ಬೆಂಗಳೂರು ವಿವಿ ವಿದ್ಯಾರ್ಥಿಗಳ ಭೇಟಿ ಮಾಡಿ ಧೈರ್ಯ ತುಂಬಿದ ಡಿಕೆಶಿ
ಬೆಂಗಳೂರು, ಜೂನ್ 13: ಜ್ಞಾನಭಾರತಿ ವಿದ್ಯಾರ್ಥಿಗಳ ಮತ್ತು ಸಚಿವ ಮುನಿರತ್ನ ಬೆಂಬಲಿಗರ ನಡುವೆ ಜಗಳ ನಡೆದು, ವಿದ್ಯಾರ್ಥಿಗಳ ಬಂಧಿಸಿದ್ದ ವಿಚಾರ ತಿಳಿದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.
Koo Appಬೆಂ. ವಿವಿಯೊಳಗೆ ಬಿಜೆಪಿ ಧ್ವಜ, ಫ್ಲೆಕ್ಸ್ ಹಾಕುವ ಮೂಲಕ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರುವಂತೆ ವರ್ತಿಸಿದ ಸಚಿವ ಮುನಿರತ್ನ, ಅವರ ಅಂಗರಕ್ಷಕರು ಹಾಗೂ ಪೊಲೀಸರು ದೌರ್ಜನ್ಯವೆಸಗಿದ್ದರ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದ್ದು, FIR ದಾಖಲು ಮಾಡಿ ಕ್ರಮ ಕೈಗೊಳ್ಳಲು ಮೀನಾ ಮೇಷ ಏಕೆ? @DGPKarnataka, @cpblr @DCPWestBCP 1/3 - D K Shivakumar (@dkshivakumar_official) 14 June 2022
ವಿವಿ ಆವರಣದಲ್ಲಿ ಸಚಿವರ ಬೆಂಬಲಿಗರು ಬಿಜೆಪಿಯ ಬಂಟಿಂಗ್ ಮತ್ತು ಫ್ಲೆಕ್ಸ್ಗಳನ್ನು ಹಾಕುತ್ತಿದ್ದದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿ ನಾಯಕರು ಮತ್ತು ಸಚಿವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಮಾಡಿದ್ದರು, ಆದರೂ ಸಚಿವರ ಬೆಂಬಲಿಗರು ವಿದ್ಯಾರ್ಥಿಗಳನ್ನು ನಿಂದಿಸಿ ಬಲವಂತವಾಗಿ ಪೊಲೀಸ್ ವ್ಯಾನ್ ಹತ್ತಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳ ಮೊಬೈಲ್ ಕಸಿದು ಗಲಾಟೆಯ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು.
ಬೆಂಗಳೂರು ಪೊಲೀಸರಿಂದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಂಧನ
ಈ ವಿಚಾರವಾಗಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಮಾತನಾಡಿದ ಡಿ. ಕೆ. ಶಿವಕುಮಾರ್, "ಈ ಹಿಂದೆ ವಿವಿ ಆವರಣವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿತ್ತೇ ಹೊರತು ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿರಲಿಲ್ಲ, ಆದರೆ ಇಲ್ಲಿಗೆ ಬರುವಾಗ ಆವರಣದಲ್ಲಿರುವ ಫ್ಲೆಕ್ಸ್ ಗಳನ್ನೆಲ್ಲಾ ಗಮನಿಸಿದ್ದೇನೆ. ರಾಜಕೀಯ ಕಾರಣಕ್ಕೆ ಬಳಸಿಕೊಂಡು ವಿಶ್ವವಿದ್ಯಾಲಯ ಆವರಣ ಕೆಸರೀಮಯವಾಗಿಸಿದ್ದಾರೆ. ಅಲ್ಲದೆ ಸ್ಥಳೀಯ ಮಂತ್ರಿಗಳು ಇಲ್ಲಿನ ವಿದ್ಯಾರ್ಥಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಆದೇಶ ನೀಡಿದ್ದಾರೆ ಎಂಬ ವಿಚಾರ ಕೂಡ ತಿಳಿದಿದೆ" ಎಂದರು.
"ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿನ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಕೂಡ ಇಲ್ಲಿ ವಿದ್ಯಾರ್ಥಿ ನಾಯಕನಾಗಿ ಹಲವು ವರ್ಷಗಳ ಕಾಲ ಈ ವಿಶ್ವವಿದ್ಯಾಲಯದ ಜತೆ ಸಂಪರ್ಕ ಹೊಂದಿದ್ದೆ. ಇಲ್ಲಿ ಎಲ್ಲ ಪಕ್ಷದ ಹಲವಾರು ನಾಯಕರು ತಯಾರಾಗಿದ್ದಾರೆ. ಈಗ ಭವಿಷ್ಯದ ನಾಯಕರನ್ನು ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.
Koo Appಹೈಕೋರ್ಟ್ನ ಸ್ಪಷ್ಟ ಆದೇಶವಿದ್ದರೂ ಸಹ ವಿವಿ ಆವರಣದಲ್ಲಿ ಬಿಜೆಪಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಿದ್ದನ್ನು ವಿರೋಧಿಸಿ ಸಚಿವ ಮುನಿರತ್ನ, ಗನ್ಮ್ಯಾನ್, ಬೆಂಬಲಿಗರು, ಪೊಲೀಸರಿಂದ ಹಲ್ಲೆಗೊಳಗಾದ ಬೆಂಗಳೂರು ವಿವಿ ವಿದ್ಯಾರ್ಥಿಗಳನ್ನು ಇಂದು ಭೇಟಿ ಮಾಡಿ ಸಮಾಧಾನ ಮಾಡಿ, ನಿಮ್ಮೊಡನೆ ನಾನಿದ್ದೇನೆ ಎಂದು ಧೈರ್ಯ ತುಂಬಿದೆ. 2/3 - D K Shivakumar (@dkshivakumar_official) 14 June 2022
"ಸರಕಾರ ತಮ್ಮ ಅಧಿಕಾರವನ್ನು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳ ನಿಂಧಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿ ಅಸಭ್ಯವಾಗಿ ನಡೆದುಕೊಂಡಿರುವುದನ್ನು ನಾನು ವಿಡಿಯೋಗಳಲ್ಲಿ ಗಮನಿಸಿದ್ದೇನೆ. ಈ ಮೂಲಕ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಾಗಲಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಇಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ನೋವು, ಸತ್ಯ ತಿಳಿಯಲು ಬಂದಿದ್ದೇನೆ" ಎಂದು ಹೇಳಿದರು.
ರಾಹುಲ್ ಗಾಂಧಿ ವಿಚಾರಣೆಗೆ ಹಾಜರ್: ಬೆಂಗಳೂರಿನ ಇಡಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
"ಬೆಂಗಳೂರು ವಿವಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ವಿಶ್ವವಿದ್ಯಾಲಯ ರಾಜಕೀಯ ನಾಯಕರು ಹಾಗೂ ವಿಶ್ವದ ಉತ್ತಮ ಸಾಧಕರನ್ನು ತಯಾರು ಮಾಡಿದೆ. ಹಾಗಾಗಿ ಈ ವಿವಿಯ ಪಾವಿತ್ರತೆಯನ್ನು ನಾವು ಕಾಪಾಡಬೇಕಾಗಿದೆ. ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಈ ವಿವಿಯ ಪರಂಪರೆಯನ್ನು ಉಳಿಸಲು ನೀವು ಹೋರಾಟ ಮಾಡಿದ್ದೀರಿ. ನೀವು ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಬೆಂಬಲಿಸಿ ಹೋರಾಟ ಮಾಡಿಲ್ಲ. ನೀವು ಈ ವಯಸ್ಸಿನಲ್ಲಿ ನಿಮ್ಮ ಹಕ್ಕನ್ನು ರಕ್ಷಿಸಿ ಕೊಳ್ಳದಿದ್ದರೆ ಯಾವ ವಯಸ್ಸಿನಲ್ಲಿ ಮಾಡಿಕೊಳ್ಳಲು ಸಾಧ್ಯ? ಇದು ವಿದ್ಯಾರ್ಥಿಗಳ ಶಕ್ತಿಯಾಗಿದ್ದು, ಇದು ದೇಶದ ಶಕ್ತಿಯಾಗಿದೆ. ಈ ವಿಚಾರ ಆ ಸಚಿವರ ತಲೆಯಲ್ಲಿ ಇಲ್ಲ" ಎಂದು ಡಿ. ಕೆ. ಶಿವಕುಮಾರ್ ಅಸಮಧಾನ ಹೊರ ಹಾಕಿದರು.
"ಸರ್ಕಾರದಿಂದ ಇಲ್ಲಿ ಅನೇಕ ವ್ಯವಹಾರಗಳನ್ನು ನಡೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ನಿಮ್ಮ ಗಮನಕ್ಕೆ ಬರುವ ವಿಚಾರಗಳನ್ನು ನಮಗೆ ತಿಳಿಸಿ, ನಾವು ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ನೀವು ನಮಗೆ ರಾಜಕೀಯವಾಗಿ ಬೆಂಬಲಿಸಿ ಎಂದು ಕೇಳಲು ಇಲ್ಲಿಗೆ ಬಂದಿಲ್ಲ. ನಿಮ್ಮ ನೋವಿನ ಜತೆ ನಾನು ಹಾಗೂ ನಮ್ಮ ಪಕ್ಷ ಸದಾ ಇರುತ್ತದೆ ಎಂದು ಹೇಳಲು ಬಂದಿದ್ದೇನೆ" ಎಂದು ತಿಳಿಸಿದರು.