ಡಾನ್ ರವಿ ಪೂಜಾರಿ ಆಫ್ರೀಕಾ ದೇಶದಲ್ಲಿ ಸಮಾಜ ಸೇವಕ!
ಬೆಂಗಳೂರು, ಫೆಬ್ರವರಿ 24: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ ದೇಶದಿಂದ ಬಂಧಿಸಿ ಸೋಮವಾರ ಬೆಂಗಳೂರಿಗೆ ಕರೆತರಲಾಗಿದೆ.
ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ರವಿ ಪೂಜಾರಿ, ಸುಮಾರು 30 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ. ಸೆನೆಗಲ್ನ ಜೈಲಿನಲ್ಲಿದ್ದ ಆತನನ್ನು ಗಡಿಪಾರು ಮಾಡಿದ ಹಿನ್ನೆಲೆಯಲ್ಲಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಪಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದೆ.
ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ ವಾಪಸ್
ರವಿ ಪೂಜಾರಿಯನ್ನು ವಶಕ್ಕೆ ಪಡೆದುಕೊಳ್ಳಲು ಬೆಂಗಳೂರು ಪೊಲೀಸರು ಸೆನೆಗಲ್ಗೆ ಹೋಗಿ ಬಂದ ನಂತರ ರವಿ ಪೂಜಾರಿ ಕಗ್ಗತ್ತಲೆ ದೇಶದಲ್ಲಿ ಅಲ್ಲೇನು ಮಾಡುತ್ತಿದ್ದ ಎಂಬ ಬಗ್ಗೆ ಸ್ವತಃ ಪಾಂಡೆ ಅವರೇ ಮಾಧ್ಯಮಗಳಿಗೆ ಕುತೂಹಲಕಾರಿ ಸಂಗತಿಗಳ ವಿವರ ನೀಡಿದ್ದಾರೆ. ಅದರ ವಿವರ ಇಲ್ಲಿದೆ.
ಸೆನೆಗಲ್ನಲ್ಲಿ ಸೆರೆ ಸಿಕ್ಕ
ಸೋಮವಾರ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, 'ಸೆನಗಲ್ ದೇಶದಿಂದ ರವಿ ಪೂಜಾರಿಯನ್ನ ಬೆಂಗಳೂರಿಗೆ ಕರೆತರಲಾಗಿದೆ. ಗ್ಯಾಂಗ್ ಸ್ಟರ್ ರವಿ ಪೂಜಾರಿ ಮೇಲೆ ಮುಂಬೈ ಸೇರಿದಂತೆ ದೇಶದ ನಾನಾ ಕಡೆ ಪ್ರಕರಣಗಳಿವೆ. ಸೆನಗಲ್ ದೇಶದ ಸುಪ್ರೀಂ ಕೋರ್ಟ್ ರವಿ ಪೂಜಾರಿಯ ಅರ್ಜಿಯನ್ನು ವಜಾ ಮಾಡಿದೆ. ಭಾರತಕ್ಕೆ ಹಸ್ತಾಂತರಿಸಬಾರದು ಎನ್ನುವ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ವಜಾ ಮಾಡಿ, ಭಾರತದ ವಶಕ್ಕೆ ನೀಡಿದೆ' ಎಂದಿದ್ದಾರೆ.
ಭೂಗತ ದೊರೆ ರವಿ ಪೂಜಾರಿ ಜಾತಕ ಬಿಚ್ಚಿಟ್ಟ ಎಡಿಜಿಪಿ ಅಮರ್
ಬೋರವೆಲ್ ಕೊರೆಸಿ ಕೊಡುತ್ತಿದ್ದ
'ಸೆನೆಗಲ್ನಲ್ಲಿ ರವಿ ಪೂಜಾರಿ, ಆಂಥೋನಿ ಫರ್ನಾಂಡಿಸ್ ಅಂತಾ ಹೆಸರು ಚೇಂಜ್ ಮಾಡಿಕೊಂಡಿದ್ದ. ಸೆನೆಗಲ್ ಬುರ್ಕಿನ ಪಾಸೋ ಬಳಿ ಬಡವರಿಗೆ ಬಟ್ಟೆ ಕೊಡೋದು, ನವರಾತ್ರಿ ಸಮಯದಲ್ಲಿ ಗಿಫ್ಟ್ ಕೊಡೋದು. ನೀರಿಲ್ಲದ ಗ್ರಾಮಗಳಲ್ಲಿ ಬೋರ್ ವೆಲ್ ಹಾಕಿಸಿ ಬುರ್ಕಿನಾಫಾಸೊದಲ್ಲಿ ನಲ್ಲಿ ರವಿ ಪೂಜಾರಿ ಹೆಸರು ಮಾಡಿದ್ದ' ಎಂದು ಪಾಂಡೆ ತಿಳಿಸಿದ್ದಾರೆ.
25 ರಿಂದ 30 ಲಕ್ಷ ರುಪಾಯಿ ಆದಾಯ
ರವಿ ಪೂಜಾರಿಗೆ ತಿಂಗಳಿಗೆ 25 ರಿಂದ 30 ಲಕ್ಷ ರುಪಾಯಿ ಹೋಟೆಲ್ ಬುಸಿನೆಸ್ನಿಂದ ಆದಾಯ ಬರುತ್ತಿತ್ತು. ಇಂಟರ್ ನೆಟ್ ಕಾಲ್ ಮೂಲಕ ಸೆಲೆಬ್ರಿಟಿಗಳಿಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ. 25 ಲಕ್ಷ ವಾರ್ಷಿಕವಾಗಿ ರವಿ ಪೂಜಾರಿಗೆ ಆದಾಯ ಬರುತ್ತಿತ್ತು. ಅಲ್ಲದೇ ಇತರ ವ್ಯವಹಾರಗಳಿಂದಲ್ಲೂ ಸಾಕಷ್ಟು ಹಣಗಳಿಸಿದ್ದ. ಹಪ್ತಾ ವಸೂಲಿಯಿಂದ ಬಂದ ಹಣ ಏನು ಮಾಡುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸೆನೆಗಲ್ ಗೆ ನಮ್ಮ ರಾಜತಾಂತ್ರಿಕ ಸಂಬಂಧ ಇಲ್ಲ. ಆದರೂ ಅಲ್ಲಿನ ಅಧಿಕಾರಿಗಳು ನಮಗೆ ಸಹಕರಿಸಿದರು. ಹೀಗಾಗಿ ರವಿ ಪೂಜಾರಿ ದೇಶಕ್ಕೆ ಕರೆದುಕೊಂಡು ಬರಲು ಸಹಾಯವಾಯಿತು 'ಎಂದು ಅಮರ್ ಕುಮಾರ್ ಪಾಂಡೆ ಮಾಧ್ಯಮಗಳಿಗೆ ತಿಳಿಸಿದರು.
ವಿವಿಧ ಗಂಭೀರ ಪ್ರಕರಣಗಳು
ಕೊಲೆ, ಕೊಲೆ ಯತ್ನ ಸೇರಿದಂತೆ, ಅನೇಕ ಗಂಭೀರ ಪ್ರಕರಣಗಳು ರವಿ ಪೂಜಾರಿ ಮೇಲೆ ಇವೆ. ಅಲ್ಲದೇ ಕರ್ನಾಟಕದಲ್ಲಿ ಶಾಸಕರಾದ ತನ್ವೀರ್ ಸೇಠ್, ಎಚ್ ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಆರೋಪ ಆತನ ಮೇಲೆ ಇದೆ. ಭಾನುವಾರ ರಾತ್ರಿ 12.40ರ ಸುಮಾರಿಗೆ ಆತನನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.