ಕೋವಿಡ್ ಶವಗಳನ್ನು ಸುಡುವ ಸ್ವಯಂಸೇವಕರಿಗೆ ಕೋಟಿ ಶರಣು
ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಸೂಕ್ತ ಚಿಕಿತ್ಸೆ ಸಿಗದೆ, ವೆಂಟಿಲೇಟರ್ ಆಕ್ಸಿಜನ್ ಸಿಗದೆ ಬದುಕುಳಿಯಬಹುದಾದ ಎಷ್ಟೋ ಜೀವಗಳು ಇಹಲೋಕ ತ್ಯಜಿಸಿವೆ. ನಿತ್ಯ ಕೋವಿಡ್ ಸಾವುಗಳ ಲೆಕ್ಕ ನೋಡುತ್ತಾ ಕಣ್ಣು ಮಂಜಾಗುತ್ತಿದೆ. ಹಿಂದೊಮ್ಮೆ(1993) ಯಾವುದೋ ಆಸ್ಪತ್ರೆಯ ವಿಷಯ ಪ್ರಸ್ತಾಪ ಮಾಡ್ತಾ "ಈ ದೇಶದಲ್ಲಿ ಬಾಳಾ Cheap ಆಗಿ ಸಿಗೋದು ಮನುಷ್ಯರ ಪ್ರಾಣ" -ಎಂದು ಹೇಳಿ ನಮ್ಮನ್ನು ಕ್ಷಣಕಾಲ ದಂಗುಬಡಿಸಿದ್ದ ನನ್ನ ಸಹಪಾಠಿ ಅರವಿಂದನ ಅಪ್ಪ ಡಿ.ನರಸಿಂಹಮೂರ್ತಿ (ಡಿಎನ್ಎಂ ಮಾಸ್ತರು) ಹೇಳಿದ್ದು ನನಗೆ ಇನ್ನೂ ಕಿವಿಯಲ್ಲಿ ಗುನುಗುಡುತ್ತಿದೆ. ಪ್ರಸ್ತುತ ಸಂದರ್ಭಕ್ಕೆ ಅವರ ಮಾತು ಹೆಚ್ಚಿನ ಅರ್ಥ ಪಡೆದುಕೊಂಡಿದೆ.
ಪ್ರತಿ ನಿತ್ಯ ಕೋವಿಡ್ ನಿಂದಾಗಿ ಪ್ರಾಣಕಳೆದುಕೊಳ್ಳುತ್ತಿರುವ ಮಂದಿಯ ಅಂತ್ಯಸಂಸ್ಕಾರವೂ ದೊಡ್ದ ಸವಾಲಾಗಿ ಪರಿಣಮಿಸಿದೆ. ಸ್ಮಶಾನಗಳಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿ. ಒಮ್ಮೆ ಊಹಿಸಿಕೊಳ್ಳಿ ಬೆಂಗಳೂರು ನಗರದಲ್ಲಿರುವ ಸ್ಮಶಾನಗಳು, ಅಲ್ಲಿನ ಸೌಕರ್ಯಗಳು, ಹಾಗೂ ಸಿಬ್ಬಂದಿ ಜೊತೆಗೆ ದಿನದ 24 ಗಂಟೆ ಏನೇನೂ ಸಾಲುತ್ತಿಲ್ಲ. ಹಾಗಾಗಿ ಇದನ್ನು ತೂಗಿಸಲು ಸ್ಮಶಾನಗಳು ಬೇಕು, ಹೆಚ್ಚಿನ ಮಾನವಶಕ್ತಿ (Manpower) ಕೂಡಾ.
ಮನೆ- ಮನೆಗೆ ಹೋಗಿ ವ್ಯಾಕ್ಸಿನ್ ಡ್ರೈವ್ ಮಾಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ!
ಸ್ವಯಂ ಸೇವೆ ಅನ್ನೋದು ಸಮಾಜ ಸೇವೆ
ಕೋವಿಡ್ ನಿಂದ ಸತ್ತ ಅಪ್ಪನ್ನನ್ನು ಅಂತ್ಯಸಂಸ್ಕಾರ ಮಾಡಲು ಹೆದರಿ ಆಂಬುಲೆನ್ಸ್ ಡ್ರೈವರ್ ಗೆ ವಹಿಸಿ ಹೋದ ಮಗನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದೇ ರೀತಿ ಪ್ರತಿ ನಿತ್ಯ ಅನೇಕರು ಚಿತೆಯ ಬಳಿಯೂ ಹೋಗದೆ ತಮ್ಮ ಕುಟುಂಬದ ಶವಗಳನ್ನು ಸ್ಮಶಾನದ ಸಿಬ್ಬಂದಿ ಸುಪರ್ಧಿಗೆ ಬಿಟ್ಟು ಹೋಗುವವರೂ ಇದ್ದಾರೆ. ಹೀಗಿರುವಾಗ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುವ ಮಾನವ ಸಂಪನ್ಮೂಲ ಎಲ್ಲಿಂದ ತರುವುದು?
ಬೆಂಗಳೂರು ನಗರದ ಸ್ಮಶಾನಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ತಾವರೆಕೆರೆಯಲ್ಲಿ ಹೊಸದೊಂದು ಚಿತಾಗಾರ ಮಾಡಿದೆ. ಸ್ಥಳೀಯ ಪಂಚಾಯಿತಿ, ಸರ್ಕಾರ ಅಧಿಕಾರಿಗಳು ನಿರ್ವಹಿಸುತ್ತಿರುವ ಜವಾಬ್ದಾರಿ ಒಂದು ತೂಕವಾದರೆ, ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಸದಸ್ಯರು ನಿರ್ವಹಿಸುತ್ತಿರುವ ಕಾಯಕದ್ದೇ ಒಂದು ತೂಕ.
ಆನಂದ್ ಅವರನ್ನು ಒನ್ಇಂಡಿಯಾ ಸಂಪರ್ಕಿಸಿದಾಗ
"ತಾವರೆಕೆರೆಯ ಚಿತಾಗರದಲ್ಲಿ ಸುಮಾರು 30 ಮಂದಿ ಅಂಬೇಡ್ಕರ್ ದ.ಸಂ.ಸ ಸದಸ್ಯರು ಸ್ವಯಂ ಸೇವಕರಾಗಿದ್ದಾರೆ. ಈ ತಂಡವನ್ನು ನಿಭಾಯಿಸಿಕೊಂಡು ಹೋಗುತ್ತಿರುವುದು ಬೆಂಗಳೂರು ಜಿಲ್ಲಾ ದಸಂಸ ಪ್ರಧಾನ ಕಾರ್ಯದರ್ಶಿ ಎ.ಆನಂದ್. ಇವರಿಗೆ ಧೈರ್ಯ ತಂದು ಸ್ಪೂರ್ತಿ ನೀಡಿದವರು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅ.ಸುರೇಶ್ ಮತ್ತು ಅಧ್ಯಕ್ಷರಾದ ಮಾರುತಿ ದೊಡ್ಡಮನಿ.
ಬೆಳಿಗ್ಗೆ ಹತ್ತನ್ನೊಂದು ಗಂಟೆ ಸುಮಾರಿಗೆ ಮೊದಲ ಬ್ಯಾಚ್ ಶವಗಳನ್ನು ಸುಡುವ ತಯಾರಿ ಮಾಡ್ಕೋತೀವಿ. ಇಲ್ಲಿಗೆ ಶವ ಬಂದ ನಂತರವೇ ಎಂಟ್ರಿ ಮಾಡ್ಕೊಳೋದು. ಪಂಚಾಯಿತಿಯವರು ಅದನ್ನು ಮಾಡ್ತಾರೆ. ನಾವೆಲ್ಲಾ ದಸಂಸ ಸದಸ್ಯರು ಶವಗಳ ಸಂಸ್ಕಾರಕ್ಕೆ ಏನು ಬೇಕೋ ವ್ಯವಸ್ಥೆ ಮಾಡ್ತೀವಿ. ಶವಗಳನ್ನು ನೆಲದಲ್ಲಿಡಲ್ಲ. ಇಲ್ಲಿ ಅ್ಯಂಗಲ್ ಗಳಾಕಿ ಸುಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಿಸಿ ಖುದ್ದು ನಿಂತು ಮಾಡಿಸಿದ್ದಾರೆ.''
ಕೊರೊನಾ ಸೋಂಕಿತರನ್ನು ಸುಲಿಗೆ ಮಾಡುತ್ತಿರುವ ಏಳು ದಂಧೆಗಳು
ಪ್ರತಿ ಶವಗಳಿಗೆ 700-1000 ಕೆ.ಜಿ ಸೌದೆ ಬೇಕು
"ಯಾರೋ ಟಿವಿಯವರು ದೂರದಿಂದ ಶೂಟ್ ಮಾಡಿಕೊಂಡು ಒಟ್ಟಿಗೆ ಸುಡುವ ವ್ಯವಸ್ಥೆ ಮಾಡಿದ್ದಾರೆ ಎಂದು ಸುದ್ದಿ ಮಾಡಿದ್ದಾರೆ. ನಾವಿಲ್ಲಿ ಶವಗಳ ರಾಶಿ ಮಾಡಿ ಸುಡ್ತಿಲ್ಲ. ಇಲ್ಲಿರುವ 41 ಚಿತಾಗಾರಗಳಲ್ಲಿ ಶವಗಳನ್ನಿಟ್ಟು (ಒಂದರಲ್ಲಿ ಒಂದೇ ಶವ) ಅಷ್ಟಕ್ಕೂ ಒಂದೇ ಸಮಯಕ್ಕೆ ಬೆಂಕಿ ಕೊಡಲಾಗ್ತದೆ. ಪ್ರತಿ ಶವಗಳಿಗೆ 700-1000 ಕೆ.ಜಿ ಸೌದೆ ಬೇಕು. ಇದನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಒದಗಿಸುತ್ತಿದೆ. ಹಾಗೆಯೇ ಒಂದೆರಡು ಕೆ.ಜಿ ತುಪ್ಪ, ಎರಡು ಕೆ.ಜಿ ಸಕ್ಕರೆ, ಒಂದರ್ಧ ಕೆ.ಜಿ ಕರ್ಪೂರ ಜೊತೆಗೆ ಸೌದೆ ನೆನೆಯುವಷ್ಟು ಡೀಸೆಲ್ ಬಳಸ್ತಿದ್ದೀವಿ.
ಬೆಂಕಿ ಕೊಟ್ಟ ಮೇಲೆ ಸುಮಾರು 6 ಗಂಟೆ ಬೇಕು ಪೂರ್ತಿ ಸುಡುವುದಕ್ಕೆ. ಆಮೇಲೆ ಕ್ಲೀನ್ ಮಾಡಿ ಬೂದಿ ತೆಗೆದು ಮಡಕೆಗೆ ಹಾಕಿ, ಗುರುತಿಗಾಗಿ ಸ್ಟಿಕರ್ ಹಚ್ಚಿ ಇಡ್ತೀವಿ. ಮಾರನೆಯ ದಿನ ಅವರ ಮನೆಯವರು ಬಂದು ತಗೊಂಡೋಗ್ತಾರೆ. ಹೀಗೆ ಬೆಳಗಿನ ಬ್ಯಾಚ್ 41 ಶವಗಳಾದ ಮೇಲೆ ಮಧ್ಯಾಹ್ನ ಮತ್ತೊಂದು ಬ್ಯಾಚ್ ಸುಡ್ತೀವಿ. ನಿನ್ನೆ (7-5-2021) 84 ಶವಗಳನ್ನು ಸುಟ್ಟಿದ್ದೀವಿ.''
ಮನೆಯವರೇ ಶವದ ಹತ್ತಿರ ಬರಲ್ಲ
"ಬಾಳ ಜನಕ್ಕೆ ಭಯ ಇದೆ ಸಾರ್. ಕೆಲವರು ಶವದ ಹತ್ತಿರನೇ ಬರೋಲ್ಲ. ಆಂಬುಲೆನ್ಸ್ ಡ್ರೈವರ್ ಕಡೆನೇ ಡಾಕ್ಯುಮೆಂಟ್ಸ್ ಕೊಟ್ಟು ಕಳಿಸ್ತಾರೆ. ಶವಸಂಸ್ಕಾರ ಮಾಡಿದ ಬಗ್ಗೆ ನಾವು ಕೊಡುವ ಡಾಕ್ಯುಮೆಂಟ್ ತಗೊಂಡೋಗಿ ಡೆತ್ ಸರ್ಟಿಫಿಕೇಟ್ ಗೆ ಅಪ್ಲೈ ಮಾಡ್ಕೋತಾರೆ.
ಸಾಮಾನ್ಯವಾಗಿ ಇಲ್ಲಿ ನಾವು ಯಾರನ್ನೂ ಹಿಂದಕ್ಕೆ ಕಳ್ಸಿಲ್ಲ. ಸ್ವಲ್ಪ ಹೆಚ್ಚೂ ಕಡಿಮೆ ನಮ್ಮ ವಾಲೆಂಟಿಯರ್ಸ್ ಕನ್ವಿನ್ಸ್ ಮಾಡ್ಕೊಂಡು ಇಲ್ಲೇ ಸುಡುವು ವ್ಯವಸ್ಥೆ ಮಾಡ್ತೀವಿ. ತೀರಾ ಹೆಚ್ಚಿಗೆ ಬಂದರೆ ಇಲ್ಲೇ ಪಕ್ಕ ಗೆದ್ದೇನಹಳ್ಳಿಯಲ್ಲೊಂದು ಸ್ಮಶಾನ ಇದೆ. ಅಲ್ಲಿಗೆ ಕಳಿಸ್ತೀವಿ. ಅದಿಲ್ಲಿಗೆ ನಾಲ್ಕು ಕಿ.ಮೀ.''
ಸ್ವಯಂಸೇವೆಗೆ ಸಮಾನಾಂತರವಾದುದು ಯಾವುದೂ ಇಲ್ಲ
"ಶನಿವಾರ ಬೆಳಿಗ್ಗೆ 10-15ಕ್ಕೆ ಆನಂದ್ ಅವರಿಗೆ ಫೋನ್ ಮಾಡಿದಾಗ ಇಷ್ಟೂ ವಿಷಯವನ್ನು ಹೇಳುತ್ತಾ, ಇನ್ನೇನು ಹುಡುಗರು ತಿಂಡಿ ತಿನ್ನುತ್ತಾ ಇದ್ದಾರೆ. ಸ್ವಲ್ಪ ಹೊತ್ತಿಗೆ ಕೆಲ್ಸ ಶುರು, ಆಗ್ಲೇ ಇಪ್ಪತ್ತು ಆಂಬುಲೆನ್ಸ್ ಬಂದಿದ್ದಾವೆ. ಆಮೇಲೆ ಇನ್ನೊಂದು ವಿಷಯ. ಇಲ್ಲಿ ಸುಡೋಕೆ ಎಂಟ್ರಿ ಮಾಡೋದು ಇಲ್ಲಿಗೆ ಬಂದ ಮೇಲಷ್ಟೇ. ಎಲ್ಲಿಂದಲೋ ಫೋನ್ ಮಾಡಿ ಈಗ ಬರ್ತೀವಿ, ಬಂದ ತಕ್ಷಣ ಮಾಡಿ ಅದೆಲ್ಲಾ ಇಲ್ಲಾ. ಎಲ್ಲಾ ವ್ಯವಸ್ಥೆ ಇದೆ ಸಾರ್...
ನಮಗೂ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಮಾಸ್ಕ್ ಗ್ಲೌಸ್, ಸ್ಯಾನಿಟೈಜರ್, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಎಲ್ಲಾ ಮಾಡಿದಾರೆ'' ಎಂದು ಹೇಳಿದರು. ಆಯ್ತು ಆನಂದ್, ಅಲ್ಲಿನ ವ್ಯವಸ್ಥೆ ಮತ್ತು ಸ್ವಯಂ ಸೇವಕರ ಕೆಲ್ಸದ ಫೋಟೋ ಕಳ್ಸಿ ಅಂದೆ. ಆಗಲಿ ಎಂದರು. ಆದರೆ ಶವಗಳ ಸುಡುವ ಕೆಲಸದ ನಡುವೆ ಅವರಿಗೆ ಅದಕ್ಕೆ ಬಿಡುವಾಗಿಲ್ಲ. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ಡಿಎಸ್ಎಸ್ ನ ಈ ಸ್ವಯಂಸೇವಕರ ಸೇವೆಗೆ ಸಮಾನಾಂತರವಾದುದು ಪ್ರಾಯಶಃ ಯಾವುದೂ ಇರಲಿಕ್ಕಿಲ್ಲ, ನಿಮಗಿದೂ ಕೋಟಿ ಶರಣು.
Recommended Video