ಡಿಕೆ ಶಿವಕುಮಾರ್ ಪುತ್ರಿ ಮದುವೆ ಸಂಭ್ರಮ, ಅರಿಶಿನ ಶಾಸ್ತ್ರ
ಬೆಂಗಳೂರು,ಫೆಬ್ರವರಿ 11: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆಯು ಫೆಬ್ರವರಿ 14ರಂದು ನೆರವೇರಲಿದ್ದು, ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.
ಸದಾಶಿವನಗರದ್ಲಿರುವ ನಿವಾಸದಲ್ಲಿ ಅರಿಶಿನ ಶಾಸ್ತ್ರ ನೆರವೇರಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಪುತ್ರ ಅಮಾರ್ಥ್ಯ ಹೆಗ್ಡೆ ಅವರೊಂದಿಗೆ ಐಶ್ವರ್ಯಾ ಸಪ್ತಪದಿ ತುಳಿಯಲಿದ್ದಾರೆ.
ಡಿಕೆ ಶಿವಕುಮಾರ್ ಪುತ್ರಿ ವಿವಾಹ: ದೆಹಲಿಯಿಂದ ಹಲವು ಗಣ್ಯರ ಆಗಮನ ಸಾಧ್ಯತೆ
ವಿವಾಹವು ಬೆಂಗಳೂರಿನ ಖಾಸಗಿ ಹೋಟೆಲ್ವೊಂದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ.ಫೆಬ್ರವರಿ 17 ರಂದು ಆರತಕ್ಷತೆ ಕಾರ್ಯ ನೆರವೇರಲಿದೆ.
ಐಶ್ವರ್ಯಾ, ಅಮಾರ್ಥ್ಯ ಶಿಕ್ಷಣದ ಕುರಿತು ಮಾಹಿತಿ
ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ಥ್ಯ ಅವರು, ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ಪಧವೀಧರೆಯಾದ 22 ವರ್ಷದ ಐಶ್ವರ್ಯಾ ಅವರು ತಂದೆ ಡಿಕೆ ಶಿವಕುಮಾರ್ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
ಪ್ರೇಮಿಗಳ ದಿನದಂದೇ ಮದುವೆ
ಫೆ. 14 ರಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಅಂದು ವಾಲೈಂಟೆನ್ ಡೇ ಆಗಿರುವುದು ಕೂಡಾ ವಿಶೇಷ. ಪ್ರತಿಷ್ಠಿತ ಹೊಟೇಲಿನಲ್ಲಿ ಫೆ. 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಕರೋನಾ ಕಾರಣದಿಂದಾಗಿ ಮದುವೆಗೆ 800 ಮಂದಿ ಹಾಗೂ ಆರತಕ್ಷತೆಗೆ 1400 ಮಂದಿ ಪಾಲ್ಗೊಳ್ಳಲು ಅವಕಾಶವಿದೆ.
ಮುಖ್ಯಮಂತ್ರಿ ಯಡಿಯೂರಪ್ಪಗೆ ಆಮಂತ್ರಣ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.ಯಡಿಯೂರಪ್ಪ ಅವರು, ಐಶ್ವರ್ಯಾ ನಿಶ್ಚಿತಾರ್ಥಕ್ಕೂ ಆಗಮಿಸಿದ್ದರು.
ಮದುವೆಗೆ ಆಗಮಿಸುವ ಗಣ್ಯರ ವಿವರ
ಮದುವೆಗೆ ರಾಹುಲ್ ಗಾಂಧಿ ಆಗಮಿಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಜೊತೆ ಕೆ.ಸಿ ವೇಣುಗೋಪಾಲ್ , ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ ಇತ್ಯಾದಿ ಘಟಾನುಘಟಿ ನಾಯಕರೇ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಹೋದ್ಯೋಗಿಗಳಿಗೆ ಡಿಕೆಶಿ ಖುದ್ದು ಹೋಗಿ ಆಮಂತ್ರಣ ನೀಡಿದ್ದು, ಘಟಾನುಘಟಿ ಬಿಜೆಪಿನಾಯಕರೂ ಮದುವೆಗೆ ಬರಲಿದ್ದಾರೆ. ಅಮಾರ್ಥ್ಯ ಅಜ್ಜ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ.