ಈಗಲೂ ನಾವು ವಿಪ್ ಜಾರಿಗೊಳಿಸಬಹುದು, ಸುಪ್ರೀಂ ತೀರ್ಪಿನ ಬಗ್ಗೆ ಡಿಕೆಶಿ
ಬೆಂಗಳೂರು, ಜುಲೈ 17: ಕರ್ನಾಟಕದ ಅತೃಪ್ತ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, 'ಈ ಅತ್ಯುತ್ತಮ ತೀರ್ಪು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಯುತಗೊಳಿಸಿದೆ' ಎಂದರು.
"ಆದರೆ ಕೆಲವು ಬಿಜೆಪಿಯ ನನ್ನ ಸ್ನೇಹಿತರು ವಿಪ್ ಅನ್ನು ಜಾರಿಗೊಳಿಸುವುದಕ್ಕೆ ಬರುವುದಿಲ್ಲ ಎಂದು ಜನರನ್ನು ಹಅದಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ನಾವು ಈಗಲೂ ವಿಪ್ ಜಾರಿಗೊಳಿಸಬಹುದು ಮತ್ತು ಅತೃಪ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು" ಎಂದು ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು
ಕರ್ನಾಟಕದ ಜೆಡಿಎಸ್ ಮತ್ತು ಕಾಂಗ್ರೆಸ್ ನ ಸುಮಾರು 14 ಶಾಸಕರು ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀದಿದ್ದರು. ಮುಂಬೈ ರೆಸಾರ್ಟ್ ವೊಂದರಲ್ಲಿ ವಾಸವಿದ್ದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆದರೆ ಇವರಲ್ಲಿ ಹಲವರ ರಾಜೀನಾಮೆ ಕ್ರಮವಾಗಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ. ನಂತರ ಈ ಎಲ್ಲಾ ಶಾಸಕರೇ ಖುದ್ದಾಗಿ ರಮೇಶ್ ಕುಮಾರ್ ಅವರ ಮುಂದೆ ಹಾಜರಾಗಿ, ಕೈಬರಹದಲ್ಲೇ ರಾಜೀನಾಮೆ ಬರೆದು ಕೊಟ್ಟಿದ್ದರು.
ಸ್ಪೀಕರ್ ಸ್ಥಾನಕ್ಕೆ ಬಲ ತುಂಬಿದ ಸುಪ್ರೀಂ: ಆದೇಶದಲ್ಲಿ ಏನಿದೆ?
ಆದರೂ ರಾಜೀನಾಮೆ ಅಂಗಿಕರಿಸದ ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಮಂಗಳವಾರ ವಾದ-ವಿವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು. ಇಂದು ಅದು ತನ್ನ ತೀರ್ಪನ್ನು ಹೊರಹಾಕಿದ್ದು, ರಾಜೀನಾಮೆಯ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸ್ಪೀಕರ್ ಗೆ ಅವಕಾಶವಿದೆ ಎಂದಿದೆ. ಆದರೆ ಶಾಸಕರು ರಾಜೀನಾಮೆ ನೀದಿರುವುದರಿಂದ ಅವರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಬೇಕೆಂದಿಲ್ಲ ಎಂದು ಸಹ ಅದು ಹೇಳಿದ್ದು, ಶಾಸಕರಿಗೆ ವಿಪ್ ಜಾರಿಗೊಳಿಸಿ, ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಯತ್ನದಲ್ಲಿದ್ದ ಸಮ್ಮಿಶ್ರ ಸರ್ಕಾರಕ್ಕೆ ಇದು ಹಿನ್ನಡೆಯನ್ನುಂಟು ಮಾಡಿದೆ.