ಉಪ ಚುನಾವಣೆ: ಡಿಕೆಶಿ ಗೇಮ್ ಪ್ಲಾನ್ ಬದಲಿಸಿದ ಡಿ.ಕೆ. ರವಿ ತಾಯಿ!
ಬೆಂಗಳೂರು, ಅಕ್ಟೋಬರ್. 02: ತೀರಾ ಪ್ರತಿಷ್ಠೆಯ ಕಣವಾಗಿರುವ ಆರ್. ಆರ್. ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿ.ಕೆ. ಬ್ರದರ್ಸ್ ಗೇಮ್ ಪ್ಲಾನ್ ಬದಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿನ ಗೊಂದಲದ ಲಾಭ ಪಡೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀರ್ಮಾನಿಸಿದ್ದು, ಕಾಂಗ್ರೆಸ್ ತೊರೆಯುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಮಾಜಿ ಶಾಸಕ ಮುನಿರತ್ನ ಅವರಿಗೆ ಬಿಗ್ ಶಾಕ್ ಕಾದಿದೆ.
ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆರ್.ಆರ್. ನಗರಕ್ಕೆ ಇಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಿದೆ. ಮುನಿರತ್ನ ಹಾಗೂ ಕಳೆದ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರಾಜುಗೌಡ ಅವರ ಹೆಸರನ್ನು ಕೇಂದ್ರಕ್ಕೆ ಬಿಜೆಪಿ ನಾಯಕರು ರವಾನೆ ಮಾಡಿದ್ದಾರೆ. ಇದು ಮುನಿರತ್ನ ಅವರಿಗೆ ಆಗಿರುವ ಹಿನ್ನೆಡೆ ಎನ್ನಲಾಗುತ್ತಿದೆ. ಇದರೊಂದಿಗೆ ಮತ್ತೊಂದು ಸವಾಲು ಮುನಿರತ್ನ ಅವರಿಗೆ ಎದುರಾಗಿದ್ದು, ಕಾಂಗ್ರೆಸ್ ಪಕ್ಷದ ಅಚ್ಚರಿಯ ಅಭ್ಯರ್ಥಿಯನ್ನು ಅವರು ಎದುರಿಸಬೇಕಾಗಿದೆ.
ಉಪ ಚುನಾವಣೆ; ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಪಾಬಲ್ಯ ಕುಸಿತ!
ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸುವ ಪ್ಲಾನ್ನ್ನು ಕಾಂಗ್ರೆಸ್ ಈ ಮೊದಲು ಮಾಡಿತ್ತು. ಇದೀಗ ಕುಸುಮಾ ಅವರು ಕಣಕ್ಕಿಳಿದರೆ ಹಿನ್ನಡೆಯಾಗುವ ಸಾಧ್ಯತೆ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರು ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಕುಸುಮಾ ಅವರಲ್ಲ ಅಭ್ಯರ್ಥಿ!
ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅಥವಾ ಮಾವ ಹನುಮಂತರಾಯಪ್ಪ ಅವರನ್ನು ಆರ್ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೆ ಎನ್ನಲಾಗಿತ್ತು. ಈ ಚರ್ಚೆ ನಡೆದಿರುವಾಗಲೇ ಕುಸುಮಾ ಹಾಗೂ ಹನುಮಂತರಾಯಪ್ಪ ಅವರು ವಿಜಯನಗರ ಆದಿಚುಂಚನಗಿರಿ ಮಠಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದಿದ್ದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಅದಾದ ಬೆನ್ನಲ್ಲಿಯೇ ಬೆಳವಣಿಗೆಯೊಂದು ನಡೆದಿದ್ದು ಡಿಕೆ ಶಿವಕುಮಾರ್ ಅವರು ಕುಸುಮಾ ಅವರನ್ನು ಆರ್ಆರ್ ನಗರ ಅಭ್ಯರ್ಥಿಯನ್ನಾಗಿಸುವ ಚಿಂತನೆಯನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣವಾಗಿದ್ದು ಡಿ.ಕೆ. ರವಿ ಅವರ ತಾಯಿ ಗೌರಮ್ಮ.
ಚುನಾವಣೆಗೆ ನಿಲ್ಲುವ ಯೋಗ್ಯತೆಯಿಲ್ಲ
ನನ್ನ ಗಂಡ ಅಂತಾ ಅವಳು ಒಂದು ಕರ್ಪೂರವನ್ನೂ ರವಿಗೆ ಹಚ್ಚಿಲ್ಲ. ಅವನೊಂದಿಗೆ ಅವಳೂ ಹೋಗಿಬಿಟ್ಟಳು ಎಂದು ನಾನು ತಿಳಿದುಕೊಂಡಿದ್ದೇನೆ. ನನ್ನ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಲ್ಲುವ ಯೋಗ್ಯತೆಯನ್ನು ಅವಳು ಕಳೆದುಕೊಂಡಿದ್ದಾಳೆ. ಅವಳು ಚುನಾವಣೆಗೆ ನಿಲ್ಲಲಿ. ಆದರೆ ನನ್ನ ಮಗ (ಡಿ.ಕೆ.ರವಿ) ಫೋಟೊವನ್ನು ಹಾಕಿಕೊಂಡರೆ ಫ್ಲೆಕ್ಸ್ ಬ್ಯಾನರ್ಗಳಿಗೆ ಬೆಂಕಿ ಹಚ್ಚುತ್ತೇನೆ ಎಂದು ಡಿ.ಕೆ. ರವಿ ತಾಯಿ ಗೌರಮ್ಮ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ ಚುನಾವಣೆಗೆ ಡಿ. ಕೆ. ರವಿ ಪತ್ನಿ ಸ್ಪರ್ಧೆ; ಗೌರಮ್ಮ ಆಕ್ರೋಶ
ಈ ಬೆಳವಣಿಗೆಯಿಂದ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅಥವಾ ಮಾವ ಹನುಮಂತರಾಯಪ್ಪ ಅವರಿಗೆ ಟಿಕೆಟ್ ಕೊಟ್ಟಲ್ಲಿ ತಾಯಿ ಸೆಂಟಿಮೆಂಟ್ ಎದುರು ಇಬ್ಬರೂ ಮಂಕಾಗಲಿದ್ದಾರೆ ಎಂಬ ತೀರ್ಮಾನಕ್ಕೆ ಡಿ.ಕೆ. ಸಹೋದರರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಶಾಸಕ ಮುನಿರತ್ನ ಅವರಿಗೆ ಪೈಪೋಟಿ ಕೊಡುವ ಸಾಮರ್ಥ್ಯ ಇರುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸಮರ್ಥ ಅಭ್ಯರ್ಥಿ ಯಾರು?
ಆರ್.ಆರ್. ನಗರ ಅಭ್ಯರ್ಥಿ ಆಯ್ಕೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಸಭೆ ನಡೆಸಿದೆ. ಸಭೆಗೆ ಆಗಮಿಸುವ ಮೂಲಕ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಚೆಲುವರಾಯಸ್ವಾಮಿ ಅವರು ಗಮನ ಸೆಳೆದಿದ್ದಾರೆ. ಹೀಗಾಗಿ ಮಾಗಡಿ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರೇ ಆರ್.ಆರ್. ನಗರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಭ್ಯರ್ಥಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಆಯ್ಕೆ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಅಭ್ಯರ್ಥಿ ಕುರಿತು ಅಧ್ಯಕ್ಷರು ಬಂದ ಮೇಲೆ ಅಂತಿಮ ನಿರ್ಧಾರ ಮಾಡುತ್ತೇವೆ. ಚೆಲುವರಾಯಸ್ವಾಮಿ ಅಥವಾ ಬಾಲಕೃಷ್ಣ ಅವರು ಸ್ಪರ್ಧೆಯಲ್ಲಿ ಇಲ್ಲ. ಕ್ಷೇತ್ರದವರನ್ನೇ ಚುನಾವಣೆಗೆ ನಿಲ್ಲಿಸಬೇಕು ಅಂತಿದೆ. ಆದರೂ ಮೂರ್ನಾಲ್ಕು ಹೆಸರುಗಳು ಚರ್ಚೆಯಲ್ಲಿವೆ ಎಂದಿದ್ದಾರೆ.
ಮಾಗಡಿ ಬಾಲಕೃಷ್ಣರತ್ತ ಕೈ ಚಿತ್ತ!
ಆಯ್ಕೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಬೆಳಗಾವಿಗೆ ಹೋಗಿದ್ದಾರೆ. ಅವರು ಬಂದ ಮೇಲೆ ನಾವು ಸಭೆಯ ವಿಚಾರ ಹೇಳುತ್ತೇವೆ. ನಂತರ ಅವರು ನಿರ್ಧಾರ ತೆಗೆದುಕೊಳ್ತಾರೆ. ನನ್ನ ಹೆಸರಿಲ್ಲ, ನಾನು ಸ್ಪರ್ಧೆಯಲ್ಲಿಲ್ಲ. ಆದರೆ ಮಾಗಡಿ ಬಾಲಕೃಷ್ಣ ಅವರ ಹೆಸರಿದೆ. ಅವರು ನಿಲ್ಲಬಹುದು ಎಂದು ಡಿಕೆ ಶಿವಕುಮಾರ್ ಅವರ ಗೇಮ್ ಪ್ಲಾನ್ನ್ನು ಸೂಚ್ಯವಾಗಿ ಹೇಳಿದ್ದಾರೆ.
RRನಗರ: ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯ ಕಾಂಗ್ರೆಸ್ ಅಭ್ಯರ್ಥಿ? ಸ್ಪಷ್ಟನೆ
ಈ ಬಗ್ಗೆ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರೂ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ನಾವು ಈಗ ನಾನು ಮಾತನಾಡುವುದಿಲ್ಲ. ನಾನು ಸ್ಪರ್ಧಿಸುವ ಕುರಿತು ನಾನೇನೂ ಹೇಳುವುದಿಲ್ಲ. ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎನ್ನುವ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ಬಾಲಕೃಷ್ಣ ಅವರು ಖಚಿತ ಪಡಿಸಿದ್ದಾರೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮುನಿರತ್ನ ಅವರನ್ನು ಎದುರಿಸಲು ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರು ಸಮರ್ಥರಾಗಿದ್ದಾರೆ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಹೀಗಾಗಿ ಮಾಜಿ ಸಚಿವ ಬಾಲಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್ಆರ್ ನಗರ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಒಕ್ಕಲಿಗ, ಅಹಿಂದ ಹಾಗೂ ಕಾಂಗ್ರೆಸ್ ಪಾರಂಪರಿಕ ಮತಗಳು ನಿರ್ಣಾಯಕವಾಗಿರುವುದರಿಂದ ಬಾಲಕೃಷ್ಣ ಅವರನ್ನು ಕಣಕ್ಕಿಳಿಸಿದರೆ ಗೆಲ್ಲುವುದು ಖಚಿತ ಎಂಬ ತೀರ್ಮಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ಬಂದಿದ್ದಾರೆ ಎನ್ನಲಾಗಿದೆ.
Recommended Video