ಬಿಜೆಪಿ - ಕೆಜೆಪಿ ವಿಲೀನಕ್ಕೆ ಬಿತ್ತು ಬ್ರೇಕ್!
ಬಿಜೆಪಿಯಲ್ಲಿ ಕೆಜೆಪಿ ವಿಲೀನಕ್ಕೆ ಕೊಕ್ಕೆ ಹಾಕಿರುವ ಕೆಜೆಪಿಯ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಅವರು ಇಂದು ದಿಢೀರನೆ ವಿಧಾನಸೌಧಕ್ಕೆ ತೆರಳಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೆಜೆಪಿ ಸಂಸ್ಥಾಪಕ ಪದ್ಮನಾಭ ಅವರು ಸ್ಪೀಕರ್ ಅವರ ಸಮ್ಮುಖದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಜೆಪಿ ವಿವಾದ ಇನ್ನೂ ಬಗೆಹರಿದಿಲ್ಲ. ಪಕ್ಷ ಯಾರಿಗೆ ಸೇರಬೇಕು ಎಂಬ ವಿಚಾರ ಇನ್ನೂ ಸುಪ್ರೀಂಕೋರ್ಟಿನಲ್ಲಿದೆ. ಹೀಗಾಗಿ ಪ್ರಕರಣದ ತೀರ್ಪು ಪ್ರಕಟವಾಗುವವರೆಗೆ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಪ್ರಕ್ರಿಯೆಗೆ ಅವಕಾಶ ನಿಡಬಾರದು ಎಂದು ಪದ್ಮನಾಭ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ದೂರು/ ಮನವಿ ನೀಡಿದ್ದಾರೆ.
ವಿಲೀನ ಪ್ರಕ್ರಿಯೆಗೆ ಯಾವುದೇ ಕಾರಣಕ್ಕೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವಕಾಶ ನೀಡಬಾರದು. ಈ ಸಂಬಂಧ ನಾನು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದೂ ಗುಡುಗಿದ್ದಾರೆ. (ಕೆಜೆಪಿಯಿಂದ ಯಡಿಯೂರಪ್ಪ ಉಚ್ಚಾಟನೆ )
ದೂರಿನ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಗೋಡು ತಿಮ್ಮಪ್ಪ, ಈ ಬಗ್ಗೆ ಕಾನೂನು ತಜ್ಞರ ಜತೆ ಪರಿಶೀಲಿಸುತ್ತೇನೆ. ಬಳಿಕ ನಿರ್ಧಾರ ಪ್ರಕಟಿಸುತ್ತೇನೆ. ಆದರೆ ಯಾವುದೇ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಶಾಸಕರು ಸೇರಲು ಬಯಸಿದರೆ ಅದು ತಪ್ಪಲ್ಲ. ಹೀಗಾಗಿ ಕೆಜೆಪಿ ಶಾಸಕರು ಬಿಜೆಪಿ ಸೇರ್ಪಡೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಮಾತನಾಡಿದ ಪದ್ಮನಾಭ ಅವರು ಕೆಜೆಪಿ ಸಂಸ್ಥಾಪಕನಾಗಿ ನಾನು ನಿಮ್ಮ ಮುಂದೆ ಇದ್ದೇನೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿ ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಮಾಡಲು ಹೊರಟಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ ಎಂದು ಸ್ಪೀಕರಿಗೆ ಮನದಟ್ಟುಪಡಿಸಿದ್ದಾರೆ. (ಜಗದೀಶ್ ಶೆಟ್ಟರ್ ಇನ್ನು ವಿರೋಧ ಪಕ್ಷದ ನಾಯಕ?)
ನನ್ನ ಸಹಿಯನ್ನು ಫೋರ್ಜರಿ ಮಾಡುವ ಮೂಲಕ ಯಡಿಯೂರಪ್ಪನವರು ಕೆಜೆಪಿಯನ್ನು ಮೋಸದಿಂದ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಈ ವಿವಾದ ಇನ್ನೂ ಇತ್ಯರ್ಥವಗಿಲ್ಲ. ಈಗ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಮೂಲಕ ಕರ್ನಾಟಕದ 6 ಕೋಟಿ ಜನರ ತಲೆ ಮೇಲೆ ಗೂಬೆಕೂರಿಸಲು ಹೊರಟಿದ್ದಾರೆ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಆಕ್ರೋಶ ವ್ಯಕ್ತಪಡಿಸಿದ್ದಾರೆ.