ರಾಜ್ ಕುಟುಂಬದಿಂದ ಐಎಎಸ್ ತರಬೇತಿ ಕೇಂದ್ರ, ಸಿದ್ದು ಉದ್ಘಾಟನೆ
ಬೆಂಗಳೂರು, ಫೆಬ್ರವರಿ 9: ಡಾ. ರಾಜ್ ಕುಮಾರ್ ಕುಟುಂಬದಿಂದ ಐಎಎಸ್ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಮಾರ್ಚ್ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೇಂದ್ರ ಉದ್ಘಾಟನೆ ಮಾಡಲಿದ್ದಾರೆ.
ಡಾ. ರಾಜ್ ಕುಮಾರ್ ಟ್ರಸ್ಟ್ ವತಿಯಿಂದ ಚಂದ್ರ ಲೇಜೌಟಿನಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರವನ್ನು ಡಾ. ರಾಜ್ ಕುಟುಂಬ ಸ್ಥಾಪಿಸಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಘವೇಂದ್ರ ರಾಜಕುಮಾರ್ ಗುರುವಾರ ಆಹ್ವಾನಿಸಿದರು. ತರಬೇತಿ ಕೇಂದ್ರವು ಮಾರ್ಚ್ 5ರಂದು ಉದ್ಘಾಟಿಸುವ ವಿಷಯವಾಗಿ ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ತರಬೇತಿ ಕೇಂದ್ರ ಉದ್ಘಾಟನೆಯಾಗಬೇಕು ಎಂಬು ಪಾರ್ವತಮ್ಮ ರಾಜ್ ಕುಮಾರ್ ಅವರ ಆಶಯವಾಗಿದೆ ಎನ್ನಲಾಗಿದ್ದು, ಐಎಎಸ್/ಐಪಿಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳಿಗೆ ಸೇರಬಯಸುವ ಅಭ್ಯರ್ಥಿಗಳಿಗಾಗಿ ಪರೀಕ್ಷೆ ಎದುರಿಸಲು ಅಗತ್ಯವಿರುವ ತರಬೇತಿಯನ್ನು ತಜ್ಞರಿಂದ ನೀಡಲು ಡಾ.ರಾಜ್ಕುಮಾರ್ ಕುಟುಂಬ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದೆ.
ಕರ್ನಾಟಕದ ಶ್ರೇಷ್ಠ ನಟ ರಾಜ್ ಕುಮಾರ್ ಅವರ ಕುಟುಂಬದಿಂದ ಸಮಾಜಕ್ಕೆ ಏನು ಆಗಿಲ್ಲ ಎಂದು ಹೇಳುತ್ತಿರುವವರಿಗೆ ಇದು ತಕ್ಕ ಉತ್ತರವಾಗಲಿದೆಯೇ ಎಂಬುದು ತರಬೇತಿ ಕೇಂದ್ರ ಮಾಡುವ ಸಾಧನೆಯ ಮೇಲೆ ನಿಂತಿದೆ ಎನ್ನಬಹುದು.