ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರದ ಬಗ್ಗೆ ಡಿ.ಕೆ. ಶಿವಕುಮಾರ್ ಬೇಸರ
ಬೆಂಗಳೂರು, ಅ. 23: ಕೊರೊನಾ ವೈರಸ್ ಲಸಿಕೆ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಂಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮೊದಲು ಕೊರೊನಾ ವೈರಸ್ಗೆ ಲಸಿಕೆ ತಯಾರು ಮಾಡಿದ್ದೇವೆ ಅಂತ ಕೇಂದ್ರ ಸರ್ಕಾರ ಹೇಳಲಿ. ಈ ಖಾಯಿಲೆಯನ್ನು ಜನರಿಗೆ ಹಂಚಿದ್ದೇ ಕೇಂದ್ರದ ಮೋದಿ ಸರ್ಕಾರ ಎಂದು ಡಿಕೆಶಿ ಆರೋಪಿಸಿದ್ದಾರೆ.
ಇಡೀ ದೇಶದಲ್ಲಿ ಲಾಕ್ಡೌನ್ ಹೇರಿದ್ದ ವೇಳೆಯಲ್ಲಿ ಏನೆಲ್ಲ ಭರವಸೆ ಕೊಟ್ಟಿದ್ದರು? ಗಾಣಿಗ, ಸವಿತಾ ಸಮಾಜದವರಿಗೆ 5 ಸಾವಿರ ರೂ. ಪರಿಹಾರ ಕೊಡುತ್ತೇವೆ ಎಂದಿದ್ದರು, ಐದು ಸಾವಿರ ರೂಪಾಯಿ ಏನಾದ್ರು ಕೊಟ್ಟಿದ್ದಾರಾ? ಹೋಗ್ಲಿ ಬ್ಯಾಂಕ್ಗಳಿಗೆ ಹೇಳಿಕ ಸಾಲ ವಸೂಲಿ ಹಾಕಿಸಿದ್ದಾರಾ? ಅದೂ ಬೇಡ ಯಾವುದಾದರೂ ಟ್ಯಾಕ್ಸ್ ಆದರೂ ಕಡಿಮೆ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತಿಮ ಸಂಸ್ಕಾರ ಮಾಡಿದ ರೀತಿಯನ್ನು ಡಿಕೆಶಿ ಖಂಡಿಸಿದ್ದಾರೆ.
ಜೀವ ಇದ್ದರೆ ಜೀವನ
ಜೀವ ಇದ್ದರೆ ಜೀವನ, ಮೊದಲು ಅದನ್ನ ಮಾಡಲಿ. ಪಾಪ ಸೆಂಟ್ರಲ್ ಮಿನಿಸ್ಟರ್ ಹೆಣ ಏನ್ಮಾಡಿದರು? ಬಾಡಿ ಎತ್ತಿಕೊಂಡು ಹೋಗಿ ಬಿಸಾಕಿದ್ರು. ಅವರ ಕುಟುಂಬಕ್ಕೆ ಮುಖ ನೋಡೋಕು ಬಿಡಲಿಲ್ಲ. ಶಾಸಕ ನಾರಾಯಣ್ ರಾವ್ ಅವರ ದೇಹವನ್ನು ನಾವು ಇಲ್ಲಿಂದ ಕಳಿಸಲಿಲ್ಲವಾ? ಮರ್ಯಾದೆಯುತವಾಗಿ ಅಂತ್ಯಸಂಸ್ಕಾರ ಮಾಡಲಿಲ್ಲವಾ? ವಿಶೇಷ ವಿಮಾನದಲ್ಲಿ ಸುರೇಶ್ ಅಂಗಡಿ ಅವರ ದೇಹವನ್ನು ಇಲ್ಲಿಗೆ ತರಬಹುದಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಮಾಡಲಿಲ್ಲ ಎಂದು ಡಿಕೆಶಿ ಖಂಡಿಸಿದ್ದಾರೆ.
ದುಡ್ಡು ಹೊಡೆಯೋಕೆ ಕುಳಿತಿದ್ದಾರೆ
ಸುರೇಶ್ ಅಂಗಡಿ ಅವರ ದೇಹವನ್ನು ಇಲ್ಲಿಗೆ ತಂದಿದ್ದರೆ ಅವರ ಕುಟುಂಬ ಅಂತ್ಯಸಂಸ್ಕಾರ ಮಾಡುತ್ತಿರಲಿಲ್ಲವಾ? ಇವರು ಯಾರಿಗೂ ಸಹಾಯ ಮಾಡುತ್ತಿಲ್ಲ. ದುಡ್ಡು ಹೊಡೆಯೋಕೆ ಕುಳಿತಿದ್ದಾರೆ ಅಷ್ಟೇ. ಅವರ ನಾಟಕವನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ ಮಾಡಿದ ರೀತಿಯ ಬಗ್ಗೆ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಆರ್ಆರ್ ನಗರಕ್ಕೆ ಪ್ಯಾರಾಮಿಲಿಟರಿ
ರಾಜರಾಜೇಶ್ವರಿ ನಗರಕ್ಕೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಆರ್ಆರ್ ನಗರಕ್ಕೆ ಪ್ಯಾರಾಮಿಲಿಟರಿ ಕರೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಗೆ ಮಾಡಿರುವುದರಿಂದ ನನಗೆ ಬಹಳ ಸಂತೋಷ ವಾಗಿದೆ.
ಆರ್ ಆರ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲ ಅಂತಾ ಸರ್ಕಾರ, ಅಭ್ಯರ್ಥಿ ಹಾಗೂ ಜನರಿಗೂ ಈಗ ಮನವರಿಕೆಯಾಗಿದೆ. ಆದರೂ ಬಿಜೆಪಿ ಅಭ್ಯರ್ಥಿ ಏನ್ ಮಾಡುತ್ತೇವೆ ಅನ್ನೋದನ್ನು ತಿಳಿಸಿದ್ದಾರೆ. ಏನು ಮಾಡಬೇಕು? ಮಾಡಿಸಬೇಕು? ಅದು ಅವರ ಬಾಯಿಂದಲೇ ಬಂದಿದೆ ಎಂದು ವಿವರಿಸಿದ್ದಾರೆ.
Recommended Video
ಸಮಯ ಬಂದಾಗ ಬಂಡೆ ಕಥೆ ಹೇಳ್ತೇನೆ
ಇನ್ನು ಸಮಯ ಬಂದಾಗ ಬಿಜೆಪಿ ನಾಯಕರಿಗೆ ಬಂಡೆ ಕಥೆ ಹೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬಂಡೆ ಛಿದ್ರ, ಹುಲಿಯಾ ಕಾಡಿಗೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್, ಅಶೋಕಣ್ಣ, ಸಿ.ಟಿ. ರವಿ ಅಣ್ಣ ಹಾಗೆ ಸರ್ವೀಸ್ ಪ್ರೊವೈಡರ್ ಅಶ್ವಥಣ್ಣಗೆ ಬಂಡೆ ಕಥೆ ಹೇಳ್ತೇನೆ. ಸಮಯ ಬಂದಾಗ ಅವರಿಗೆ ಬಂಡೆ ಕಥೆ ಹೇಳ್ತೇನೆ ಎಂದು ಡಿಕೆಶಿ ಅವರು ಕಟೀಲ್ ಅವರ ಹೇಳಿಕೆಗೆ ನಕ್ಕು ಸುಮ್ಮನಾದರು.