ಡಿಕೆಶಿ ಪುತ್ರಿ ಐಶ್ವರ್ಯಾ-ಸಿದ್ದಾರ್ಥ ಪುತ್ರ ಅಮಾರ್ತ್ಯ ಮದುವೆ ದಿನಾಂಕ
ಬೆಂಗಳೂರು, ಸೆ. 15: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಮೊಮ್ಮಗ (ಉದ್ಯಮಿ ದಿ. ಸಿದ್ದಾರ್ಥ ಪುತ್ರ ಅಮಾರ್ತ್ಯ) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ಮದುವೆ ದಿನ, ಮುಹೂರ್ತ ನಿಗದಿಯಾಗಿರುವ ಸುದ್ದಿ ಬಂದಿದೆ.
ಗುರು-ಹಿರಿಯರು ನಿಶ್ಚಯಿಸಿದಂತೆ ಐಶ್ವರ್ಯಾ- ಅಮಾರ್ತ್ಯ ವಿವಾಹಕ್ಕೆ ಫೆಬ್ರವರಿ 24, 2021ರಂದು ನಡೆಸಲು ಎರಡು ಕುಟುಂಬಗಳು ನಿರ್ಧರಿಸಿವೆ. ಆದರೆ, ಐಶ್ವರ್ಯಾ- ಅಮಾರ್ತ್ಯ ಇಬ್ಬರಿಗೂ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಮದುವೆಯಾಗಲು ಇಷ್ಟವಿದೆ. ಫೆಬ್ರವರಿ 14ಕೂಡಾ ಮದುವೆಗೆ ಯೋಗ್ಯವಾದ ಶುಭ ಮುಹೂರ್ತವನ್ನು ಹೊಂದಿದೆ. ಹೀಗಾಗಿ ಈ ಎರಡು ದಿನಗಳಲ್ಲಿ ಒಂದು ದಿನದಲ್ಲಿ ಗಟ್ಟಿಮೇಳ ಮೊಳಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್
ಏಪ್ರಿಲ್ 15ರಂದು ನಡೆದ ಸಮಾರಂಭದಲ್ಲಿ ಎರಡೂ ಕುಟುಂಬಗಳು ತಾಂಬೂಲ ಬದಲಿಸಿಕೊಂಡಿದ್ದವು. ನವೆಂಬರ್ ನಲ್ಲಿ ನಿಶ್ಚಿತಾರ್ಥ ಮತ್ತು ಫೆಬ್ರವರಿಯಲ್ಲಿ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು ಶೀಘ್ರದಲ್ಲೇ ದಿನಾಂಕದ ಬಗ್ಗೆ ಪ್ರಕಟಿಸಲಾಗುತ್ತದೆ.
ಅರಮನೆಯಲ್ಲಿ ವಿವಾಹ ಮಹೋತ್ಸವ
ಬಹುತೇಕ ಬೆಂಗಳೂರು ಅರಮನೆಯಲ್ಲಿ ವಿವಾಹ ಮಹೋತ್ಸವ ಜರುಗಲಿದೆ. ಕೊವಿಡ್ 19 ಕಾರಣದಿಂದ ನಿಯಮಗಳನ್ನು ಪಾಲಿಸಿಕೊಂಡು ಎರಡು ಮನೆಯವರು ಶಾಸ್ತ್ರ, ಸಂಪ್ರದಾಯ ಪಾಲನೆ ಜೊತೆಗೆ ಮದುವೆ ಕಾರ್ಯ ನೆರವೇರಿಸಲು ನಿರ್ಧರಿಸಿದ್ದಾರೆ. ಮೂಡಿಗೆರೆಯ ಚೇತನಾ ಎಸ್ಟೇಟ್, ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಗಳಲ್ಲಿ ಎರಡು ಕುಟುಂಬದ ಮನೆ ಮಟ್ಟಿಗೆ ಶಾಸ್ತ್ರಗಳು ನಡೆಯಲಿವೆ.
ಮಾಜಿ ಸಿಎಂ ಎಸ್ಎಂಕೆ ಮನೆಯಲ್ಲಿ ತಾಂಬೂಲ ಶಾಸ್ತ್ರ ಮುಗಿಸಿದ ಡಿಕೆಶಿ ಕುಟುಂಬ
ಎಸ್ಎಂಕೆ ಹಾಗೂ ಡಿಕೆಶಿ ಬಾಂಧವ್ಯ
ರಾಜಕೀಯ ಗುರು ಎಸ್ ಎಂ ಕೃಷ್ಣ ಅವರ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ಎರಡು ರಾಜಕೀಯ ಕುಟುಂಬಗಳು ನೆಂಟಸ್ತನವನ್ನು ಡಿಕೆ ಶಿವಕುಮಾರ್ ಬೆಳೆಸಿದ್ದಾರೆ.
ಎಸ್ಎಂಕೆ ಅಳಿಯ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಎಸ್ಎಂಕೆ ಅವರಿಗೆ ಡಿಕೆಶಿ ಧೈರ್ಯ ತುಂಬಿದ್ದರು. ಸಿದ್ದಾರ್ಥ ಅವರ ಕುಟುಂಬಕ್ಕೂ ಡಿಕೆಶಿ ತುಂಬಾ ಹಳೆ ಪರಿಚಯ.
ಇಬ್ಬರಿಗೂ ಉದ್ಯಮದಲ್ಲಿ ಆಸಕ್ತಿ
ಡಿ.ಕೆ.ಶಿವಕುಮಾರ್ ಪುತ್ರಿ 22 ವರ್ಷ ವಯಸ್ಸಿನ ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆ. ಡಿ.ಕೆ.ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯ ಜವಾಬ್ದಾರಿಯನ್ನು ಐಶ್ವರ್ಯ ವಹಿಸಿಕೊಂಡಿದ್ದಾರೆ. ಅಮೇರಿಕಾದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ತ್ಯ ಹೆಗ್ಡೆ, ತಾಯಿ ಮಾಳವಿಕಾ ಜೊತೆಗೆ ಕುಟುಂಬದ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.
ಕಹಿನೆನಪಿನಿಂದ ಹೊರ ಬರುತ್ತಿರುವ ಕುಟುಂಬ
23 ವರ್ಷ ಐಶ್ವರ್ಯಾ ಕೂಡಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಕೆಫೆ ಕಾಫಿಡೇಗೆ ಕೋಟ್ಯಂತರ ರುಪಾಯಿ ಸಾಲ ನೀಡಿದ್ದಾರೆ ಎಂಬ ಮಾಹಿತಿಯಿದೆ ಆದರೆ, ವಿವರ ಲಭ್ಯವಿಲ್ಲ. ಐಶ್ವರ್ಯಾ ಒಟ್ಟಾರೆ, 108 ಕೋಟಿ ರೂ. ಘೋಷಿತ ಆಸ್ತಿಹೊಂದಿದ್ದು, 81.92 ಕೋಟಿ ರು ಸಾಲ ಹೊಂದಿದ್ದಾರೆ ಈ ಬಗ್ಗೆ ವಿವರ ಅಗತ್ಯ ಎಂದು ಜಾರಿ ನಿರ್ದೇಶನಾಲಯವು ಐಶ್ವರ್ಯಾರನ್ನು ಪ್ರಶ್ನಿಸಿತ್ತು. ಡಿಕೆ ಶಿವಕುಮಾರ್ ಬಂಧನವಾಗಿ, ಜೈಲಿನಿಂದ ಹೊರಬಂದಿದ್ದು ಕುಟುಂಬಕ್ಕೆ ಆಘಾತ ತಂದಿತ್ತು. ಇತ್ತ ಕೆಫೆ ಕಾಫಿ ಡೇ ಹುಟ್ಟು ಹಾಕಿದ್ದ ಕರ್ನಾಟಕದ ಪ್ರಮುಖ ಉದ್ಯಮಿ ವಿ.ಜಿ ಸಿದ್ದಾರ್ಥ ಅವರ ಮೃತದೇಹ ಕಳೆದ ವರ್ಷ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ನಂತರ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರನ್ನು ಅಮಾರ್ತ್ಯ ಕಳೆದುಕೊಂಡಿದ್ದರು. ಈಗ ಸಾವು ನೋವಿನ ಕಹಿ ನೆನಪಿನಿಂದ ಹೊರಬಂದು ಶುಭಕಾರ್ಯದಲ್ಲಿ ತೊಡಗಿಕೊಳ್ಳಲು ಎರಡು ಕುಟುಂಬ ಸಜ್ಜಾಗುತ್ತಿವೆ.