ಕೊವಿಡ್ 19 ಚಿಕಿತ್ಸೆ ಒತ್ತಡ, ಮಾನಸಿಕ ತಜ್ಞರ ಮೊರೆ ಹೋದ ವೈದ್ಯರು
ಬೆಂಗಳೂರು, ನವೆಂಬರ್ 20: ಕೊವಿಡ್ 19 ಚಿಕಿತ್ಸೆಯ ಒತ್ತಡ ಸಹಿಸಿಕೊಳ್ಳಲಾಗದೆ ಹಲವು ವೈದ್ಯರು ಮಾನಸಿಕ ತಜ್ಞರ ಮೊರೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮನೋವೈದ್ಯಕೀಯ ಸಹಾಯವಾಣಿಗೆ ಕರೆ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಮನೆಯಲ್ಲಿರುವ ಹಿರಿಯ ವಯಸ್ಕರು, ಪೋಷಕರು ಹಾಗೂ ತಮ್ಮ ಮಕ್ಕಳಿಗೆ ತಮ್ಮಿಂದ ಎಲ್ಲಿ ಅಪಾಯ ಸಂಭವಿಸುತ್ತದೆಯೋ ಎಂಬ ಭಯವನ್ನು ಸಾಕಷ್ಟು ವೈದ್ಯರು ವ್ಯಕ್ತಪಡಿಸಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸಚಿವ ಅನಿಲ್ ವಿಜ್
ಸೋಂಕು ತಗುಲಿದ ಕೂಡಲೇ ವೈದ್ಯರು ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ, ಸಾಮಾಜಿಕ ಕಳಂಕವನ್ನೂ ಎದುರಿಸಬೇಕಾಗುತ್ತದೆ. ಸಾಕಷ್ಟು ವೈದ್ಯರು ಹೃದಯ ಸಂಬಂಧ ಸಮಸ್ಯೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಆಪ್ತಸಲಹೆಗಳು ಅತ್ಯಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ವೈದ್ಯರು (ಐಎಂಎ-ಕೆ), ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ, ಕರ್ನಾಟಕ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಸಹಯೋಗದೊಂದಿಗೆ ಈ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಹಾಯವಾಣಿಗೆ ಪ್ರತೀನಿತ್ಯ 10-15 ಮಂದಿ ವೈದ್ಯರು ಕರೆ ಮಾಡಿ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತೀವ್ರ ಒತ್ತಡದಲ್ಲಿರುವ ವೈದ್ಯರಿಗೆ ಸಹಾಯವಾಗುವ ಸಲುವಾಗಿ ಈ ಸಹಾಯವಾಣಿಯನ್ನು ಕಳೆದ ತಿಂಗಳು ಆರಂಭಿಸಲಾಗಿತ್ತು. ಇದುವರೆಗೂ ಈ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಎಂದು ಐಎಂಎ-ಕೆ ಸೈಕಿಯಾಟ್ರಿ ಸೆಲ್ನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಅವರು ಹೇಳಿದ್ದಾರೆ.
ಕೇಂದ್ರೀಕೃತ ಸಹಾಯವಾಣಿ ಅಡಿಯಲ್ಲಿ 10 ದೂರವಾಣಿ ಸಂಖ್ಯೆಗಳಿವೆ, ಒತ್ತಡಕ್ಕೊಳಗಾಗಿರುವ ವೈದ್ಯರು ಹಾಗೂ ಅವರ ಕುಟುಂಬಸ್ಥರು ಈ ಸಂಖ್ಯೆಗಳಿಗೆ ಕರೆ ಮಾಡಿ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ