ಅಯ್ಯಪ್ಪ ಕೊಲೆಗೆ ಮೂರು ತಿಂಗಳು ಸ್ಕೆಚ್, ಹತ್ಯೆ ಬಳಿಕ ಪಾರ್ಟಿ!
ಬೆಂಗಳೂರು, ಅಕ್ಟೋಬರ್ 18 : ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹತ್ಯೆ ಬಳಿಕ ಆರೋಪಿ ಸೂರಜ್ ಸಿಂಗ್ ಮತ್ತು ಸುಧೀರ್ ಅಂಗೂರ್ ಪಾರ್ಟಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣದ ಸಂಬಂಧ ಅಲಯನ್ಸ್ ವಿವಿ ಕುಲಪತಿ ಮತ್ತು ವಿವಿಯ ನೌಕರ ಸೂರಜ್ ಸಿಂಗ್ ಬಂಧನವಾಗಿದೆ. ಡಾ. ಅಯ್ಯಪ್ಪ ಹತ್ಯೆಗೆ 1 ಕೋಟಿ ರೂ. ಸುಪಾರಿಯನ್ನು ಸುಧೀರ್ ಅಂಗೂರ್ ನೀಡಿದ್ದರು ಎಂಬುದು ಈಗಾಗಲೇ ಬಹಿರಂಗವಾಗಿದೆ.
ಅಯ್ಯಪ್ಪ ಕೊಲೆಗೆ 1 ಕೋಟಿ ಸುಪಾರಿ, ಹತ್ಯೆ ಮಾಡಿದ್ದು ವಿವಿ ನೌಕರ
ಡಾ. ಅಯ್ಯಪ್ಪ ದೊರೆ ಮತ್ತು ಮಧುಕರ್ ಅಂಗೂರ್ ಹತ್ಯೆಗೆ ಸಂಚನ್ನು ರೂಪಿಸಲಾಗಿತ್ತು. ಮಂಗಳವಾರ ರಾತ್ರಿ ಆರ್. ಟಿ. ನಗರದ ನಿವಾಸದಲ್ಲಿ ಅಯ್ಯಪ್ಪ ಊಟ ಮುಗಿಸಿ ವಾಕಿಂಗ್ ಬಂದಾಗ ಸುಧೀರ್ ಸಿಂಗ್ ಮತ್ತು ಇತರ ಮೂವರು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದರು.
ಡಾ. ಅಯ್ಯಪ್ಪ ದೊರೆ ಹತ್ಯೆ; ಸುಧೀರ್ ಅಂಗೂರ್ ಬಂಧನ
ಹತ್ಯೆ ಪ್ರಕರಣದ ಆರೋಪಿ ಸೂರಜ್ ಸಿಂಗ್ ಎಂಬಿಎ ಪದವೀಧರ. ಮುನಿರೆಡ್ಡಿ ಪಾಳ್ಯದ ನಿವಾಸಿಯಾದ ಆತ ಅಲಯನ್ಸ್ ವಿವಿ ನೌಕರನಾಗಿದ್ದ. ಸುಧೀರ್ ಅಂಗೂರ್ಗೆ ಆಪ್ತನಾಗಿದ್ದ ಆತ ತನ್ನ ಇಬ್ಬರು ಇತರ ಸ್ನೇಹಿತರಿಗೆ ಹಣದ ಆಸೆ ತೋರಿಸಿ ಹತ್ಯೆಗೆ ಕೈ ಜೋಡಿಸುವಂತೆ ಪ್ರೇರೆಪಿಸಿದ್ದ.
ಅಲಯನ್ಸ್ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ
18 ಬಾರಿ ಚಾಕುವಿನಿಂದ ಇರಿತ
ಸೂರಜ್ ಸಿಂಗ್ ಮತ್ತು ಇತರ ಆರೋಪಿಗಳು ಡಾ. ಅಯ್ಯಪ್ಪ ದೊರೆಯನ್ನು 18 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಆರ್. ಟಿ. ನಗರದಿಂದ ಬಿ. ಟಿ. ಎಂ. ಲೇಔಟ್ನಲ್ಲಿರುವ ಸುಧೀರ್ ಅಂಗೂರ್ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಮುಂಜಾನೆ 4.30ರ ತನಕ ಪಾರ್ಟಿ ಮಾಡಿದ್ದರು. ಬಳಿಕ 25 ಸಾವಿರ ರೂ. ಪಡೆದು ಅಲ್ಲಿಂದ ಹೋಟೆಲ್ಗೆ ತೆರಳಿದ್ದರು.
ಇನ್ನೊಂದು ಮುಗಿಸಿ
ಡಾ. ಅಯ್ಯಪ್ಪ ದೊರೆ ಮತ್ತು ಮಧುಕರ್ ಅಂಗೂರ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಡಾ. ಅಯ್ಯಪ್ಪ ಹತ್ಯೆ ಬಳಿಕ ಇನ್ನೊಂದು ಮುಗಿಸಿ ಎಂದು ಸುಧೀರ್ ಅಂಗೂರ್ ಸೂರಜ್ ಸಿಂಗ್ ಮತ್ತು ಇತರ ಆರೋಪಿಗಳಿಗೆ ಸೂಚನೆ ನೀಡಿದ್ದ. ಮಧುಕರ್ ಅಂಗೂರ್ಗೆ ಪೊಲೀಸ್ ಭದ್ರತೆ ಇದ್ದ ಕಾರಣ ಅವರ ಹತ್ಯೆ ಮಾಡಲು ಆರೋಪಿಗಳು ಹಿಂದೇಟು ಹಾಕಿದ್ದರು.
ಮೊಬೈಲ್ ಕರೆಯಿಂದ ಸಿಕ್ಕಿ ಬಿದ್ದರು
ಆರ್. ಟಿ. ನಗರ ಪೊಲೀಸರು ಅಯ್ಯಪ್ಪ ಹತ್ಯೆ ಪ್ರಕರಣದ ತನಿಖೆ ಕೈಗೊಂಡಾಗ ಸುಧೀರ್ ಅಂಗೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಯ್ಯಪ್ಪ ಪತ್ನಿ ಪಾವನಾ, ಅಲಯನ್ಸ್ ವಿವಿ ಕೆಲವು ನೌಕರರು ಸಹ ಸುಧೀರ್ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಸುಧೀರ್ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದಾಗ ಸೂರಜ್ ಸಿಂಗ್ಗೆ ಕರೆ ಮಾಡಿರುವ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಕೊಲೆ ಸಂಚು ಕೇಳಿ ಅಘಾತವಾಗಿದೆ
ಮಧುಕರ್ ಅಂಗೂರ್ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಸುಧೀರ್ ಪ್ರಕರಣ ದಾಖಲು ಮಾಡಿದ್ದರು. ಕಾನೂನು ಹೋರಾಟದಲ್ಲಿ ನನಗೆ ಜಯ ಸಿಗಲಿದೆ. ನನ್ನ ಹತ್ಯೆ ಸಂಚು ಕೇಳಿ ಅಘಾತವಾಗಿದೆ. ಪ್ರಾಣ ಉಳಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವೆ" ಎಂದು ಹೇಳಿದರು.