ಬೀದಿನಾಯಿಗಳ ಹಾವಳಿಗೆ ಗುಂಡೂರು ಮಹಿಳೆ ಬಲಿ
ಬೆಂಗಳೂರು, ಅಕ್ಟೋಬರ್, 30 : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಯಿಗಳ ದಾಳಿಯಿಂದ ಮಹಿಳೆಯೊಬ್ಬಳು ತಮ್ಮ ಪ್ರಾಣ ಕಳೆದುಕೊಂಡ ದುರ್ಘಟನೆ ಬೆಂಗಳೂರು ಹೊರವಲಯದ ಗುಂಡೂರಿನಲ್ಲಿ ಗುರುವಾರ ನಡೆದಿದೆ.
ಗುಂಡೂರು ನಿವಾಸಿ ರತ್ನಮ್ಮ ಎಂಬಾಕೆ ನಾಯಿಯ ಉಪಟಳಕ್ಕೆ ಬಲಿಯಾದ ಮಹಿಳೆ. ಕಸ ವಿಲೇವಾರಿ ಘಟಕದ ಬಳಿ ಮೇಯಿಸಲು ಬಿಟ್ಟ ಎಮ್ಮೆ ಬಿಡಿಸಿಕೊಂಡು ಬರಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.[ಅಮ್ಮಾ' ಎಂದು ಬೊಗಳುವ ನಾಯಿಯನ್ನು ಬಲ್ಲಿರಾ?]
ರತ್ನಮ್ಮ ಎಮ್ಮೆ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಳು. ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯ ಬಳಿ ಜಾನುವಾರುಗಳನ್ನು ಮೇಯಿಸಲು ಬಿಟ್ಟಿದ್ದಾಳೆ. ಸಂಜೆ ವೇಳೆ ದನ, ಎಮ್ಮೆಗಳನ್ನು ಬಿಡಿಸಿಕೊಂಡು ಬರುವ ವೇಳೆ ನಾಯಿಗಳ ಗುಂಪೊಂದು ಹಿಂದಿನಿಂದ ಅಟ್ಟಿಸಿಕೊಂಡು ಬಂದಿದೆ.
ನಾಯಿಗಳು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಎಮ್ಮೆಗೆ ಕಟ್ಟಿದ ಹಗ್ಗ ರತ್ನಮ್ಮನ ಕಾಲಿಗೆ ತಾಕಿದೆ. ಆಗ ಆಕೆ ಮುಗ್ಗರಿಸಿ ಬಿದ್ದಿದ್ದಾಳೆ. ಆಗ ನಾಯಿಗಳು ಆಕೆಯ ಮೇಲೆ ಏಕಾಏಕಿ ಮೇಲೆರಗಿ ಕಚ್ಚಿ ಬಿಟ್ಟಿವೆ. ಇದರ ನೋವನ್ನು ತಾಳಲಾರದೆ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿದ ಆವಲಹಳ್ಳಿ ಪೊಲೀಸರು ಮೃತದೇಹವನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ನಗರದಲ್ಲಿ ದಿನಗಳೆದಂತೆ ಬೀದಿ ನಾಯಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಬಿಬಿಎಂಪಿ ನಾಯಿಗಳ ಹಾವಳಿ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗುಂಡೂರು ನಿವಾಸಿಗಳು ಒತ್ತಾಯಿಸಿದ್ದಾರೆ.