ಡಾ.ರಾಜ್ ಪ್ರತಿಮೆ ಸ್ಥಾಪಿಸಿದವರೆ ಬೆಂಕಿ ಇಟ್ಟರುǃ
ಬೆಂಗಳೂರು, ನ. 16 : ಪ್ರತಿಮೆ ಭಗ್ನ ಮಾಡಿದವರೂ ಇವರೆ, ಪ್ರತಿಭಟನೆ ನಡೆಸಿದವರೂ ಇವರೆ! ಪೊಲೀಸರಿಗೆ ಅನುಮಾನ ಬರಬಾರದೆಂದು ಕನ್ನಡ ಪರ ಘೋಷಣೆ ಕೂಗುತ್ತಾ ದಾರಿ ಮಧ್ಯೆ ಬೆಂಕಿ ಹಚ್ಚಿ 'ಕನ್ನಡಾಭಿಮಾನ' ಪ್ರದರ್ಶಿಸಿದವರು ಇವರೆ!... ಅಲ್ಲದೇ ಮೂರ್ತಿ ಸ್ಥಾಪನೆಗೆ ದುಡಿದಿದ್ದವರೂ ಇವರೆ!
ಹೌದು... ನಾವು ಹೇಳುತ್ತಿರುವುದು ಬೆಂಗಳೂರು ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದ ಡಾ. ರಾಜ್ ಕುಮಾರ್ ಪ್ರತಿಮೆ ಬೆಂಕಿ ಇಟ್ಟ ದುಷ್ಕರ್ಮಿಗಳ ಬಗ್ಗೆ. ರಾಜರಾಜೇಶ್ವರಿ ನಗರದ ಡಾ. ರಾಜ್ ಕುಮಾರ್ ಪ್ರತಿಮೆ ಭಗ್ನ ಪ್ರಕರಣಕ್ಕೆ ಸಂಬಂಧಿಸಿ 5 ಜನರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ವೇಳೆ ಅನೇಕ ಮಾಹಿತಿ ಬಾಯಿ ಬಿಟ್ಟಿದ್ದಾರೆ.[ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳುವುದೇನು?]
ಬಂಗಾರಪ್ಪ ನಗರದ ನಿವಾಸಿಗಳಾದ ಮುತ್ತುರಾಜ್ (31), ಪ್ರದೀಪ್ ಕುಮಾರ್ (25), ಎಸ್.ಚೇತನ್ ರಾವ್ (22), ರವಿಕಿರಣ್ (19) ಮತ್ತು ಮಂಜುನಾಥ್ (19) ಬಂಧಿತ ಆರೋಪಿಗಳು.
ನಿಗದಿಯಂತೆ ನವೆಂಬರ್ 23ಕ್ಕೆ ರಾಜ್ ಪ್ರತಿಮೆ ಅನಾವರಣ ನಡೆಯಬೇಕಿತ್ತು. ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ಸಹ ಮುದ್ರಣ ಮಾಡಿಸಲಾಗಿತ್ತು. ಸ್ಥಳೀಯ ಮುಖಂಡ ಮೋಹನ್ ಕುಮಾರ್ ಎಂಬುವರ ಹೆಸರನ್ನು ಫೋಟೋ ಸಮೇತ ಮುದ್ರಣ ಮಾಡಲಾಗಿತ್ತು. ಆದರೆ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕದಿರುವುದಕ್ಕೆ ಆರೋಪಿಗಳಾದ ಮುತ್ತುರಾಜ್, ಪ್ರದೀಪ್ ಕುಮಾರ್ ಕೆರಳಿದ್ದರು. ಅಲ್ಲದೇ ಬೇರೆ ಏರಿಯಾದ ಶ್ರೀನಿವಾಸ್ ಡಾ. ರಾಜ್ ಸೇವಾ ಸಮಿತಿ ಹೆಸರಲ್ಲಿ ನಾಯಕರಾಗಿ ಬೆಳೆಯುತ್ತಿರುವುದು ದ್ವೇಷ ಹೊತ್ತಿಸಿತ್ತು.[ಸ್ವುಸುಗತ - ಆಹಾ ಕನ್ನಡತಾಯೇ ನೀನು ಧನ್ಯಳು!]
ಆಮಂತ್ರಣ ಪತ್ರಿಕೆ ಮತ್ತು ಫ್ಲೆಕ್ಸ್ ಗಳಲ್ಲಿ ಹೆಸರು ಹಾಕದಿರುವುದನ್ನೇ ಕಾರಣ ಮಾಡಿಕೊಂಡ ಆರೋಪಿಗಳು ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕಲು, ಸೇವಾ ಸಮಿತಿಯ ಹೆಸರಿಗೆ ಮಸಿ ಬಳಿಯಲು ಸಂಚು ರೂಪಿಸಿ ನವೆಂಬರ್ 13 ರಂದು ರಾತ್ರಿ ಪ್ರತಿಮೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಳಗ್ಗೆ ಏನೂ ಗೊತ್ತಿಲ್ಲದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಪರಾಧ ವಿಭಾಗದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ , ಜಂಟಿ ಪೊಲೀಸ್ ಆಯುಕ್ತ ಶರತ್ಚಂದ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಪಶ್ಚಿಮ ವಿಭಾಗ ಉಪ ಪೊಲೀಸ್ ಕಮೀಷನರ್ ಲಾಬೂರಾಮ್, ಸತ್ಯನಾರಾಯಣ್.ಎನ್.ಕುದೂರ್, ರಾಜರಾಜೇಶ್ವರಿನಗರ ಪಿಎಸ್ ಐ.ಟಿ.ಮಂಜುನಾಥ್ ವಹಿಸಿದ್ದರು.