ರಾಜ್ಯದ ಹಾಲು ಉತ್ಪಾದಕರ ಪಾಲಿನ ಮರಣ ಶಾಸನ ಆರ್ ಸಿ ಇ ಪಿ: ಡಿಕೆ ಸುರೇಶ್
ಬೆಂಗಳೂರು ನವೆಂಬರ್ 02: ಎಫ್ ಟಿ ಎ ಅಡಿಯಲ್ಲಿ ಬೇರೆ ದೇಶದ ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ಇತರೆ ದೇಶಗಳಿಗೆ ಮಾರಾಟ ಮಾಡಲು ಅನುವು ನೀಡುವ ಆರ್ ಸಿ ಇ ಪಿ ಕಾಯ್ದೆಗೆ ಸಹಿ ಹಾಕುವುದು, ನಮ್ಮ ರಾಜ್ಯದ ರೈತರು ಹಾಗೂ ಹಾಲು ಉತ್ಪಾದಕರ ಪಾಲಿನ ಮರಣ ಶಾಸನಕ್ಕೆ ಸಹಿ ಹಾಕಿದಂತೆ ಎಂದು ಸಂಸದ ಡಿ ಕೆ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಮೂರು ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನರ ರೈತರು ಹಾಗೂ ಹಾಲು ಉತ್ಪಾದಕರು ಸೇರಿದಂತೆ ದೇಶದ ಮೂರು ಕೋಟಿ ಹಾಲು ಉತ್ಪಾದಕರ ಪಾಲಿನ ಮರಣ ಶಾಸನ ಎಂದು ಆಕ್ರೋಶ ವ್ಯಕ್ತಪಡಿದರು.
RCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEP
ಪ್ರತಿಭಟನೆಯಲ್ಲಿ ಬಮೂಲ್ ನ ನಿರ್ದೇಶಕರುಗಳಾದ ಹರೀಶ್ ಕುಮಾರ್, ಕೇಶವಮೂರ್ತಿ ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಹಾಲು ಉತ್ಪಾದಕರು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ದ ದನಿ ಎತ್ತಿದರು.
3 ಕೋಟಿ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯ
ರೈತರ ಜೀವನ ಮಟ್ಟವನ್ನು ಸುಧಾರಿಸುವ ಭರವಸೆ ನೀಡಿದ ಪ್ರಧಾನಿ ಮೋದಿ ಅವರು, ಇದೀಗ ರೈತರ ಆದಾಯದ ಮೂಲವಾದ ಹಾಲು ಉತ್ಪಾದನೆಗೆ ಪೆಟ್ಟು ನೀಡುವ ಕಾರ್ಯಕ್ಕೆ ಕೈ ಇಟ್ಟಿದ್ದಾರೆ. ರೈತರೇ ಈ ದೇಶದ ಬೆನ್ನೆಲಬು ಎಂದು ಎಲ್ಲ ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇದನ್ನು ನಂಬಿ ದೇಶದ ಶೇಕಡಾ 60 ರಷ್ಟು ಜನರು ಇಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ.
ಈ ಕ್ಷೇತ್ರದಲ್ಲಿ ಸ್ವಾವಲಂಬನೆಯಿಂದ ಉತ್ತಮ ಪ್ರಗತಿಯನ್ನು ನಾವು ತೋರಿಸಿದ್ದೇವೆ. ದೇಶದಲ್ಲಿ ಆರ್ಥಿಕ ಹಿಂಜರಿತ ಇದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕತ್ತಿಲ್ಲ. ರೈತ ಸಮುದಾಯದ ಅಭಿವೃದ್ದಿಗೆ ಶ್ರಮಿಸಲಿದ್ದೇವೆ ಎನ್ನುವ ಭರವಸೆಯನ್ನು ನರೇಂದ್ರ ಮೋದಿ ಅವರು ನೀಡಿದ್ದರು. ಆದರೆ, ಈಗ ಈ ಕಾಯ್ದೆಗೆ ಸಹಿ ಹಾಕುವ ಮೂಲಕ ನೀವು ದೇಶದ 3 ಕೋಟಿ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದೀರಿ ಎಂದರು.
ಆಕ್ರೋಶ ವ್ಯಕ್ತಪಡಿಸಿದ ಡಿಕೆ ಸುರೇಶ್
ನವೆಂಬರ್ 4ರಂದು ಈ ಕಾಯ್ದೆಗೆ ಸಹಿ ಹಾಕುವ ಮೂಲಕ ವಿದೇಶದಲ್ಲಿ ನೀವು ಚಪ್ಪಾಳೆ ತಟ್ಟಿಸಿಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ ಈ ದೇಶದ ಜನರ ಸಿಟ್ಟಿಗೆ ಗುರಿಯಾಗುತ್ತೀರಿ ಎಂದು ಹೇಳಿದರು. ದಿನ ಬೆಳಿಗ್ಗೆ ಎದ್ದು ಕಷ್ಟ ಪಟ್ಟು ಡೈರಿಗೆ ಹಾಕುವ ಕಷ್ಟದ ಕೈಗಳಿಗೆ ನೀವು ವಿಷ ನೀಡುತ್ತಿದ್ದೀರಿ ಎಂದು ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಧ್ವನಿ ಎತ್ತಬೇಕು
ಆರ್ ಸಿ ಇ ಪಿ ಬಗ್ಗೆ ರಾಜ್ಯ ಸರಕಾರ ಧ್ವನಿ ಎತ್ತಬೇಕು. ರಾಜ್ಯ ಸರಕಾರ ವಿರೋಧ ಪಕ್ಷದ ನಾಯಕರನ್ನು ಕರೆದುಕೊಂಡು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕು. ಈ ಬಗ್ಗೆ ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಸದಸ್ಯರ ಪರವಾಗಿ ಹೇಳಿದರು.
ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರಾಜ್ಯದ ಹಾಲು ಉತ್ಪಾದಕರು ಹಾಗೂ ರೈತರ ಜೀವನವನ್ನು ದುಸ್ತಿತಿಗೆ ತಳ್ಳುವ ಒಪ್ಪಂದ ಇದಾಗಿದೆ. ಈ ಒಪ್ಪಂದದ ವಿರುದ್ದ ನಾವು ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿದ್ದೇವೆ. ಇಂದು ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಗಳೀಗೆ ಮನವಿ ಸಲ್ಲಿಸುತ್ತಿದ್ದು, ನವೆಂಬರ್ 4 ರಂದು ಈ ಒಪ್ಪಂದಕ್ಕೆ ಸಹಿ ಹಾಕಿದ ಪಕ್ಷದಲ್ಲಿ ರಾಜ್ಯದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.