ರಾಜಕೀಯ ಪ್ರೇರಿತ ತಂತ್ರವನ್ನು ಎದುರಿಸಿ ಗೆಲ್ಲುವೆ: ಡಿಕೆಶಿ
Recommended Video
ಬೆಂಗಳೂರು, ಆಗಸ್ಟ್ 30: ಇಡಿ ವಿಚಾರಣೆಯಿಂದ ಮಧ್ಯಂತರ ರಕ್ಷಣೆ ಕೋರಿ ಸಲ್ಲಿಸಿದ್ದ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯು ರದ್ದಾದ ಹಿನ್ನೆಲೆಯಲ್ಲಿ ಇಡಿಯು ಸಮನ್ಸ್ ಹೊರಡಿಸಿದ್ದು, ವಿಚಾರಣೆಗೆ ಡಿಕೆ ಶಿವಕುಮಾರ್ ಇಂದು ಹಾಜರಾಗಬೇಕಿದೆ. ವಿಚಾರಣೆಗೆ ಹಾಜರಾಗುವ ಮುನ್ನಾ ಡಿ.ಕೆ.ಶಿವಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ರಾಜಕೀಯ ಪ್ರೇರಿತ ದಾಳಿ ನನ್ನ ಮೇಲೆ 2017 ರಿಂದ ನಡೆಯುತ್ತಲೇ ಇದೆ. ಆದರೆ ಇವೆಲ್ಲವನ್ನೂ ನಾನು ಎದಿರುಸುತ್ತೇನೆಯೇ ಹೊರತು ಯಾವುದರಿಂದಲೂ ಪಲಾಯನ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
LIVE Updates: ಡಿಕೆಶಿಗೆ ಮಧ್ಯಂತರ ರಕ್ಷಣೆ ಇಲ್ಲ, ಬಂಧನ ಸಾಧ್ಯತೆ
ನನ್ನ ಮನೆಯಲ್ಲಿ, ನನ್ನ ತಮ್ಮನ ಮನೆಯಲ್ಲಿ ಹಾಗೂ ನನ್ನ ಗೆಳೆಯರ ಮನೆಯಲ್ಲಿ ಸಿಕ್ಕಿರುವ ಹಣ ನಮ್ಮದೇ ಅದರ ಬಗ್ಗೆ ದಾಖಲೆಗಳು, ತೆರಿಗೆ ಎಲ್ಲವನ್ನೂ ನಾವು ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು. ದೆಹಲಿ ಮನೆಯಲ್ಲಿ ಸಿಕ್ಕ ಹಣ ತಮ್ಮದೇ ಎಂದು ಡಿ.ಕೆ.ಶಿವಕುಮಾರ್ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಬೇನಾಮಿ ಆಸ್ತಿ ಪ್ರಕರಣದ ಬಗ್ಗೆಯೂ ಮಾತನಾಡಿದ ಡಿ.ಕೆ.ಶಿವಕುಮಾರ್, 'ನನ್ನ ತಾಯಿಗೆ ನಾವಿಬ್ಬರೇ ಗಂಡು ಮಕ್ಕಳು, ತಾಯಿ ನಮ್ಮನ್ನು ನಂಬದೆ ಇನ್ನಾರನ್ನು ನಂಬಬೇಕು, ಅಥವಾ ನಾವು ಆಕೆಯನ್ನು ನಂಬದೆ ಇನ್ನಾರನ್ನು ನಂಬಬೇಕು, ನನ್ನ ತಾಯಿಯ ಹಸರಿನ ಆಸ್ತಿಯನ್ನೂ ಸಹ ನನ್ನ ಬೇನಾಮಿ ಆಸ್ತಿ ಎಂದು ಕೇಸು ದಾಖಲಿಸಿದ್ದಾರೆ. ಇದರ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರಿದ್ದೀವಿ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ತಮ್ಮ ಪ್ರಕರಣಗಳ ಬಗ್ಗೆ ಮಾಧ್ಯಮಗಳ ಮುಂದೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದು ಇಂದೇ.
ಶಾಸಕರನ್ನು ರಕ್ಷಿಸಿದಾಗಿಂದಲೂ ನನ್ನ ವಿರುದ್ಧ ಕುತಂತ್ರ: ಡಿಕೆಶಿ
2017 ರಲ್ಲಿ ನಾನು ಮಹಾರಾಷ್ಟ್ರದ ನನ್ನ ಪಕ್ಷದ ಶಾಸಕರನ್ನು, ಗುಜರಾತ್ನ ಕಾಂಗ್ರೆಸ್ ಶಾಸಕರನ್ನು, ನನ್ನದೇ ರಾಜ್ಯದ ನಮ್ಮ ಪಕ್ಷದ ಶಾಸಕರನ್ನು ನಮ್ಮ ಪಕ್ಷದ ಆಜ್ಞೆಯಂತೆ ಕಾಪಾಡಿಕೊಂಡೆ ಅಂದಿನಿಂದಲೂ ನನ್ನ ವಿರುದ್ಧ ರಾಜಕೀಯ ಪ್ರೇರಿತವಾದ ಐಟಿ, ಇಡಿ ತಂತ್ರವನ್ನು ಬಳಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ನನಗೆ ಆದೇಶ ತಲುಪುವ ಮುನ್ನವೇ ಅಧಿಕಾರಿಗಳು ಮನೆಗೆ ಹಾಜರ್'
ಮಧ್ಯಂತರ ರಕ್ಷಣೆಯ ಅರ್ಜಿ ರದ್ದು ಮಾಡಿದ ಕೆಲವೇ ಗಂಟೆಗಳಲ್ಲಿ ನನ್ನ ಮನೆಗೆ ಇಡಿ ಅಧಿಕಾರಿಗಳು ಬಂದಿದ್ದರು, ಮನೆಗೆ ತಡವಾಗಿ ಬಂದ ನನಗೆ ಸಮನ್ಸ್ ನೀಡಿ, ನಾಳೆ (ಆಗಸ್ಟ್ 30) ರಂದು ಮಧ್ಯಾಹ್ನ ಹಾಜರಾಗಲು ಹೇಳಿದರು, ಆದರೆ ಹಬ್ಬ ಇರುವ ಕಾರಣ ಹಾಜರಾಗಲು ಕಷ್ಟವಾಗಬಹುದು ಎಂದು ಹೇಳಿ ಕಳುಹಿಸಿದ್ದೆ, ನಾನು ಪರಿಸ್ಥಿತಿ ನೋಡಿಕೊಂಡು ಇಡಿ ಮುಂದೆ ಹಾಜರಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ: ಡಿಕೆ ಶಿವಕುಮಾರ್ ಕಿಡಿ
ಗೌರವಯುತವಾಗಿ ಸಮಾಜದಲ್ಲಿ ಬದಕಿದ್ದೇನೆ: ಡಿಕೆಶಿ
ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಯಾರಿಂದಲೂ ಲಂಚ ಪಡೆದಿಲ್ಲ, ಮಾಡಬಾರದ ಕೆಟ್ಟ ಕಾರ್ಯವನ್ನೇನೂ ನಾನು ಮಾಡಿಲ್ಲ. ಗೌರವಯುತವಾಗಿ ಸಮಾಜದಲ್ಲಿ ಬಾಳುತ್ತಿದ್ದೇನೆ, ನನ್ನ ವಿರುದ್ಧ ಹೂಡಿರುವ ತಂತ್ರವನ್ನು ಎದುರಿಸುತ್ತೇನೆ ಎಂದು ಅವರು ಹೇಳಿದರು.
'ನಾನು ತಲೆಮರೆಸಿಕೊಂಡಿಲ್ಲ, ಎಲ್ಲವನ್ನೂ ಎದುರಿಸುತ್ತೇನೆ'
'ಕೆಲವು ಮಾಧ್ಯಮಗಳು ನಾನು ತಲೆತಪ್ಪಿಸಿಕೊಂಡಿದ್ದೇನೆ ಎಂದು ವರದಿ ಮಾಡಿವೆ, ನಾನು ಎಲ್ಲೂ ಹೋಗಿಲ್ಲ, ನಾನು ಹೆದರುವುದಿಲ್ಲ, ನಾನು ಓಡಿ ಹೋಗುವುದಿಲ್ಲ, ನಾನು ತಲೆಮರೆಸಿಕೊಳ್ಳುವುದಿಲ್ಲ. ಕಾನೂನಾತ್ಮಕವಾಗಿ, ರಾಜಕೀಯವಾಗಿ ಇದನ್ನು ಎದುರಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಆಪರೇಷನ್ ಕಮಲದ ಬಗ್ಗೆ ಒಂದೂ ನೊಟೀಸ್ ಏಕಿಲ್ಲ: ಡಿಕೆಶಿ
'ವಿಧಾನಸಭೆ ಕಲಾಪದಲ್ಲಿಯೇ ಕೆಲವು ಶಾಸಕರು, ತಮಗೆ ಬಿಜೆಪಿಯ ಶಾಸಕರು ಕೋಟ್ಯಂತರ ಹಣದ ಆಮಿಷ ಒಡ್ಡಿದ್ದಾಗಿ ಹೇಳಿದರು. ಆಪರೇಷನ್ ಕಮಲದ ಬಗ್ಗೆ ಆಡಿಯೋಗಳು ಬಿಡುಗಡೆ ಆದವು, ವರದಿಗಳು ಬಂದವು, ನೇರವಾಗಿ ದೂರುಗಳು ದಾಖಲಾದವು ಆದರೆ ಇಡಿ ಆಗಲಿ ಐಟಿ ಆಗಲಿ ಏಕೆ ಅವರ ವಿರುದ್ಧ ಒಂದೂ ನೊಟೀಸ್ ಹೊರಡಿಸಲಿಲ್ಲ' ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
ನೊಟೀಸ್ಗಳಿಗೆ ಖುದ್ದು ನಾನೇ ಹಾಜರಾಗಿದ್ದೇನೆ: ಡಿಕೆಶಿ
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾ ಅಂಗಕ್ಕೆ ಗೌರವ ಕೊಡುವ ಶಾಸಕ ನಾನು. ಇದೇ ಬದ್ಧತೆಯಿಂದಲೇ ನಾನು ಕೆಲಸ ಮಾಡಿದ್ದೇನೆ. ಈ ವರೆಗೆ ನನಗೆ ಬಂದಿರುವ ಎಲ್ಲ ನೊಟೀಸ್ಗಳಿಗೆ ನಾನೇ ಹೋಗಿ ಹಾಜರಾಗಿದ್ದೇನೆ, ಕೆಲವಕ್ಕೆ ನನ್ನ ಆಡಿಟರ್ಗಳನ್ನು ಕಳುಹಿಸಿದ್ದೇನೆ, ಇದನ್ನೂ ಎದುರಿಸುತ್ತೇನೆ ಗೆದ್ದು ಬರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.