ಡಿಕೆ ಶಿವಕುಮಾರ್ಗೆ ಮಠ, ದೇವಸ್ಥಾನಗಳ ಬಗ್ಗೆ ಗೊತ್ತಿಲ್ಲ: ಆರ್ ಅಶೋಕ್
ಬೆಂಗಳೂರು, ಜನವರಿ 16: ನಮ್ಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಠಗಳಿಗೆ ಅಪಾರ ಕೆಲಸ ಮಾಡಿದ್ದಾರೆ. ತುಂಬಿದ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಆ ರೀತಿ ಸ್ವಾಮೀಜಿ ಹೇಳಿದ್ದು ತಪ್ಪು ಎಂದು ಹರಿಹರದಲ್ಲಿ ನಡೆದ ಹರ ಜಾತ್ರೆ ವೇಳೆ, ಶಾಸಕ ಮುರುಗೇಶ್ ನಿರಾಣಿ ಅವರನ್ನು ಕೈಬಿಟ್ಟರೆ ಸಮುದಾಯವೇ ನಿಮ್ಮ ಕೈಬಿಡಲಿದೆ ಎಂದಿದ್ದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ಹೇಳಿಕೆಯನ್ನು ಸಚಿವ ಆರ್. ಅಶೋಕ್ ಖಂಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಬೇಕಿದ್ದರೆ ಮಠಕ್ಕೆ ಕರೆದು ಸಲಹೆ ಸೂಚನೆ ಕೊಡಲಿ. ಸಚಿವ ಸ್ಥಾನ ಕೊಡುವುದು ಸಿಎಂ ಪರಮಾಧಿಕಾರ. ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠ ಸೇರಿದಂತೆ ಯಾವ ಸ್ವಾಮೀಜಿಗಳೂ ಯಾವತ್ತೂ ಸಹ ಈ ರೀತಿ ಮಾಡಿಲ್ಲ ಎಂದರು.
ಬಿಎಸ್ವೈಗೆ ಎಚ್ಚರಿಕೆ ನೀಡಿದ ಸ್ವಾಮೀಜಿ ಬೆಂಬಲಕ್ಕೆ ಡಿಕೆಶಿ
ರಾಜಕೀಯದ ಕುರಿತು ಸ್ವಾಮೀಜಿಗಳು ಈ ರೀತಿ ಮಾತನಾಡಬಾರದು. ಸರ್ಕಾರಕ್ಕೆ ಸಲಹೆ ಕೊಡುವುದು ತಪ್ಪಲ್ಲ ಹಾಗಂತ ಧಮ್ಕಿ ಪ್ರವೃತ್ತಿ ಸರಿಯಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳು ಸ್ವಾಮೀಜಿಗೆ ಅರ್ಧರಾತ್ರಿಯಲ್ಲಿ ಭರವಸೆ ಕೊಟ್ಟಿರಬಹುದು ಎಂದು ಸ್ವಾಮೀಜಿ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿದ ಅಶೋಕ್, ಡಿಕೆಶಿಗೆ ಮಠ ಮತ್ತು ದೇವಸ್ಥಾನದ ಬಗ್ಗೆ ಗೊತ್ತಿಲ್ಲ. ಅವರ ರಾಜಕಾರಣವೇ ಬೇರೆ. ಇಷ್ಟು ದಿನ ಮುಸ್ಲಿಮರನ್ನ ಓಲೈಕೆ ಮಾಡುತ್ತಿದ್ದರು. ಈಗ ಬೆಟ್ಟದ ಮೇಲೆ ಏನೋ ನಿರ್ಮಾಣ ಮಾಡುವುದಕ್ಕೆ ಹೊರಟ್ಟಿದ್ದಾರೆ. ಅದರಲ್ಲಿ ಅವರು ನಿರತರಾಗಲಿ. ಮಠ ದೇವಸ್ಥಾನ ನೋಡುವುದಕ್ಕೆ ನಾವಿದ್ದೇವೆ ಎಂದರು.
ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?
ಸಂಪುಟ ವಿಸ್ತರಣೆ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಮಾಡುವುದು ಖಚಿತ. ತ್ಯಾಗ ಮಾಡಿ ಸರ್ಕಾರ ತಂದವರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಅವರೆಲ್ಲರಿಗೂ ಸೂಕ್ತ ಸ್ಥಾನಮಾನ ಸಿಗುತ್ತದೆ. ಇಷ್ಟೇ ಶಾಸಕರಿಗೆ ಅವಕಾಶ ಮಾಡಿಕೊಡಿ ಎಂದು ಯಾರೂ ಷರತ್ತು ಹಾಕಿಲ್ಲ. ಗೆದ್ದವರನ್ನು ಮೊದಲು ಸೇರಿಸಿಕೊಳ್ಳುತ್ತೇವೆ. ಸೋತವರನ್ನ ಆಮೇಲೆ ನೋಡೋಣ ಎಂದು ಹೇಳಿದರು.
ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಹೀಗಾಗಿ ಸಂಪುಟ ವಿಸ್ತರಣೆ ತಡವಾಗುತ್ತಿದೆ ಎಂದು ಅಶೋಕ್ ತಿಳಿಸಿದರು.