ಏಸು ಪ್ರತಿಮೆ ಟೀಕಿಸಿದವರಿಗೆ ತಿರುಗೇಟು ನೀಡಿದ ಡಿಕೆಶಿ
ಬೆಂಗಳೂರು, ಡಿಸೆಂಬರ್ 27: ಏಸುಕ್ರಿಸ್ತನ ಏಕಶಿಲಾ ಪ್ರತಿಮೆ ನಿರ್ಮಿಸಲು ಶಿಲಾನ್ಯಾಸ ಮಾಡಿದ್ದರ ಕುರಿತು ಬಿಜೆಪಿ ನಾಯಕರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಎದುರಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಫೇಸ್ ಬುಕ್ ನಲ್ಲಿ ತಿರುಗೇಟು ನೀಡಿದ್ದಾರೆ.
ನಾನು ಸರ್ವ ಧರ್ಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾದ ಸಮಾನತೆಯ ಮೇಲೆ ನಂಬಿಕೆ ಇರುವವನು ನಾನು, ನನ್ನ ಕ್ಷೇತ್ರದಲ್ಲಿ ಎಲ್ಲ ಧರ್ಮದ ಜನರಿದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ನನ್ನ ಧರ್ಮ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಬಗ್ಗೆ ಸಂಸದ ಅನಂತ್ಕುಮಾರ್ ಹೆಗಡೆ ವ್ಯಂಗ್ಯ
ಏಸುಕ್ರಿಸ್ತನ ಪ್ರತಿಮೆಗೆ ಜಾಗ ಕೊಟ್ಟಿರುವುದಷ್ಟೇ ಅಲ್ಲ, ನಾನು ಮಂತ್ರಿಯಾಗಿದ್ದಾಗ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಿದೆ. ಮೆಯೋಹಾಲ್ ನಲ್ಲಿ ಕಚೇರಿ ಸ್ಥಾಪನೆಯಾಗಿ, ಬೆಂಗಳೂರಿನಲ್ಲಿ 5 ಎಕರೆ ಜಮೀನು ಮಂಜೂರಾಗಿದೆ ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಜಯಂತಿ, ತನ್ನಿಮಿತ್ತ ಸರಕಾರಿ ರಜೆ ಘೋಷಣೆ ಮಾಡಿಸಿದ್ದೇನೆ. ಆದಿಚುಂಚನಗಿರಿ ಶ್ರೀ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಬಿಡದಿಯ ಬಾಣಂದೂರಿಗೆ 25 ಕೋಟಿ ರುಪಾಯಿ ಮತ್ತು ಸಿದ್ದಗಂಗಾ ಶ್ರೀ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಹುಟ್ಟೂರಾದ ಮಾಗಡಿಯ ಅಭಿವೃದ್ದಿಗೆ 25 ಕೋಟಿ ರುಪಾಯಿ ನಮ್ಮ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದೆ ಎಂದಿದ್ದಾರೆ.
ಅಂದು, ಇಂದು: ಡಿ.ಕೆ.ಶಿವಕುಮಾರ್ ಸಹೋದರರ ಡಬಲ್ ಸ್ಟ್ಯಾಂಡರ್ಡ್
ಹೀಗೆ ಅದೆಷ್ಟೋ ಕೆಲಸಗಳಾಗಿವೆ, ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಂದು ಹೇಳುತ್ತಾ, ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಭಾರತ ಸಂವಿಧಾನ ಸುಡುವ ಮನಸ್ಥಿತಿ ಇರುವವರಿಂದ ನಾನು ಪಾಠ ಹೇಳಿಸಿಕೊಳ್ಳುವ ಜರೂರತ್ತು ಇಲ್ಲ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಇಲ್ಲೊಬ್ಬ Tihar Returned (ತಿಹಾರ್ ಜೈಲಿನಿಂದ ವಾಪಸ್ ಬಂದ) ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು, ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ' ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು.