ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 27: ದೆಹಲಿಯಿಂದ ಬೆಂಗಳೂರಿಗೆ ಬಂದಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಅಬ್ಬರದ ಮೆರವಣಿಗೆ, ತೀಕ್ಷ್ಣ ಭಾಷಣದ ನಂತರ ಸದಾಶಿವನಗರದ ಮನೆಯಲ್ಲಿ ನೆಲೆಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನಾಡಿನ ಸಮಸ್ತ ಜನತೆಗೆ ಶುಭಹಾರೈಸಿದ್ದಾರೆ. ಈ ನಡುವೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ಪಡೆಯಲು ಕಾರಣರಾದ ಎಲ್ಲಾ ದೇವಾನುದೇವತೆಗಳ ಹರಕೆಯನು ಒಂದೊಂದಾಗಿ ತೀರಿಸಲು ಡಿಕೆಶಿ ಮುಂದಾಗಿದ್ದಾರೆ.
ಕಾಡು ಸಿದ್ದೇಶ್ವರ ಸ್ವಾಮೀಜಿ ಆತ್ಮವು ಅಜ್ಜಯ್ಯನಲ್ಲಿ ಐಕ್ಯವಾಗಿದೆ ಎಂಬ ಪ್ರತೀತಿಯಿದೆ. ನೊಣವಿನಕೆರೆಗೆ ತೆರಳಲು ಆಗದಿದ್ದಾಗ ನಾಗರಭಾವಿಯಲ್ಲಿರುವ ಶಾಖಾಮಠಕ್ಕೆ ತೆರಳಿ ಕುಂಕುಮ ಪ್ರಸಾದ ಪಡೆದು ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಿದ್ದರು. ದ್ವಾರಕನಾಥ್ ಗುರೂಜಿ ಅವರ ಸಲಹೆಯಂತೆ ದೇಗುಲ ದರ್ಶನ ಯಾತ್ರೆ ಮುಂದುವರೆಸುವ ನಿರೀಕ್ಷೆಯಿದೆ.
"ಸತ್ಯ ನ್ಯಾಯ ಕಾಲ ಉತ್ತರ ನೀಡಲಿದೆ" ಡಿಕೆಶಿ ರಿಟರ್ನ್ಸ್, ಮುಂದೇನು?
"ಅಕ್ಟೋಬರ್ 30 ರಂದು ಸುಪ್ರೀಂಕೋರ್ಟಿನಲ್ಲಿ ಕೇಸಿದೆ. ವಕೀಲರ ಜೊತೆ ಮಾತುಕತೆ ನಡೆಸಬೇಕಿದೆ. ಹಿರಿಯರ ಪೂಜೆ ಬಾಕಿ ಉಳಿದಿದೆ ಅದನ್ನು ಪೂರೈಸಬೇಕಿದೆ. ನನ್ನ ಏಳಿಗೆಗಾಗಿ ಅನೇಕ ಜನರು ಪ್ರಾರ್ಥಿಸಿದ್ದಾರೆ, ಹರಕೆ ಕಟ್ಟಿಕೊಂಡಿದ್ದಾರೆ. ನಾನು ಎಲ್ಲರಿಗೂ ಋಣಿ" ಎಂದರು.
ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ 11 ಗಂಟೆಗೆ ತುಮಕೂರು ಜಿಲ್ಲೆಯ ಕುಣಿಗಲ್ನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆಯಬೇಕಿತ್ತು. ಆದರೆ, ತುಸು ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ಕಾರ್ಯಕ್ರಮ ವಿಳಂಬವಾಗಿದೆ.
ಮಧ್ಯಾಹ್ನದ ನಂತರ ಮೊದಲಿಗೆ ಅಜ್ಜಯ್ಯನ ಮಠಕ್ಕೆ ತೆರಳಿದ್ದಾರೆ. ಕಾಡು ಸಿದ್ದೇಶ್ವರ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ತುಮಕೂರಿನ ಶಿರಾದ ಸ್ಫಟಿಕ ಮಠಕ್ಕೆ ತೆರಳಿ ನಂಜಾವಧೂತ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ಇದಲ್ಲದೆ, ಕನಕಪುರ- ಸಾತನೂರು ರಸ್ತೆಯ ಕಬ್ಬಾಳಮ್ಮ ದೇಗುಲ, ಬಳ್ಳಾರಿಯ ಮೈಲಾರ ಲಿಂಗ ದೇಗುಲ ಹೀಗೆ ಅನೇಕ ದೇಗುಲಗಳಿಗೆ ಹೋಗುವ ಸಾಧ್ಯತೆಯಿದೆ. ಕಾಲಾವಕಾಶ ಕಡಿಮೆ ಇರುವುದರಿಂದ ಹಾಸನಾಂಬ ದೇಗುಲಕ್ಕೆ ಹೋಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಇತ್ತೀಚೆಗೆ ಹಾಸನಾಂಬೆ ದರ್ಶನ ಪಡೆದು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರಗಳು: ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್ ಆಗಮನದಿಂದ ದೀಪಾವಳಿ ಸಡಗರ ಹೆಚ್ಚಾಗಿದ್ದು, ಕುಟುಂಬಸ್ಥರು ಸದಾಶಿವ ನಗರ ಮನೆಗೆ ಧಾವಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ದಸರಾ ಹಬ್ಬ ಹಾಗೂ ಗಣೇಶ ಹಬ್ಬಕ್ಕೆ ಕುಟುಂಬದಿಂದ ದೂರವಿದ್ದರು. ಹಿರಿಯರಿಗೆ ಎಡೆ ಇಡಲು ಅವಕಾಶ ನೀಡಲಿಲ್ಲ ಎಂದು ನೊಂದುಕೊಂಡಿದ್ದರು. ಆದರೆ, ಈಗ ಕುಟುಂಬಸ್ಥರು, ಆಪ್ತರು, ಮಕ್ಕಳೊಡನೆ ಬೆರೆಯುವ ಅವಕಾಶ ಸಿಕ್ಕಿದೆ. ಆದರೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹೆಣಗಾಡುವಂತಾಗಿದೆ.