ಉಪಚುನಾವಣೆ ಅಖಾಡಕ್ಕೂ ಮುನ್ನ ಡಿಕೆಶಿಗೆ ಮಹತ್ವದ ಜವಾಬ್ದಾರಿ!
ಬೆಂಗಳೂರು, ಅಕ್ಟೋಬರ್ 31: ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಕಾಂಗ್ರೆಸ್ ನ ಕನಕಪುರ ಶಾಸಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಉಪಚುನಾವಣೆಯ ಜವಾಬ್ದಾರಿ ನೀಡಲಿದೆಯಾ?
ಕಾಂಗ್ರೆಸ್ ಹಲವು ನಾಯಕರು, ವಿಶೇಷವಾಗಿ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡವರು ಈಗಾಗಲೇ ಅವರನ್ನು ಭೇಟಿಯಾಗಿ ಉಪಚುನಾವಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಒತ್ತಾಯಿಸಿದ್ದಾರೆ.
15 ಕ್ಷೇತ್ರದ ಉಪ ಚುನಾವಣೆ; ಮಹತ್ವದ ಸಭೆ ನಡೆಸಿದ ಬಿಎಸ್ವೈ, ಕಟೀಲ್
ಅಷ್ಟೇ ಅಲ್ಲ, ಪಕ್ಷದಲ್ಲೂ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.
ಹೈಕಮಾಂಡ್ ಮಟ್ಟಿಗೆ ನಿಷ್ಠಾವಂತ ನಾಯಕ
ಪಕ್ಷ ನೀಡಿದ ಯಾವುದೇ ಜವಾಬ್ದಾರಿಯನ್ನೇ ಆದರೂ ಚಾಚೂ ತಪ್ಪದಂತೆ ನಿಭಾಯಿಸಿದವರು ಡಿಕೆ ಶಿವಕುಮಾರ್. ಟ್ರಬಲ್ ಶೂಟರ್ ಎಂಬ ಪದಕ್ಕೆ ಅನ್ವರ್ಥವಾಗಿರುವ ಅವರು, ಗುಜರಾತಿನ ರಾಜ್ಯಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಶಾಸಕರನ್ನು ಬಿಡದಿ ಬಳಿಯ ರೆಸಾರ್ಟ್ ನಲ್ಲಿ ತಂದಿಟ್ಟುಕೊಂಡಾಗಿನಿಂದ ಹಿಡಿದು, ನಂತರ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಮುಂಬೈಯ ರೆಸಾರ್ಟ್ ನಲ್ಲಿ ತಂಗಿದ್ದಾಗಲೂ ಅಲ್ಲಿಗೆ ತೆರಳಿ, ಪೊಲೀಸರಿಗೇ ಸೆಡ್ಡು ಹೊಡೆದು ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದವರು ಡಿಕೆಶಿ. ಈ ಕಾರಣದಿಂದಲೇ ಹೈಕಮಾಂಡ್ ಕಣ್ಣಲ್ಲೂ ಅವರು ಪಕ್ಷದ ನಿಷ್ಠಾವಂತ ನಾಯಕ ಎಂದೇ ಹೆಸರಾದವರು.
ಜವಾಬ್ದಾರಿ ನಿಭಾಯಿಸುವ ಜಾಣ್ಮೆ
ಕಳೆದ ವರ್ಷ ಬಳ್ಳಾರಿಯಲ್ಲಿ ನಡೆದಿದ್ದ ಲೋಕಸಭಾ ಉಪಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಡಿಕೆ ಶಿವಕುಮಾರ್ ಅವರು, ಬಳ್ಳಾರಿಯ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಗೆಲುವು ಸಾಧಿಸುವಂತೆ ಮಾಡಿದ್ದರು. ಆ ಎಲ್ಲಾ ಶ್ರೇಯಸ್ಸೂ ಡಿಕೆ ಶಿವಕುಮಾರ್ ಅವರಿಗೇ ಸಂದಿತ್ತು.
ಉಪ ಚುನಾವಣಾ ಅಖಾಡಕ್ಕೆ ಡಿಕೆಶಿ ಆಹ್ವಾನಿಸಿದ ಎಂಟಿಬಿ ನಾಗರಾಜ್
ಅನುಕಂಪದ ಅಲೆ?
ಇದೀಗ ಉಪಚುನಾವಣೆಯ ಜವಾಬ್ದಾರಿಯನ್ನೂ ಅವರ ಹೆಗಲಿಗೇರಿಸಿದರೆ ಪಕ್ಷಕ್ಕೆ ಬಲ ಬಂದಂತಾಗುತ್ತದೆ. ಅದೂ ಅಲ್ಲದೆ, ಜೈಲಿನಿಂದ ಹೊರಬಂದಿರುವ ಅವರ ಬಗ್ಗೆ ಅನುಕಂಪದ ಅಲೆಯೂ ಇದ್ದಿರಬಹುದು. ಬೆಂಗಳೂರಿಗೆ ಅವರು ವಾಪಸ್ಸಅದ ವೇಳೆ ಸಿಕ್ಕ ಸ್ವಾಗತವೂ ಅವರಿಗಿರುವ ಜನಬೆಂಬಲಕ್ಕೆ ಸಾಕ್ಷಿಯಾಗಿದೆ. ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಪರೋಕ್ಷ ಕಾರಣ ಸಿದ್ದರಾಮಯ್ಯ ಎಂಬ ವದಂತಿಯೂ ಇರುವುದರಿಂದ ಡಿಕೆಶಿ ಅವರಿಗೇ ಉಪಚುನಾವಣೆಯ ಮುಂದಾಳತ್ವದ ಜವಾಬ್ದಾರಿ ನೀಡುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ನ ಹಲವು ಮುಖಂಡರು ಬಂದಿದ್ದಾರೆ.
ಡಿಸೆಂಬರ್ 5ರಂದು ಉಪಚುನಾವಣೆ
15 ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲು ಬಿಜೆಪಿ ತೀರ್ಮಾನಿಸಿದೆ. ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್ ಬಹುತೇಕ ಖಚಿತವಾಗಿದೆ.