂಲಕ ಮಾದರಿ ವೈದ್ಯ ಎನಿಸಿಕೊಂಡಿದ್ದಾರೆ.