ಬುಲೆಟ್ ಪ್ರಕಾಶ್ ನಿಧನಕ್ಕೆ ಡಿಕೆಶಿ, ಬಿಸಿ ಪಾಟೀಲ್ ಸಂತಾಪ
ಬೆಂಗಳೂರು, ಏಪ್ರಿಲ್ 6: ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ಅಕಾಲಿಕ ಮರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದರು.
''ಬುಲೆಟ್ ಪ್ರಕಾಶ್ ಅವರು ಉತ್ತಮ ನಟ. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೇವಲ 44 ರ ಸಣ್ಣ ವಯಸ್ಸಿಗೆ ವಿಧಿವಶರಾಗಿರುವುದು ಬೇಸರದ ಸಂಗತಿ.''
ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶ
''ಬಹುದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಇತ್ತೀಚೆಗೆ ಅನಾರೋಗ್ಯದ ವಿರುದ್ಧ ಹೋರಾಡಿ, ಚೇತರಿಸಿಕೊಂಡು ಮತ್ತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ವಿಧಿ ಕೊನೆಗೂ ಅವರನ್ನು ಸಾವಿಗೆ ದೂಡಿದೆ. ಅವರ ಸಾವಿನಿಂದ ಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿದೆ.''
''ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರು, ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ'' ಎಂದು ಡಿ.ಕೆ.ಶಿವಕುಮಾರ್ ಶೋಕ ಸಮರ್ಪಿಸಿದರು.
ಇನ್ನೂ, ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಕಂಬನಿ ಮಿಡಿದಿದ್ದು, ''ಬುಲೆಟ್ ಪ್ರಕಾಶ್ ಅವರು ಬಹಳ ಕಷ್ಟಪಟ್ಟು ಕನ್ನಡ ಚಿತ್ರರಂಗದಲ್ಲಿ ಮೇಲೆಬಂದವರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಎಲ್ಲರೊಂದಿಗೆ ಬೆರೆಯುವ ಒಳ್ಳೆಯ ಮನಸು ಪ್ರಕಾಶ್ ಅವರಿಗಿತ್ತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್, ನಗರದ ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಚಿಕಿತ್ಸೆಯ ಬಳಿಕ ಸೋಮವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.