ಸಿಬಿಐ ದಾಳಿಯ ಬಗ್ಗೆ ಡಿಕೆ ಶಿವಕುಮಾರ್ಗೆ ಮೊದಲೇ ಸುಳಿವು ಇತ್ತೇ?
ಬೆಂಗಳೂರು, ಅಕ್ಟೋಬರ್ 5: ಸಿಬಿಐ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸುವುದು ಡಿ.ಕೆ. ಶಿವಕುಮಾರ್ ಅವರಿಗೆ ಮೊದಲೇ ಮಾಹಿತಿ ಇತ್ತು ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ಪ್ರಕರಣವನ್ನು ಸರ್ಕಾರವು ಸಿಬಿಐಗೆ ಒಪ್ಪಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿತ್ತು. ಆದರೆ ಅದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಬರುವ ಮೊದಲೇ ಸಿಬಿಐ ದಾಳಿ ನಡೆದಿದೆ.
ಐಟಿ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಏಕ ಸದಸ್ಯ ನ್ಯಾಯಪೀಠ, ಜುಲೈ 22ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಡಿಕೆ ಶಿವಕುಮಾರ್ ಆಪ್ತ ಶಶಿಕುಮಾರ್ ಶಿವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ
ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಹೈಕೋರ್ಟ್ ಯಾವುದೇ ಅಂತಿಮ ಆದೇಶ ನೀಡಿರದ ಕಾರಣ ಸಿಬಿಐ ಯಾವ ಸಮಯದಲ್ಲಿ ಬೇಕಾದರೂ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸುಳಿವು ಡಿಕೆ ಶಿವಕುಮಾರ್ ಅವರಿಗೆ ಇತ್ತು ಎಂದು ಹೇಳಲಾಗಿದೆ. 2017ರಲ್ಲಿ ಬೆಂಗಳೂರು ಮತ್ತು ದೆಹಲಿಯ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಆಸ್ತಿಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ದಾಳಿ ಇದಾಗಿದೆ. ಮುಂದೆ ಓದಿ.
ಸರ್ಕಾರಕ್ಕೆ ನೋಟಿಸ್
ಈ ಅರ್ಜಿಯನ್ನು ಅ. 1ರಂದು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಡಿ.ಕೆ ಶಿವಕುಮಾರ್ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು.
ತನಿಖೆಗೆ ತಡೆಗೆ ಮನವಿ
ಐಟಿ ಪ್ರಕರಣದ ತನಿಖೆಯನ್ನು ನಡೆಸಲು 2019ರ ಸೆಪ್ಟೆಂಬರ್ 25ರಂದು ಸರ್ಕಾರ ಅನುಮತಿ ನೀಡಿತ್ತು. ರಾಜ್ಯ ಸರ್ಕಾರವು ಈ ಆದೇಶ ನೀಡುವಾಗ ಸೂಕ್ತ ಕಾರಣ ನೀಡಿಲ್ಲ ಎಂದು ಡಿಕೆ ಶಿವಕುಮಾರ್ ಪರ ವಕೀಲರು ವಾದಿಸಿದ್ದರು. ಸಿಬಿಐ ಪ್ರಾಥಮಿಕ ತನಿಖೆಗೆ ತಡೆ ನೀಡುವಂತೆ ಡಿಕೆ ಸುರೇಶ್ ಸಹ ಕೋರಿದ್ದರು.
ಕನಕಪುರದ ಡಿಕೆಶಿ ನಿವಾಸದ ಮೇಲೆ 7 ಸಿಬಿಐ ಅಧಿಕಾರಿಗಳ ದಾಳಿ
ಸಕಾರಣ ನೀಡಿರಲಿಲ್ಲ
2019ರ ಸೆ. 25ರಂದು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿತ್ತು. ಆದರೆ ಪೂರ್ವಾನುಮತಿ ನೀಡಲು ಸಕಾರಣಗಳ ಸಹಿತ ವಿವರವಾದ ಆದೇಶ ಹೊರಡಿಸಬೇಕಿತ್ತು. ಆದರೆ ಸಿಬಿಐ ತನಿಖೆಗೆ ಅನುಮತಿ ನೀಡುವ ಆದೇಶದಲ್ಲಿ ಕಾರಣಗಳನ್ನು ತಿಳಿಸಿಲ್ಲ ಎಂದು ವಾದಿಸಲಾಗಿತ್ತು.
ಸಿಬಿಐ ದಾಳಿ ನಡೆಯುತ್ತದೆ ಎಂಬ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಅನುಮಾನವಿತ್ತು. ಆದರೆ ಹೈಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದರಿಂದ ನಿರಾಳರಾಗಿದ್ದರು. ಹೀಗಾಗಿ ಇಂದು ದಾಳಿ ನಡೆಯುವ ಬಗ್ಗೆ ಅವರಿಗೆ ಸುಳಿವು ಇರಲಿಲ್ಲ ಎಂದು ಹೇಳಲಾಗಿದೆ.
Recommended Video
ಸ್ಥಳದಿಂದ ಹೋಗದಂತೆ ಸೂಚನೆ
ಸೋಮವಾರ ಬೆಳಿಗ್ಗೆಯೇ ಡಿ.ಕೆ. ಶಿವಕುಮಾರ್, ಸಂಸದ ಡಿಕೆ ಸುರೇಶ್ ಸೇರಿದಂತೆ ಅವರ ಆಪ್ತರಿಗೆ ದಾಳಿಯ ಆಘಾತ ನೀಡಿರುವ ಸಿಬಿಐ ಅಧಿಕಾರಿಗಳು ತಪಾಸಣೆ ಮುಗಿಯುವವರೆಗೂ ಸ್ಥಳದಲ್ಲಿಯೇ ಇರುವಂತೆ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಹೋದರರ ಸಮ್ಮುಖದಲ್ಲಿಯೇ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.