ಹೃದ್ರೋಗ ತಜ್ಞ ಡಾ.ಮಂಜುನಾಥ್ ಹೇಳಿದ ಹೃದಯದ ಕತೆ-ವ್ಯಥೆ
ಬೆಂಗಳೂರು, ಜನವರಿ 04: ಪ್ರಧಾನಿ ಮೋದಿ ಅವರಿಂದ ಶುಕ್ರವಾರ ಉದ್ಘಾಟಿತಗೊಂಡ ನಗರದ ಕೃಷಿ ವಿವಿ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್ನ ಎರಡನೇ ದಿನ ಜಯದೇವ ಆಸ್ಪತ್ರೆ ನಿರ್ದೇಶಕ, ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರ ಉಪನ್ಯಾಸ ಪ್ರಮುಖ ಆಕರ್ಷಣೆಯಾಗಿತ್ತು.
ಕಿಕ್ಕಿರದು ತುಂಬಿದ್ದ ದೊಡ್ಡ ಸಭಾಂಗಣದಲ್ಲಿ ಮಂಜುನಾಥ್ ಅವರು ಹೃದ್ರೋಗದ ಲಕ್ಷಣಗಳು, ಹೃದ್ರೋಗ ತಡೆಯುವ ವಿಧಾನಗಳು, ಜೀವನ ಶೈಲಿಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಇನ್ನೂ ಹಲವು ಹೃದಯ ಸಂಬಂಧಿ ವಿಷಯಗಳನ್ನು ಅತ್ಯಂತ ಸಾಮಾನ್ಯರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಹೇಳಿದರು.
ಹೃದಯ ಖಾಯಿಲೆ, ಹೃದಯಾಘಾತಕ್ಕೆ ಸಾಮಾನ್ಯ ಕಾರಣಗಳನ್ನು ಪಟ್ಟಿ ಮಾಡಿದ ವೈದ್ಯ ಮಂಜುನಾಥ್, ಧೂಮಪಾನ, ಅತಿಯಾದ ಒತ್ತಡ, ಕುಟುಂಬ ಹಿನ್ನೆಲೆ, ಕೊಲೆಸ್ಟ್ರಾಲ್ ಹೆಚ್ಚಿಸುವ ಶಿಸ್ತಿಲ್ಲದ ಆಹಾರ ಪದ್ಧತಿ, ಅಧಿಕ ರಕ್ತದೊತ್ತಡ, ಆಲಸಿ ಜೀವನ ಪದ್ಧತಿ ಹೀಗೆ ಕೆಲವು ಪ್ರಮುಖ ಕಾರಣಗಳನ್ನು ಮುಂದಿಟ್ಟರು.
ಹೃದಯಾಘಾತ ಬರುವುದು ಗುರುತಿಸುವುದು ಅಥವಾ ಹೃದಯ ಸಂಬಂಧಿ ಖಾಯಿಲೆಯನ್ನು ಗುರುತಿಸುವುದು ಹೇಗೆ ಎಂಬ ಪ್ರಮುಖ ವಿಷಯದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ ವೈದ್ಯ ಮಂಜುನಾಥ್, ಎದೆನೋವು ಹೃದಯ ಸಮಸ್ಯೆಯ ಸಾಮಾನ್ಯ ಲಕ್ಷಣ ಅದರ ಜೊತೆಗೆ ಅತಿಯಾದ ಬೆವರುವಿಕೆ, ನಡೆದಾಡಿದಾಗ ಅಥವಾ ಮೆಟ್ಟಿಲು ಹತ್ತುವಾಗ ಎದೆಯಲ್ಲಿ ನೋವು ಹೆಚ್ಚಾಗುವುದು, ಎದೆಯ ಎಡಭಾಗ ಅಥವಾ ಮಧ್ಯ ಭಾಗ ನೋವು ಬರುವುದು ಇವು ಸಾಮಾನ್ಯವಾಗಿ ಹೃದಯ ಖಾಯಿಲೆ ಅಥವಾ ಹೃದಯಾಘಾತವನ್ನು ಮೊದಲೇ ಗುರುತಿಸುವ ಸರಳ ವಿಧಾನ.
ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಎಚ್ಚೆತ್ತುಕೊಳ್ಳಿ
ಇದನ್ನು ಹೊರತುಪಡಿಸಿ ದವಡೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುವುದು, ಹೊಟ್ಟೆ ನೋವು ಮತ್ತು ವಾಂತಿ ಈ ರೀತಿಯ ಕೆಲವು ಲಕ್ಷಗಳೂ ಸಹ ಹೃದಯ ಸಮಸ್ಯೆ ಇದ್ದವರಿಗೆ ಕಾಣಿಸಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ಮಾದರಿಯ ಲಕ್ಷಣಗಳು ಹೃದಯ ಖಾಯಿಲೆಯ ಲಕ್ಷಣಗಳಿ ಸ್ವಲ್ಪವೇ ಸೂಕ್ಷ್ಮ ವ್ಯತ್ಯಾಸ ಇರುತ್ತದೆ ಎನ್ನುತ್ತಾರೆ ತಜ್ಞ ವೈದ್ಯ ಮಂಜುನಾಥ್ ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಸಹ ಅಲಕ್ಷಿಸುವುದು ಸರಿಯಲ್ಲ, ಅದು ಹೃದಯ ಸಮಸ್ಯೆಯೂ ಆಗಿರಬಹುದು ಎನ್ನುತ್ತಾರೆ ತಜ್ಞ ವೈದ್ಯ ಮಂಜುನಾಥ್.
ಇಸಿಜಿ ಜೊತೆ ಟ್ರೆಡ್ಮಿಲ್ ಟೆಸ್ಟ್ ಅತ್ಯವಶ್ಯಕ
ಈ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ಆಸ್ಪತ್ರೆಗೆ ಧಾವಿಸಿ ಇಸಿಜಿ ಜೊತೆಗೆ ಟ್ರೆಡ್ಮಿಲ್ ಟೆಸ್ಟ್ ಸಹ ತಪ್ಪದೇ ಮಾಡಿಸಬೇಕು. ಕೆಲವೊಮ್ಮೆ ಇಸಿಜಿ ಸಾಮಾನ್ಯವಾಗಿರುತ್ತದೆ ಆದರೆ ಟ್ರೆಡ್ಮಿಲ್ ಟೆಸ್ಟ್ ಮಾಡಿಸಿದಾಗ ಹೃದಯ ಸಮಸ್ಯೆ ಇರುವುದು ಗೊತ್ತಾಗುತ್ತದೆ. ಹಾಗಾಗಿ ಎರಡೂ ಪರೀಕ್ಷೆ ತಪ್ಪದೆ ಮಾಡಿಸಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.
ಹೃದ್ರೋಗ ಬರದಂತೆ ತಡೆಯುವ ಸರಳ ವಿಧಾನ
ಹೃದಯರೋಗ ಅಥವಾ ಹೃದಯಾಘಾತ ಬರದೇ ತಡೆಯುವ ವಿಧಾನಗಳು ಅತ್ಯಂತ ಸುಲಭ ಮತ್ತು ಸರಳ ಎನ್ನುವ ಮಂಜುನಾಥ್, 'ಪ್ರತಿನಿತ್ಯ ಒಂದು ಗಂಟೆ ವಾಕಿಂಗ್ ಅಥವಾ ಜಾಗಿಂಗ್ ಮಾಡಿ ಸಾಕು, ದಿನಕ್ಕೆ ಒಂದು ಗಂಟೆ ಹೃದಯಕ್ಕಾಗಿ ನೀವು ನಡೆದರೆ, ಜೀವನ ಪೂರ್ತಿ ನೀವು ನಡೆದಾಡುವಂತೆ ಹೃದಯ ಮಾಡುತ್ತದೆ ಎಂದರು. ನಿಯಮಿತ ವ್ಯಾಯಾಮದಿಂದ ಹೃದಯ ಸಮಸ್ಯೆ ಜೊತೆಗೆ ಸಕ್ಕರೆ ಖಾಯಿಲೆ, ಪಾರ್ಶ್ವ ವಾಯು ಇನ್ನೂ ಹಲವು ಸಮಸ್ಯೆಗಳು ಬರದಂತೆ ತಡೆಯಬಹುದು ಎಂದರು ಮಂಜುನಾಥ್.
ಭಾರತದಲ್ಲಿ ಹೃದಯಾಘಾತ ವೇಗವಾಗಿ ವ್ಯಾಪಿಸುತ್ತಿರುವ ಸಮಸ್ಯೆ
ಭಾರತದಲ್ಲಿ ಹೃದಯಾಘಾತ ಎಂಬುದು ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಸಮಸ್ಯೆ, ಮುಂಚೆ ಇದ್ದ ವಯಸ್ಸಿನ ಗಡಿಯನ್ನು ಈಗಿದು ದಾಟಿಬಿಟ್ಟಿದೆ, ಜಯದೇವಾ ಆಸ್ಪತ್ರೆ ಒಂದರಲ್ಲಿಯೇ ತಿಂಗಳಿಗೆ 150 ಮಂದಿ 25-35 ವರ್ಷದೊಳಗಿನ ಯುವಕರು ಹೃದಯ ಸಂಬಂಧಿ ಖಾಯಿಲೆ ಹಾಗೂ ಹೃದಯಾಘಾತದ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೃದಯಾಘಾತವಾದಾಗ ಸಮಯ ಅತ್ಯಂತ ಮುಖ್ಯ
ಹೃದಯಾಘಾತವಾದಾಗ ಹಲವರಿಗೆ ಸಮಯವೇ ದೊರಕುವುದಿಲ್ಲ, ನಿಮಿಷದ ಒಳಗಾಗಿ ಪ್ರಾಣ ಪಕ್ಷಿ ಹಾರಿಹೋಗುತ್ತದೆ, ಆದರೆ ಯಾರಿಗೆ ಸಮಯ ದೊರೆಯುತ್ತದೆಯೋ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಅಥವಾ ಅವರ ಸಮೀಪದಲ್ಲಿರುವವರು ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು, ಹೃದಯಾಘಾತ ಆದ ಕೂಡಲೇ ಎದೆ ಒತ್ತಿ ಹೃದಯಬಡಿದುಕೊಳ್ಳುವಂತೆ ಮಾಡಬೇಕು, ಅದರ ನಂತರ ಆದಷ್ಟು ಶೀಘ್ರವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು, ಎಷ್ಟು ತಡ ಮಾಡುತ್ತಾರೋ ಅಷ್ಟು ಹೃದಯಕ್ಕೆ ತೊಂದರೆ ಹೆಚ್ಚುತ್ತಾ ಹೋಗುತ್ತದೆ ಎಂದು ಎಚ್ಚರಿಕೆ ಹೇಳಿದರು.
ವಿಡಿಯೋ, ಚಿತ್ರಗಳ ಮೂಲಕ ವಿವರಣೆ
ಹೃದಯ ಸಂಬಂಧಿ ಖಾಯಿಲೆ, ಹೃದಯಾಘಾತ ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ನೆರವು ಈಗ ಲಭ್ಯವಿದ್ದು, ತೆರೆದ ಹೃದಯದ ಶಸ್ತ್ರಚಿಕಿತ್ಸೆಗು ಬಹುಪಾಲು ಕಡಿಮೆ ಆಗಿಬಿಟ್ಟಿವೆ. ಸ್ಟಂಟ್ ಮತ್ತು ಇನ್ನಿತರೆ ಆಧುನಿಕ ಸಾಮಗ್ರಿಗಳಿಂದ ಸಂಕೀರ್ಣ ಶಸ್ತ್ರಚಿಕಿತ್ಸೆ ಬೇಕಾಗಿದ್ದ ರಕ್ತನಾಳ ಚಿಕಿತ್ಸೆ, ಹೃದಯದ ರಂಧ್ರ ಮುಚ್ಚುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಸರಳ ಚಿಕಿತ್ಸೆ ಸಾಧ್ಯ ಎಂದು ಕೆಲವು ಚಿತ್ರಗಳು, ವಿಡಿಯೋಗಳ ಮೂಲಕ ಅವರು ವಿವರಿಸಿದರು.