ಗೃಹ ಸಚಿವ ಬೊಮ್ಮಾಯಿ ಬಗ್ಗೆ ಏಕವಚನ ಬಳಕೆ: ಡಿ.ಕೆ. ಶಿವಕುಮಾರ್ ವಿಷಾದ
ಬೆಂಗಳೂರು, ಆಗಸ್ಟ್ 15: ನಗರದ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಏಕವಚನ ಪ್ರಯೋಗಿಸಿದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
Recommended Video
ಬಸವರಾಜ ಬೊಮ್ಮಾಯಿ ಬಗ್ಗೆ, ಅವರು ಅಲಂಕರಿಸಿರುವ ಗೃಹ ಸಚಿವ ಸ್ಥಾನದ ಬಗ್ಗೆ ತಮಗೆ ಗೌರವವಿದೆ. ಉದ್ದೇಶಪೂರ್ವಕವಾಗಿ ತಾವು ಏಕವಚನ ಬಳಸಲಿಲ್ಲ. ಮಾತಿನ ಓಘದಲ್ಲಿ ಪ್ರಮಾದವಶಾತ್ ಪ್ರಯೋಗವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ನವೀನ್ ಬಿಜೆಪಿ ಬೆಂಬಲಿಗ: ಡಿ.ಕೆ. ಶಿವಕುಮಾರ್
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಈ ಗಲಭೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಆದರೆ ಬಿಜೆಪಿಯವರು ಇಂತಹ ಹೇಳಿಕೆ ನೀಡಿ ಎಂದು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಗಲಭೆಗೆ ಕಾಂಗ್ರೆಸ್ನವರ ಆಂತರಿಕ ಭಿನ್ನಾಭಿಪ್ರಾಯ ಕಾರಣ ಎಂದು ಬಸವರಾಜ ಬೊಮ್ಮಾಯಿ ಆರೋಪಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನಲು ಅವನು ಯಾರು? ಅವನು ಅಥಾರಿಟಿನಾ? ಸಬ್ ಇನ್ಸ್ಪೆಕ್ಟರಾ? ಆಯೋಗನಾ? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ನಲ್ಲಿ ಒಳಜಗಳವಿಲ್ಲ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟಗಳಿವೆ. ಬಿಜೆಪಿಯವರ ತಂತ್ರದಿಂದಲೇ ಕಾವಲ್ ಬೈರಸಂದ್ರದಲ್ಲಿ ಗಲಭೆ ನಡೆದಿದೆ. ಕಾಂಗ್ರೆಸ್ ಸಹ ಇದರ ಬಗ್ಗೆ ಆಂತರಿಕ ತನಿಖೆ ನಡೆಸಲಿದೆ. ಆದರೆ ಬಿಜೆಪಿಯವರು ನಮ್ಮ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿ ಹೆದರಿಸುವ ಮೂಲಕ ಅವರ ತಪ್ಪುಗಳನ್ನು ಮುಚ್ಚಿಹಾಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದಿದ್ದರು.