ಯಾವ ಪುರುಷಾರ್ಥಕ್ಕೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ?
ಬೆಂಗಳೂರು, ಫೆಬ್ರವರಿ 23 : "ಬೆಂಗಳೂರಿಗೆ ನಿಜಕ್ಕೂ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೇಕೆ? ಈ ಏರ್ ಶೋ ಯಾಕಾದ್ರೂ ಮಾಡ್ತಾರೋ?" ಎಂಬ ಪ್ರಶ್ನೆಗಳು ಕನ್ನಡಿಗರನ್ನು, ಅದರಲ್ಲೂ ಬೆಂಗಳೂರಿನ ಜನತೆಯನ್ನು ಬಿಟ್ಟುಬಿಡದೆ ಕಾಡುತ್ತಿವೆ.
ಫೆಬ್ರವರಿ 19ರಂದು ಎರಡು ಸೂರ್ಯ ಕಿರಣ್ ಯುದ್ಧ ವಿಮಾನಗಳು ಆಗಸದಲ್ಲಿಯೇ ಒಂದಕ್ಕೊಂದು ತಗುಲಿ, ನೆಲಕ್ಕಪ್ಪಳಿಸಿ, ಒಬ್ಬ ಪೈಲಟ್ ನನ್ನು ಬಲಿ ತೆಗೆದುಕೊಂಡಿದ್ದು, ಫೆಬ್ರವರಿ 23ರಂದು ಕೇಳರಿಯದ ಬೆಂಕಿ ಅವಘಡ ಸಂಭವಿಸಿ 300ಕ್ಕೂ ಹೆಚ್ಚು ಕಾರು, ದ್ವಿಚಕ್ರ ವಾಹನಗಳು ಅಗ್ನಿಗಾಹುತಿಯಾಗಿದ್ದು ಮಾತ್ರ ಈ ಪ್ರಶ್ನೆಗಳೇಳಲು ಕಾರಣಗಳಲ್ಲ.
ಏರೋ ಇಂಡಿಯಾ : ಅಗ್ನಿಯ ಆಕ್ರೋಶಕ್ಕೆ ಬಲಿಯಾದ ವಾಹನಗಳೆಷ್ಟು?
ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಆಯೋಜಕರು ಎಡವಿರಬಹುದು. ಹನ್ನೊಂದು ಆವೃತ್ತಿಗಳಲ್ಲಿಯೂ ಆಗಿರದಂಥ, ಊಹಿಸಲಾರದಂಥ ಘಟನೆಗಳು ನಡೆದು ಹನ್ನೆರಡನೇ ಆವೃತ್ತಿಗೆ ಕಪ್ಪುಚುಕ್ಕೆ ಅಂಟುವಂತೆ ಮಾಡಿರಬಹುದು. ಈ ಶೋ ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿರಬಹುದು. ಈ ವೈಮಾನಿಕ ಪ್ರದರ್ಶನದಿಂದ ಆಯೋಜಕರಿಗೆ ಭರ್ಜರಿ ಲಾಭವೂ ಆಗಿರಬಹುದು.
ಚಿತ್ರಗಳಲ್ಲಿ: ಏರೋ ಇಂಡಿಯಾ ಅಗ್ನಿ ಅವಘಡದಲ್ಲಿ ಸುಟ್ಟ ಕಾರುಗಳು
ಆದರೆ, ಈ ಶೋ ಬೆಂಗಳೂರಿಗೆ ಬೇಕೆ? ಈ ಶೋವನ್ನು ಬೆಂಗಳೂರಿನಲ್ಲಿಯೇ ನಡೆಸುವುದರಿಂದ ಬೆಂಗಳೂರಿನ ಗೌರವ ಹೆಚ್ಚುವುದೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರಿಸಿದರೆ ಬೆಂಗಳೂರಿನ ಗೌರವಕ್ಕೆ, ಘನತೆಗೆ ಚ್ಯುತಿ ಬರುವುದೆ? ಯಾವ ಪುರುಷಾರ್ಥಕ್ಕಾಗಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ? ಉತ್ತರ ಕಂಡುಕೊಳ್ಳಬೇಕಾದ ಸಮಯ ಬಂದಿದೆ.
ಇದಕ್ಕೆ ಒಕ್ಕೊರಲ ವಿರೋಧ ವ್ಯಕ್ತವಾಗಿತ್ತು
ಎರಡು ವರ್ಷಗಳಿಗೊಮ್ಮೆ ನಡೆಯುವ, ಅತ್ಯಂತ ಪ್ರತಿಷ್ಠೆಯ ಮತ್ತು ಅತ್ಯಂತ ನಿರೀಕ್ಷೆಯ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಸ್ಥಳಾಂತರಿಸಿ ಉತ್ತರ ಪ್ರದೇಶದ ಆಗ್ರಾಕ್ಕೋ, ಮತ್ತಾವುದೋ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹ ಬಂದಾಗ, ಬೆಂಗಳೂರಿನ ಜನತೆ ಒಕ್ಕೊರಲಿನಿಂದ ವಿರೋಧಿಸಿದ್ದರು. ಇದು ಬೆಂಗಳೂರಿನ ಹೆಮ್ಮೆಯ ಕಾರ್ಯಕ್ರಮವಾಗಿರುವುದರಿಂದ ಇದನ್ನು ಇಲ್ಲಿಯೇ ನಡೆಸಬೇಕೆಂದು ಒತ್ತಡ ಬಂದಾಗ, ಇಲ್ಲಿಂದ ಸ್ಥಳಾಂತರಿಸುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಗೆ ನೀಡಿದ್ದರು.
ಏರೋ ಇಂಡಿಯಾ : ಸುಟ್ಟು ಬಿಸಾಕಿದ ಸಿಗರೇಟು ಅನಾಹುತ ಮಾಡಿತೆ?
ಏರೋಬ್ಯಾಟಿಕ್ಸ್ ಸ್ಟಂಟ್ಸ್ ಬೇಕಿತ್ತಾ?
ಈ ಎರಡು ಅನಾಹುತಗಳು ನಡೆದ ನಂತರ, ಹಿರಿಯ ವಿಜ್ಞಾನಿಯಾಗಿರುವ ಹಾಲ್ದೊಡ್ಡೇರಿ ಸುಧೀಂದ್ರ ಅವರು, ತಮ್ಮ ಅನುಭವದ ಮೂಸೆಯಿಂದ ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಏರೋ ಇಂಡಿಯಾ ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನರನ್ನು ಆಕರ್ಷಿಸಲೆಂದೇ ಮತ್ತು ಹೆಚ್ಚು ಹಣವನ್ನೂ ಗಳಿಸಲೆಂದು ಸೂರ್ಯ ಕಿರಣ್ ಮತ್ತು ಸಾರಂಗ್ ಏರೋಬ್ಯಾಟಿಕ್ಸ್ ಅನ್ನು ಅಳವಡಿಸಲಾಯಿತು. ಆಗಸದಲ್ಲಿ ವಿಮಾನಗಳು ಪ್ರದರ್ಶಿಸುವ ಸ್ಟಂಟ್ ಗಳನ್ನು, ಜನರ ಸುರಕ್ಷತೆಯ ದೃಷ್ಟಿಯಿಂದ ಮುಂದುವರಿದ ರಾಷ್ಟ್ರಗಳೇ ನಿಷೇಧಿಸಿವೆ. ಆದರೆ, ಹೊರಗಿನ ಏಜೆನ್ಸಿಗಳು ಭಾರೀ ಹಣ ಗಳಿಕೆಯ ದೃಷ್ಟಿಯಿಂದ ಈ ಸ್ಟಂಟ್ ಗಳನ್ನು ಮುಂದುವರಿಸಿವೆ. ಇದು ಸರಿಯೆ ಎಂದು ಪ್ರಶ್ನಿಸಿದ್ದಾರೆ.
ಸೂರ್ಯಕಿರಣ ಟೀಮ್ ಮೃತ ಪೈಲಟ್ ಸಾಹಿಲ್ಗೆ ಗೌರವ ಸಲ್ಲಿಸಿದ್ದು ಹೀಗೆ
ಸ್ಟಂಟ್ಸ್ ಡೇಂಜರಸ್ ಮತ್ತು ರಿಸ್ಕಿ
ನಾವೆಷ್ಟೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೂ ನಡೆಯುವ ಅಪಘಾತಗಳು ಅಪಘಾತಗಳೇ. ಅವನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಪೈಲಟ್ ಗಳು ಸಾಕಷ್ಟು ಅನುಭವಿಗಳಾಗಿದ್ದರೂ, ವಿಮಾನಗಳು ಆಗಸದಲ್ಲಿ ನಡೆಸುವ ಆಕರ್ಷಕ ಫಾರ್ಮೇಷನ್ ಗಳು ಡೇಂಜರಸ್ ಮತ್ತು ರಿಸ್ಕಿ. ಅಲ್ಲದೆ, ಈ ಯುದ್ಧ ವಿಮಾನಗಳು 1970-80ನೇ ದಶಕದವು. ಫೆಬ್ರವರಿ 19ರಂದು ನಡೆದ ಆ ದುರ್ಘಟನೆಯ ಹಿಂದೆ ಯಾವುದೇ ದುಷ್ಟರ ಕೈವಾಡ ಇದೆ ಎಂದು ಅನ್ನಿಸದಿದ್ದರೂ, ಇಂಥ ಸ್ಟಂಟ್ ಗಳು ಬೇಕಿದ್ದವಾ ಎಂಬುದು ಹಾಲ್ದೊಡ್ಡೇರಿ ಸುಧೀಂದ್ರ ಅವರ ವಸ್ತುನಿಷ್ಠ ಅನಿಸಿಕೆಗಳು.
ತರಾತುರಿಯಲ್ಲಿ ಆಯೋಜಿಸಿದ ಪಾರ್ಕಿಂಗ್
ಇನ್ನು ಕಾರು ಪಾರ್ಕಿಂಗ್ ವಿಷಯಕ್ಕೆ ಬಂದಾಗ, ಸಾವಿರಾರು ಕಾರುಗಳನ್ನು ನಿಲ್ಲಿಸುವ ಸ್ಥಳದಲ್ಲಿ ಏನು ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಮೊದಲೇ ಬೆಂಗಳೂರಿನ ತಾಪಮಾನ 36 ಡಿಗ್ರಿಗಿಂತ ಹೆಚ್ಚು ಏರುತ್ತಿದೆ, ಕಾರುಗಳ ಆಂತರಿಕ ತಾಪಮಾನವೂ 50 ಡಿಗ್ರಿಯಷ್ಟಿರುತ್ತದೆ. ಇನ್ನು ಒಣ ಹುಲ್ಲು ಯಥೇಚ್ಚವಾಗಿದ್ದ, ಒಣಗಿದ ತರಗೆಲೆಗಳು ಹರಡಿಕೊಂಡಿದ್ದ ಸುವಿಶಾಲ ಜಾಗದಲ್ಲಿ ತರಾತುರಿಯಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿತ್ತು. ಬೇಜವಾಬ್ದಾರಿಯಿಂದ ಎಸೆಯಲಾದ ಸಿಗರೇಟು ತುಂಡು ಮತ್ತು ಕೆಲ ಕಾರುಗಳ ಲೀಕ್ ಆದ ತೈಲದಿಂದ ಇಂಥ ದೊಡ್ಡ ಅನಾಹುತ ಸಂಭವಿಸಿದೆ. ಇದನ್ನು ನಿಯಂತ್ರಿಸಲು ಎಷ್ಟು ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿದ್ದವು?
ಸಾಮಾನ್ಯರ ಕೈಗೆಟುಕದ ಟಿಕೆಟ್ ದರ
ಏರೋ ಇಂಡಿಯಾ ದರ ಸಾಮಾನ್ಯರ ಕೈಗೆಟುಕದ್ದು. ಏರ್ ಶೋ ನೋಡಲು ಒಬ್ಬ ವ್ಯಕ್ತಿ ಒಂದು ದಿನಕ್ಕೆ 600 ರೂಪಾಯಿ ತೆರಬೇಕು. ಅದೂ 600 ರೂಪಾಯಿ ಕೊಟ್ಟವರಿಗೆ ಕೇವಲ ವಿಮಾನ ಏರುವ- ಆಗಸದಲ್ಲಿ ಪಲ್ಟಿ ಹೊಡೆದು ಇಳಿಯುವುದನ್ನು ನೋಡಲು ಮಾತ್ರವೇ ಅವಕಾಶ. ವೈಮಾನಿಕ ವಸ್ತು ಪ್ರದರ್ಶನ ನೋಡಬೇಕೆಂದರೆ 1800 ರೂಪಾಯಿ ತೆರಬೇಕು. ಬೆಲೆ ನೋಡಿದರೆ ಗೊತ್ತಾಗುತ್ತದೆ, ಏರ್ ಶೋ ಎಂಬುದು ಪಕ್ಕಾ ವ್ಯಾಪಾರ ಎಂದು.