ಯೋಗೇಶ್ವರ್ ಜೊತೆ ರಹಸ್ಯ ಮಾತುಕತೆ ಬಿಚ್ಚಿಟ್ಟ ಡಿಕೆಶಿ, ಯಡಿಯೂರಪ್ಪ ಟೆನ್ಷನ್!
ಬೆಂಗಳೂರು, ಜುಲೈ 30: 'ಡಿಕೆ ಶಿವಕುಮಾರ್ ಹಗಲು ಹೊತ್ತು ಮಾತ್ರ ಕಾಂಗ್ರೆಸ್ ಅಧ್ಯಕ್ಷ' ಎಂದು ನೂತನ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದ ಸಿಪಿ ಯೋಗೇಶ್ವರ್ ಹೇಳಿದ್ದರು. ಯೋಗೇಶ್ವರ್ ಹೇಳಿಕೆ ವಿರುದ್ಧ ಬಾಂಬ್ ಸಿಡಿಸಿರುವ ಡಿಕೆ ಶಿವಕುಮಾರ್ ಬಿಜೆಪಿ ಪಾಳಯಕ್ಕೆ ಆತಂಕ ಹೆಚ್ಚಿಸಿದ್ದಾರೆ.
Recommended Video
'ಹದಿನೈದು ದಿನದ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಬರ್ತೀನಿ ಎಂದು ಅಂಗಲಾಚಿ ಬೇಡಿಕೊಂಡಿದ್ದ ಯೋಗೇಶ್ವರ್ ಈಗ್ಯಾಕೇ ಏನೇನೋ ಮಾತಾಡುತ್ತಿದ್ದಾನೆ, ಮೆಂಟಲ್ ಆಗಿದ್ದಾನಾ? ಎಂದು ಕಾಂಗ್ರೆಸ್ ಅಧ್ಯಕ್ಷ ರಹಸ್ಯ ಭೇಟಿ ಬಗ್ಗೆ ಬಹಿರಂಗಪಡಿಸಿದ್ದಾರೆ.
ಡಿಕೆಶಿ ಹಗಲು ಹೊತ್ತು ಮಾತ್ರ ಕಾಂಗ್ರೆಸ್ ಅಧ್ಯಕ್ಷ, ಜೋಡೆತ್ತು ವಿರುದ್ಧ ಯೋಗೇಶ್ವರ್ ವಾರ್
ಯಡಿಯೂರಪ್ಪ ಸರ್ಕಾರವನ್ನು ಕಿತ್ತಾಕಲು ಯೋಗೇಶ್ವರ್ ಮತ್ತು ತಂಡ ಮುಂದಾಗಿತ್ತು ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಮಾತಿಗೆ ಮಾತು ಜೋಡಿಸಿದ ಎಂಎಲ್ಸಿ ನಾರಾಯಣ ಸ್ವಾಮಿ 'ಇದಕ್ಕೆ ನಾನೇ ಸಾಕ್ಷಿ' ಎಂದಿದ್ದಾರೆ. ಏನಿದು ಯೋಗೇಶ್ವರ್ ವರ್ಸಸ್ ಡಿಕೆ ಶಿವಕುಮಾರ್? ಮುಂದೆ ಓದಿ.....
ಕಾಂಗ್ರೆಸ್ ಪಕ್ಷ ಸೇರಲು ಬಂದಿದ್ದ
'ಸಿಪಿ ಯೋಗೇಶ್ವರ್ ಹದಿನೈದು ದಿನದ ಹಿಂದೆ ನನ್ನನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ, ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದ' ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಜೊತೆ ನಡೆದ ರಹಸ್ಯ ಮಾತುಕತೆಯನ್ನು ಬಹಿರಂಗಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವು ತರಿಸಿದೆ.
ಮೆಂಟಲ್ ಆಗಿದ್ದಾನಾ?
'ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಲಾಗುತ್ತೆ, ಹಾಗಾಗಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಬರ್ತೀನಿ ಎಂದು ನನ್ನ ಮುಂದೆ ಮನವಿ ಮಾಡಿದ್ದ. ನಾನೇ ಬೇಡ ಅಲ್ಲಿಯೇ ಇರು. ಬಿಜೆಪಿ ಪಕ್ಷದಲ್ಲಿ ಲಾಯಲ್ ಆಗಿ ಇರು ಅಂತ ಹೇಳಿ ಕಳಿಸಿ ಕೊಟ್ಟೆ. ಈಗ್ಯಾಕೇ ಏನೇನೋ ಮಾತನಾಡ್ತಿದ್ದಾನೆ. ಮೆಂಟಲ್ ಆಗಿದ್ದಾನಾ?' ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.
'ನಾನೇ ಸಾಕ್ಷಿ' ಎಂದ ನಾರಾಯಣ ಸ್ವಾಮಿ
''ಸಿಪಿ ಯೋಗೇಶ್ವರ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಗೆ ಬರ್ತೀನಿ ಎಂದು ಮನವಿ ಮಾಡಿರುವುದನ್ನು ನಾನು ಕಣ್ಣಾರೆ ಕಂಡಿದ್ದಾನೆ, ನಾನು ಆ ಸಮಯದಲ್ಲಿ ಅಲ್ಲೆ ಇದ್ದೆ'' ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಇರಲ್ಲ
''ಯಡಿಯೂರಪ್ಪ ಸಿಎಂ ಆಗಲೂ ಬಹಳಷ್ಟು ಶ್ರಮಪಟ್ಟೆ. ಆದ್ರೆ ನನ್ನನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಬಹಳ ದಿನ ಇರಲ್ಲ. ನಾನು ತಪ್ಪು ಮಾಡಿದ್ದೇನೆ. ನನ್ನನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಅಂತ ಮನವಿ ಮಾಡಿದ. ಅದ್ರೆ ನಮ್ಮ ಅಧ್ಯಕ್ಷರು ಇದಕ್ಕೆ ಒಪ್ಪಲಿಲ್ಲ. ಬುದ್ಧಿ ಮಾತು ಹೇಳಿ ಕಳುಹಿಸಿಕೊಟ್ಟರು' ಎಂದು ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭೇಟಿ ಮಾಡಿದ್ದು ನಿಜ, ಸ್ಥಳ ಹೇಳಲ್ಲ
'ಸಿಪಿ ಯೋಗಿಶ್ವರ್ ಎಷ್ಟು ಪಕ್ಷಗಳಿಗೆ ಸೇರಿದ್ರು. ಬಿಟ್ರು ಅನ್ನೋ ಎಲ್ಲ ಮಾಹಿತಿ ನಿಮ್ಮ ಬಳಿ ಇದೆ. ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಿದ್ರೆ ನಾವು ಸುಮ್ಮನಿರಲ್ಲ. ಹದಿನೈದು ದಿನಗಳ ಹಿಂದೆ ಭೇಟಿ ಮಾಡಿದ್ದು ನಿಜ. ಸಂಜೆ ಭೇಟಿ ಆಗಿದ್ದು ಸ್ಥಳದ ಬಗ್ಗೆ ಹೇಳಲ್ಲ' ಎಂದು ನಾರಾಯಣ ಸ್ವಾಮಿ ಕುತೂಹಲ ಮೂಡಿಸಿದರು.
ಯೋಗೇಶ್ವರ್ ಏನು ಹೇಳಿದ್ದರು?
'ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಮೂಲ ಕ್ಷೇತ್ರ ರಾಮನಗರದಲ್ಲಿಯೇ ಅವರ ಬುಡಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಡಿ.ಕೆ.ಶಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಡಿ.ಕೆ.ಶಿ ಹಾಗೂ ಕುಮಾರಸ್ವಾಮಿ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಾರೆ. ಇಷ್ಟು ದಿನ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಈಗ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಡಿ. ಕೆ. ಶಿವಕುಮಾರ್ ಹಗಲು ಹೊತ್ತಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ' ಎಂದು ಸಿಪಿ ಯೋಗೇಶ್ವರ್ ಟೀಕಿಸಿದ್ದಾರೆ.