ಯಡಿಯೂರಪ್ಪ ಸಂಪುಟ- ಸಂಕಟ: ಡಿಕೆಶಿ ನುಡಿದ ಭವಿಷ್ಯ ನಿಜವಾಗುತ್ತಿದೆಯಾ?
ಬೆಂಗಳೂರು, ಆಗಸ್ಟ್ 22: ಮಾಜಿ ಸಚಿವ ಡಿ. ಕೆ. ಶಿವಕುಮಾರ್, ತಾವು ನಂಬುವ 'ರಾಜಗುರು' ದ್ವಾರಕನಾಥ್ರ ಸಹವಾಸದಿಂದ ತಾವೂ ಜ್ಯೋತಿಷಿ ಆಗಿಬಿಟ್ಟರಾ ಹೇಗೆ? ಏಕೆಂದರೆ, ಜುಲೈ 26ನೇ ತಾರೀಕು ಜೆಡಿಎಸ್- ಮೈತ್ರಿ ಸರಕಾರ ಬೀಳುವ ದಿನ ನುಡಿದ ಶಿವಕುಮಾರ್ ಭವಿಷ್ಯ, ಯಡಿಯೂರಪ್ಪ ಸಂಪುಟದ ವಿಚಾರದಲ್ಲಿ ಅಕ್ಷರಶಃ ನಿಜವಾಗುವಂತೆ ತೋರುತ್ತಿದೆ.
ಆ ದಿನ ಶಿವಕುಮಾರ್ ಏನು ಹೇಳಿದ್ದರು ಗೊತ್ತಾ? "ಒಂದು ವೇಳೆ ಸರಕಾರ ರಚಿಸಲು ವಿಫಲರಾದರೆ ಕಾಂಗ್ರೆಸ್- ಜೆಡಿಎಸ್ ನ ಅತೃಪ್ತ ಶಾಸಕರು ಯಡಿಯೂರಪ್ಪ ಅವರನ್ನು ಹುರಿದು ಮುಕ್ಕಿಬಿಡುತ್ತಾರೆ. ಈ ಶಾಸಕರು ಮಂತ್ರಿಗಳಾಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ," ಎಂದಿದ್ದರು.
ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆ ಶಿವಕುಮಾರ್
ಇನ್ನೂ ಮುಂದುವರಿದು, "ಸಚಿವ ಸ್ಥಾನ ಆಕಾಂಕ್ಷಿಗಳ ಜತೆಗೆ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಬಿಜೆಪಿ ಸರಕಾರದ ಕಥೆ ಗೋವಿಂದ... ಗೋವಿಂದ," ಎಂದು ಶಿವಕುಮಾರ್ ಹೇಳಿದ್ದರು.
"ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನಾಯಕರು ಗೆಲ್ಲಲು ಸಾಕಷ್ಟು ಶ್ರಮ ಹಾಕಿದ್ದೀವಿ. ಒಂದು ವೇಳೆ ಬಿಜೆಪಿಯು ಅವರಿಗೆ ಸಚಿವ ಸ್ಥಾನವನ್ನು ನಿರಾಕರಿಸಿದರೆ ಅವರೇನು ಯಡಿಯೂರಪ್ಪ ಆವರನ್ನು ರಕ್ಷಿಸುತ್ತಾರೆ ಅಂದುಕೊಂಡಿದ್ದೀರಾ?" ಎಂದು ಪ್ರಶ್ನೆ ಮುಂದಿಟ್ಟಿದ್ದರು.
ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ: ರೇಣುಕಾಚಾರ್ಯ
ಇದೀಗ ಕಾಂಗ್ರೆಸ್- ಜೆಡಿಎಸ್ ನ ಅತೃಪ್ತ ಶಾಸಕರು ದೆಹಲಿಗೆ ತೆರಳಿದ್ದಾರೆ. ಈ ಶಾಸಕರ 'ತ್ಯಾಗ'ಕ್ಕೆ ಬಿಜೆಪಿಯಿಂದ 'ಬೆಲೆ' ಸಂದಾಯ ಆಗಲೇಬೇಕಲ್ಲವಾ? ಇನ್ನು ಬಿಜೆಪಿಯಲ್ಲಿ ವಿಧಾನಸಭೆ ಟಿಕೆಟ್ ಸಿಗುವುದು ಕೂಡ ಅನುಮಾನ ಇದ್ದ ಹೊನ್ನಾಳಿಯ ರೇಣುಕಾಚಾರ್ಯ ಅವರೇ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅರಿಭಯಂಕರರಂತೆ ಡೈಲಾಗ್ ಹೊಡೆಯುತ್ತಿದ್ದಾರೆ.
ಲಕ್ಷ್ಮಣ ಸವದಿಯನ್ನು ಸಚಿವರನ್ನಾಗಿ ಮಾಡಿದ್ದು, ನಳಿನ್ ಕುಮಾರ್ ಕಟೀಲ್ ರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಕೇಸರಿ ಪಕ್ಷಕ್ಕೆ ಕಟ್ಟಡವೇ ಅಲುಗಾಡಿದ ಅನುಭವ ತರುತ್ತಿದೆ. ಯಡಿಯೂರಪ್ಪ ಅವರು ಸರಕಾರ ರಚಿಸಿ ನೋಡಲಿ ಗೊತ್ತಾಗುತ್ತದೆ ಎಂದಿದ್ದ ಡಿ. ಕೆ. ಶಿವಕುಮಾರ್ 'ಭವಿಷ್ಯ' ದಿಟವಾಗುವಂತೆ ಕಾಣುತ್ತದೆ.