ಡಿಕೆಶಿ ಮನೆಮುಂದೆ ಜನಜಾತ್ರೆ: ಹಬ್ಬ ಮುಗಿಯವರೆಗೂ ಬರಬೇಡಿ
ಬೆಂಗಳೂರು, ಮಾರ್ಚ್ 21: ದೇಶದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಮಾಲ್, ಚಿತ್ರಮಂದಿರ, ಐಟಿ ಕಂಪನಿಗಳು, ಸಭೆ, ಸಮಾರಂಭ, ಪಬ್, ಕ್ಲಬ್, ಬಹುತೇಕ ರಸ್ತೆಗಳು ಕೂಡ ಖಾಲಿಯಾಗಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಡಿಕೆ ಶಿವಕುಮಾರ್ ಮನೆ ಮುಂದೆ ಮಾತ್ರ ಜಾತ್ರೆಯಂತೆ ವಾತಾವರಣ ನಿರ್ಮಾಣವಾಗಿದೆ.
ಪ್ರತಿದಿನವೂ ಡಿಕೆಶಿ ಮನೆಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಕೊರೊನಾ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ತಮ್ಮ ನೆಚ್ಚಿನ ನಾಯಕನಿಗೆ ಶುಭಕೋರಲು ಮನೆಮುಂದೆ ಕಾಯುತ್ತಿದ್ದಾರೆ. ಈ ಕುರಿತು ಡಿಕೆ ಶಿವಕುಮಾರ್ ಮಾತನಾಡಿದ್ದು, ಹಬ್ಬ ಮುಗಿಯವರೆಗೂ ಮನೆ ಹತ್ರ ಯಾರು ಬರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
ಕೊರೊನಾ ಭೀತಿಯಿದ್ದರೂ ಡಿಕೆಶಿ ಮನೆ ಮುಂದೆ ಜನಸಾಗರ!
'ಕೊರೋನಾ ಪ್ರಮಾಣ ಹೆಚ್ಚಾಗ್ತಿದೆ. ಹಬ್ಬ ಮುಗಿಯುವವರೆಗೆ ಕಾರ್ಯಕರ್ತರು ಬರಬಾರದು, ಹಬ್ಬದ ಮುಗಿದ ನಂತರ ನಾನೇ ಭೇಟಿ ನೀಡ್ತೇನೆ, ಬೆಂಗಳೂರಿನ ಕ್ಷೇತ್ರಗಳಿಗೆ ನಾನೇ ಬರ್ತೇನೆ, ನೀವು ಮನೆ ಮುಂದೆ ಬಂದು ನನ್ನ ಮೇಲೆ ಒತ್ತಡ ತರಬೇಡಿ ಸರ್ಕಾರದ ಜೊತೆ ನಾವು ಸಹಕಾರ ನೀಡಬೇಕು' ಎಂದು ಮುಖಂಡರು, ಕಾರ್ಯಕರ್ತರಿಗೆ ಡಿಕೆಶಿ ಮನವಿ ಮಾಡಿದ್ದಾರೆ.
'ಅಸೆಂಬ್ಲಿಯಲ್ಲೂ ನಾನು ಭಾಗವಹಿಸಬೇಕಿದೆ, ನಾನು ಸುಮ್ಮನೆ ಕೂರಲ್ಲ, ಕೆಲಸ ಮಾಡಬೇಕಿದೆ, ಬೇಕಾದ ಒಬ್ಬೊಬ್ಬರನ್ನೇ ನಾನು ಕರೆಸಿ ಮಾತನಾಡ್ತೇನೆ. ಇಂದು, ನಾಳೆ ಎಲ್ಲ ಕಾರ್ಯಕ್ರಮ ರದ್ಧು ಮಾಡ್ತೇನೆ, ಯುಗಾದಿ ಮುಗಿದ ನಂತರ ರಾಜ್ಯ ಪ್ರವಾಸ ಎಲ್ಲಾ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡ್ತೇನೆ. ಸೋತವರು, ಗೆದ್ದ ಶಾಸಕರ ಜೊತೆಗೆ ಸಭೆ ನಡೆಸಬೇಕಿದೆ, ಮಾಜಿ ಸಚಿವರು, ಮುಖಂಡರ ಜೊತೆ ಮಾತನಾಡಬೇಕಿದೆ' ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಇನ್ನು ತಮಿಳುನಾಡಿನಿಂದ ಡಿಕೆಶಿ ಭೇಟಿ ಮಾಡಲು ಕಾರ್ಯಕರ್ತರು ಬರುತ್ತಿರುವ ಬಗ್ಗೆ ಮಾತನಾಡಿದ ಡಿಕೆಶಿ 'ತಮಿಳುನಾಡು ಭಾಗದ ಕಾರ್ಯಕರ್ತರು ಹಾಗೂ ಯಾರೂ ಒಂದು ವಾರ ನನ್ನನ್ನ ಭೇಟಿ ಮಾಡಬೇಡಿ, ಸದ್ಯಕ್ಕೆ ದೆಹಲಿಗೆ ತೆರಳಬೇಕಿದೆ, 15 ಲೀಡರ್ಸ್ ಇಲ್ಲಿಂದ ಹೋಗಬೇಕಿದೆ, ನಮ್ಮ ನಾಯಕರ ಜೊತೆ ನಾನು ಮಾತನಾಡಿದ್ದೇನೆ, ಸೋನಿಯಾ ಅಪಾಯಿಂಟ್ ಮಾಡಿದ ನಂತರದಿಂದಲೇ ನಾನು ಅಧ್ಯಕ್ಷ, ಬರೀ ಬಾವುಟ ತೆಗೆದುಕೊಳ್ಳೋದಷ್ಟೇ ಇರೋದು. ಅದರ ಬಗ್ಗೆ ಆಮೇಲೆ ಮಾತನಾಡೋಣ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.