ಡಿಕೆಶಿ ಆಟ ಕನಕಪುರದಲ್ಲಿ ಮಾತ್ರ, ಇಲ್ಲಿ ನಡೆಯಲ್ಲ; ಅಶೋಕ
ಬೆಂಗಳೂರು, ಅಕ್ಟೋಬರ್ 14 : " ಡಿ. ಕೆ. ಶಿವಕುಮಾರ್, ಎಚ್. ಡಿ. ಕುಮಾರಸ್ವಾಮಿ ತಾವೇ ಇಲ್ಲಿನ ಅಭ್ಯರ್ಥಿಗಳಂತೆ ಉಪ ಚನಾವಣೆ ಕೆಲಸ ಮಾಡುವುದಾದರೆ ಬಿಜೆಪಿಗೆ ನಾನೇ ಅಭ್ಯರ್ಥಿ. ನಾನು ಸಹ ಗೆಲುವಿಗಾಗಿ ಕೆಲಸ ಮಾಡುವೆ" ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಬುಧವಾರ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಆರ್. ಅಶೋಕ, "ನಾನು ಮೂರು ಬಾರಿ ಈ ಕ್ಷೇತ್ರದ ಶಾಸಕನಾಗಿದ್ದೆ. ಕ್ಷೇತ್ರದ ಇಂಚಿಂಚು ಸಹ ನಮಗೆ ಗೊತ್ತಿದೆ. ನೂರಕ್ಕೆ ನೂರರಷ್ಟು ನಾವು ಈ ಚುನಾವಣೆಯನ್ನು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ ಆರ್ ನಗರ ಉಪಚುವಣೆ: ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
"ಡಿ. ಕೆ. ಶಿವಕುಮಾರ್ ಅವರ ಆಟ ಏನಿದೆ ಅದು ಕನಕಪುರಕ್ಕೆ ಮಾತ್ರ ಸೀಮಿತ. ಇಲ್ಲಿ ಕಲ್ಲು, ಬಂಡೆ ಏನೂ ಇಲ್ಲ. ಇಲ್ಲಿರುವುದೆಲ್ಲಾ ಒಳ್ಳೆಯ ಭೂಮಿ. ಇಲ್ಲಿನ ಮತದಾರರು ವಿದ್ಯಾವಂತರು, ಬುದ್ಧಿವಂತರು" ಎಂದರು.
ಆರ್. ಆರ್. ನಗರ ಉಪ ಚುನಾವಣೆ; ಮುನಿರತ್ನಗೆ ಬಿಜೆಪಿ ಟಿಕೆಟ್
"ಲೋಕಸಭೆ ಚುನಾವಣೆಯಲ್ಲಿ ಡಿ. ಕೆ. ಸುರೇಶ್ ಸ್ಪರ್ಧಿಸಿದಾಗಲೇ ನಮಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರ ಲೀಡ್ ಸಿಕ್ಕಿದೆ. ಈ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ" ಎಂದು ಅಶೋಕ ತಿಳಿಸಿದರು.
ಆರ್. ಆರ್. ನಗರ ಟಿಕೆಟ್ ಘೋಷಣೆ; ಕುಸುಮಾ ಫೇಸ್ ಬುಕ್ ಪೋಸ್ಟ್
"ಮುನಿರತ್ನ ಅವರ ಕಾರಣಕ್ಕೆ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಈಗ ಅವರು ಬಿಜೆಪಿಗೆ ಬಂದಿದ್ದಾರೆ, ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ನಾವು ಸುಲಭವಾಗಿ ಗೆಲ್ಲುತ್ತೇವೆ" ಎಂದರು.
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ. 40 ರಿಂದ 50 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇವೆ" ಎಂದು ಅಶೋಕ ವಿಶ್ವಾಸ ವ್ಯಕ್ತಪಡಿಸಿದರು.
"ಡಿ. ಕೆ. ರವಿ ಅವರ ಕುಟುಂಬದ ವಿಚಾರದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಅದು ಅವರ ವೈಕ್ತಿಯಕ ವಿಚಾರ. ಅವರ ಕುಟುಂಬದ ಪರಿಸ್ಥಿತಿ ಬಗ್ಗೆ ರಾಜ್ಯದ ಜನರಿಗೆ ತಿಳಿದಿದೆ" ಎಂದು ಅಶೋಕ ತಿಳಿಸಿದರು.
Recommended Video
ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದೆ. ಬಿಜೆಪಿಯಿಂದ ಮನಿರತ್ನ, ಕಾಂಗ್ರೆಸ್ನಿಂದ ಹೆಚ್. ಕುಸುಮಾ ಮತ್ತು ಜೆಡಿಎಸ್ನಿಂದ ಪಿ. ಕೃಷ್ಣಮೂರ್ತಿ ಅಭ್ಯರ್ಥಿಗಳು. ನವೆಂಬರ್ 10ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.