ಕೇರಳದಂತೆ ಬೆಂಗಳೂರಲ್ಲೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕೆ?
ಬೆಂಗಳೂರು, ಜನವರಿ 13: ಬೆಂಗಳೂರಲ್ಲೂ ಅಕ್ರಮ ಕಟ್ಟಡಗಳನ್ನು ನೆಲಸಮಯಗೊಳಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಕೊಚ್ಚಿಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಕೇರಳ ಸರ್ಕಾರವು ನಾಲ್ಕು ಅಕ್ರಮ ಕಟ್ಟಡಗಳನ್ನು ಧರೆಗುರುಳಿಸಿದೆ. ಕೇರಳ ಮಾದರಿಯಲ್ಲಿ ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧವೂ ಕೂಡ ಕಾರ್ಯಾಚರಣೆ ನಡೆಸಬೇಕೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರ ಮುಂದಿಡಲಾಗಿತ್ತು.
ನೋಡನೋಡುತ್ತಿದ್ದಂತೆಯೇ ಧರೆಗುರುಳಿದ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳು
ಅದಕ್ಕೆ ಬಹುತೇಕ ಮಂದಿ ಹೌದು ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳನ್ನು ಕೂಡ ನೆಲಸಮಗೊಳಿಸಿ ಎನ್ನುವ ಅಭಿಪ್ರಾಯವನ್ನು ನೀಡಿದ್ದಾರೆ.
ಈಗಾಗಲೇ ಎರಡು ವರ್ಷಗಳ ಹಿಂದೆ ರಾಜಕಾಲುವೆ, ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದರು.ಆದರೆ ಈಗ ಅದು ಅರ್ಧಕ್ಕೆ ನಿಂತುಬಿಟ್ಟಿದೆ.
ಅಕ್ರಮವಾಗಿ ಕಟ್ಟಡ ಕಟ್ಟಿದ್ದರೆ ದಂಡ ವಸೂಲಿ ಮಾಡಿ, ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಗದ ಹಾಗೆ ನೋಡಿಕೊಳ್ಳಿ, ಈಗಿರುವ ಕಟ್ಟಡಗಳಿಂದ ಹಣ ವಸೂಲಿ ಮಾಡಿ, ಅದನ್ನು ಬಿಟ್ಟು ಕಟ್ಟಿದ ಕಟ್ಟಡವನ್ನು ಬೀಳಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಕೆರೆ ಕಟ್ಟೆಗಳ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅವಕಾಶ ಬೇಡ
ಕೆರೆ ಕಟ್ಟೆಗಳನ್ನು ಮುಚ್ಚಿ, ಒತ್ತುವರಿ ಮಾಡಿ ಕಟ್ಟಿರುವ ಅಪಾರ್ಟ್ಮೆಂಟ್ಗಳು ಬೆಂಗಳೂರಲ್ಲಿ ತುಂಬಾ ಇವೆ. ವೃಷಭಾವತಿ ನದಿ ದಂಡೆಯನ್ನೂ ಬಿಡದೆ ಅಪಾರ್ಟ್ಮೆಂಟ್ ನಿರ್ಮಿಸಿದ್ದಾರೆ ಎಂದು ಓದುಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಭ್ರಷ್ಟಾಚಾರ ಬೆರೆತುಹೋಗಿದೆ
ಯಾರೇ ಅಧಿಕಾರಕ್ಕೆ ಬಂದರೂ ಕೂಡ ಅಕ್ರಮ-ಸಕ್ರಮ ಮಾಡುತ್ತಾರೆ ವಿನಃ ದೊಡ್ಡ ಕುಳಗಳ ಕೂದಲು ಅಲ್ಲಾಡಿಸಲೂ ಕೂಡ ಯಾರಿಗೂ ಸಾಧ್ಯಾಗುತ್ತಿಲ್ಲ. ಯಾಕೆಂದರೆ ಇಲ್ಲಿಯ ರಾಜಕೀಯದ ರಕ್ತದಲ್ಲಿ ಭಷ್ಟಾಚಾರ ಬೆರೆತುಹೋಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಲಕ್ಷ ಕಟ್ಟಡವಿದೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸುಪಾಸು ಹತ್ತೊಂಬತ್ತು ಲಕ್ಷ ಕಟ್ಟಡ ಇದೆ. ಅದರಲ್ಲಿ ಬಿಬಿಎಂಪಿ ಅನುಮತಿ ಪಡೆಯದೆ ಬಿ ಖಾತಾ ಇರುವ ಮೂರು ಲಕ್ಷ ಕಟ್ಟಡಗಳು ಹಾಗೂ ಕೃಷಿ ಜಮೀನಿನಲ್ಲೂ ಕಟ್ಟಡವಿದೆ. ಒಟ್ಟು ಮೂರು ಲಕ್ಷ ಅದನ್ನು ಅನಧಿಕೃತ ಎಂದೂ ಪರಿಗಣಿಸಲಾಗಿದೆ. ರಾಜಕಾಲುವೆ ವ್ಯಾಪ್ತಿಯಲ್ಲಿ 2,626 ಅನಧಿಕೃತ ಕಟ್ಟಡವಿದೆ. ಒಟ್ಟು ಹತ್ತು ಕೆರೆಯಲ್ಲಿ ಭೂ ಒತ್ತುವರಿಯ ಸಂಪೂರ್ಣ ಚಿತ್ರಣ ಸಿಕ್ಕಿದ್ದು ಆರು ಕೆರೆಯ ಒತ್ತುವರಿ ಬಿಡಿಸಿ ಪೆನ್ಸಿಂಗ್ ಹಾಕಲಾಗಿದೆ.
ಕೊಚ್ಚಿಯಲ್ಲಿ ನಾಲ್ಕು ಬಹುಮಹಡಿ ಕಟ್ಟಡ ನೆಲಸಮ
ಕಡಲ ತೀರ ನಿಯಂತ್ರಣ ವಲಯ ಉಲ್ಲಂಘಿಸಿ ಕೇರಳದ ಕೊಚ್ಚಿಯ ಮರಡ್ನಲ್ಲಿ ನಿರ್ಮಿಸಿದ್ದ ಬಹುಮಹಡಿಯ ನಾಲ್ಕು ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ಪೂರ್ಣಗೊಂಡಿದೆ.
ಶನಿವಾರ ಎರಡು ಹಾಗೂ ಭಾನುವಾರ ಎರಡು ಕಟ್ಟಡಗಳನ್ನ ನೆಲಸಮಗೊಳಸಿಲಾಗಿತ್ತು. ಸಿಆರ್ಜೆಡ್ ಮಾನದಂಡಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು ಧ್ವಂಸಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ ಎಂಟು ತಿಂಗಳ ಬಳಿಕ ಕಾರ್ಯಾಚರಣೆ ನಡೆಸಲಾಯಿತು.