ಸರ್ಕಾರ ನೌಕರರ ಸಂಬಳಕ್ಕೆ ಕತ್ರಿ ಬೇಡ: ಡಿಕೆಶಿ ಆಗ್ರಹ
ಬೆಂಗಳೂರು, ಏಪ್ರಿಲ್ 7: ''ಏಪ್ರಿಲ್ 14 ರ ಬಳಿಕವೂ ಲಾಕ್ ಡೌನ್ ಮುಂದುವರಿದರೆ, ಮುಂದಿನ ತಿಂಗಳು ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತ ಮಾಡಬೇಕಾಗಿ ಬರಬಹುದು'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ''ಸರ್ಕಾರದ ಸಿಬ್ಬಂದಿಗಳಿಗೆ ಸಂಬಳವನ್ನು ಕಟ್ ಮಾಡಬಾರದು. ಸರ್ಕಾರಿ ನೌಕರರಿಗೆ ಸಂಬಳ ಕಟ್ ಮಾಡುವ ಸ್ಥಿತಿ ಯಾವ ಸರ್ಕಾರಕ್ಕೂ ಬಂದಿಲ್ಲ. ಸದ್ಯಕ್ಕೆ ನಮ್ಮ ಮುಂದೆ ಹಲವಾರು ಸಮಸ್ಯೆಗಳಿವೆ. ಅದಕ್ಕೆ ಎಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಬೇಕು'' ಎಂದರು.
ಮಂಗಳವಾರದಿಂದ ಲಾಕ್ಡೌನ್ ಇನ್ನಷ್ಟು ಕಠಿಣ: ಯಡಿಯೂರಪ್ಪ ಎಚ್ಚರಿಕೆ
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ''ನೌಕರರಿಗೂ ಹಲವಾರು ಸಮಸ್ಯೆಗಳು ಇವೆ. ಹೀಗಾಗಿ, ನರ್ಸ್, ಪೊಲೀಸ್ ಅಥವಾ ಯಾವುದೇ ನೌಕರರ ಸಂಬಳ ನಿಲ್ಲಿಸಬಾರದು'' ಎಂದು ಒತ್ತಾಯಿಸಿದರು.
ಯಾವ ಸರ್ಕಾರದಲ್ಲೂ ಈ ಸಮಸ್ಯೆ ಇಲ್ಲ.!
''ಕೆಲವು ಸರ್ಕಾರಿ ಅಧಿಕಾರಿಗಳಿಗೆ ವೇತನ ಆಗಿಲ್ಲ. ಇಂತಹ ಸಮಸ್ಯೆ ಯಾವ ಸರ್ಕಾರದಲ್ಲೂ ಆಗಿರಲಿಲ್ಲ. ಕೆಲವೊಂದು ಯೋಜನೆಗಳನ್ನ ಬೇಕಾದರೆ ನಿಲ್ಲಿಸಲಿ. ಆದ್ರೆ, ಯಾವ ನೌಕರರ ವೇತನವನ್ನೂ ನಿಲ್ಲಿಸಬಾರದು. ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳು ನೌಕರರಿಗಿವೆ. ವೇತನವನ್ನ ನಿಲ್ಲಿಸದೆ ಮೊದಲು ರಿಲೀಸ್ ಮಾಡಬೇಕು'' ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ವೈದ್ಯಕೀಯ ಸೆಲ್
''ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗ್ತಿದೆ. ಕೆಪಿಸಿಸಿ ವತಿಯಿಂದ ವೈದ್ಯಕೀಯ ಸೆಲ್ ಪ್ರಾರಂಭಿಸಿದ್ದೇವೆ. ನೂರಕ್ಕೂ ಹೆಚ್ಚು ವೈದ್ಯರು ಸೇವೆ ನೀಡುತ್ತಾರೆ. ಜನರಿಗೆ ಅಗತ್ಯವಾದ ಟ್ರೀಟ್ ಮೆಂಟ್ ಕೊಡ್ತಾರೆ. ಜೊತೆಗೆ ಸಂತ್ರಸ್ಥರಿಗೆ ನೆರವಾಗ್ತಾರೆ. ರಮೇಶ್ ಕುಮಾರ್ ನೇತೃತ್ವದ ಟಾಸ್ಕ್ ಫೊರ್ಸ್ ಸಲಹೆ ನೀಡಿದೆ'' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
'ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ'
ರೈತರ ಬೆಳೆ ನಷ್ಟವಾಗಬಾರದು.!
''ರೈತರು ಬೆಳೆದ ಬೆಳೆ ನಷ್ಟವಾಗಿದೆ. ನಮ್ಮ ಕಾರ್ಯಕರ್ತರೇ ಕೆಲವು ಕಡೆ ಖರೀದಿ ಮಾಡ್ತಿದ್ದಾರೆ. ಖರೀದಿ ಮಾಡಿ ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆ ಖರೀದಿಸುವ ಕೆಲಸ ಆಗಬೇಕು. ಅವರು ಗೊಬ್ಬರ, ನೀರು ಹಾಕಿದ್ದಕ್ಕಾದರೂ ಸೇವ್ ಆಗಬೇಕು. ಅಡಿಕೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಮಲೆನಾಡಿನಿಂದ ಪ್ರತಿನಿತ್ಯ ಕರೆಗಳು ಬರುತ್ತಿವೆ. ಹೀಗಾಗಿ ಅಡಿಕೆ ಬೆಳೆಗಾರರ ಸಮಸ್ಯೆಯನ್ನೂ ಸರ್ಕಾರ ಪರಿಹರಿಸಬೇಕು'' ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಯಡಿಯೂರಪ್ಪ ನಿಲುವನ್ನು ಸ್ವಾಗತಿಸಿದ ಡಿಕೆಶಿ
ಯಡಿಯೂರಪ್ಪ ಅವರು ಅಲ್ಪಸಂಖ್ಯಾತರ ಪರವಾಗಿ ಮಾತನಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಡಿ.ಕೆ.ಶಿವಕುಮಾರ್, ''ಹಳ್ಳಿಯಲ್ಲಿ ಶಾಂತಿ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಹಳ್ಳಿಗೆ ಪ್ರವೇಶ ನಿಷೇಧ ಮಾಡಲಾಗುತ್ತಿದೆ. ಇದನ್ನು ತಮ್ಮ ಹೆಸರಿನಲ್ಲಿ, ಪಕ್ಷದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ನೀವು ಒಂದು ನಿಲುವು ತಾಳಿದ್ದೀರಿ. ಅದಕ್ಕೆ ನಾನು ಸ್ವಾಗತ ಮಾಡುತ್ತೇನೆ. ಇದರ ಜೊತೆಗೆ ಕಠಿಣ ನಿಲುವು ತೆಗೆದುಕೊಳ್ಳಬೇಕು'' ಎಂದರು.