ಡಿ.ಜೆ.ಹಳ್ಳಿ ಗಲಭೆ: ಐದು ದಿನಗಳ ಸಿಸಿಬಿ ಪೊಲೀಸರ ವಶಕ್ಕೆ ಮಾಜಿ ಕಾರ್ಪೋರೇಟರ್ ಜಾಕೀರ್ !
ಬೆಂಗಳೂರು, ಡಿಸೆಂಬರ್ 04: ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಕಾರ್ಪೋರೇಟರ್ ಎ.ಆರ್.ಜಾಕೀರ್ ಅವರನ್ನು ಐದು ದಿನಗಳ ಕಾಲ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐದು ದಿನಗಳ ಕಾಲ ಎ.ಆರ್. ಜಾಕೀರ್ ವಿಚಾರಣೆನ್ನು ಸಿಸಿಬಿ ಪೊಲೀಸರು ನಡೆಸಲಿದ್ದಾರೆ.
Recommended Video
ಚಿಕ್ಕದೊಂದು ಪೋಸ್ಟ್ ನಿಂದ ಶುರುವಾದ ವಿವಾದ ಇಡೀ ಬೆಂಗಳೂರಿಗೆ ಬೆಂಕಿ ಇಟ್ಟಿತ್ತು. ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಡಲಾಗಿತ್ತು. ಇದಾದ ಕೂಡಲೇ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಬೆಂಕಿಯಲ್ಲಿ ಉರಿದು ಹೋಗಿತ್ತು. ಕೆ.ಜಿ ಹಳ್ಳಿಯಲ್ಲಿಗಲಭೆ, ಹೀಗೆ ರಾಷ್ಟ್ ಮಟ್ಟದಲ್ಲಿ ಸುದ್ದಿಯಾದ ಗಲಭೆ ಹಿಂದೆ ಜನ ಪ್ರತಿನಿಧಿಗಳ ದುಷ್ಪ್ರೇರಣೆ ಇತ್ತು ಎಂಬುದು ಸಿಸಿಬಿ ತನಿಖೆಯಲ್ಲಿ ಬಯಲಾಗಿತ್ತು. ಎಸ್ಡಿಪಿಐ ಕಾರ್ಯಕರ್ತರನ್ನು ಗಲಭೆಗೆ ಫುಸಲಾಯಿಸಿದ್ದು, ಅವರಿಗೆ ಆರ್ಥಿಕ ನೆರವು ನೀಡಿದ್ದು, ಶಾಸಕ ಅಖಂಡ ಶ್ರೀನಿವಾಸ ಅವರ ರಾಜಕೀಯ ಭವಿಷ್ಯ ಮುಗಿಸುವ ಯೋಜನೆಯ ಒಂದು ಭಾಗವಾಗಿತ್ತು. ಮೊದಲ ಹಂತದಲ್ಲಿ ಎಸ್ಡಿಪಿಐ ಮುಖಂಡರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಮಾಜಿ ಮೇಯರ್ ಸಂಪತ್ ರಾಜ್, ಫುಲಿಕೇಶಿನಗರ ಮಾಜಿ ಕಾರ್ಪೋರೇಟರ್ ಎ.ಆರ್. ಜಾಕೀರ್ ಇಬ್ಬರ ಪಾತ್ರ ಇರುವುದು ಬೆಳಕಿಗೆ ಬಂದಿತ್ತು. ಇನ್ನೇನು ವಿಚಾರಣೆ ನಡೆಸುವಾಗಲೇ ಆಸ್ಪತ್ರೆ ದಾಖಲಾಗಿ ಸಂಪತ್ ರಾಜ್ ಎಸ್ಕೇಪ್ ಆಗಿದ್ದರು. ಅದೇ ಹಾದಿ ಹಿಡಿದಿದ್ದ ಫುಲಿಕೇಶಿನಗರ ಮಾಜಿ ಕಾರ್ಪೋರೇಟರ್ ಎ.ಆರ್. ಜಾಕೀರ್ ಒಂದು ವಿಚಾರಣೆಗೆ ಹಾಜರಾಗಿ ತಲೆ ಮರೆಸಿಕೊಂಡಿದ್ದರು.
ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಕಾರ್ಪೋರೇಟರ್ ಜಾಕೀರ್ ಬಂಧನ
ಇತ್ತೀಚೆಗೆ ಸಂಪಂತ್ ರಾಜ್ ತಮ್ಮ ಆಪ್ತರ ಮನೆಗೆ ಬಂದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆದರೆ ಜಾಕೀರ್ ಮಾತ್ರ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಎ.ಆರ್ ಜಾಕೀರ್ ಅವರನ್ನು ಬಂಧಿಸಿ ಸಿಸಿಬಿ ಪೊಲೀರು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಕಳೆದ ಎರಡು ದಿನಗಳಿಂದಲೂ ಜಾಕೀರ್ ಅವರನ್ನು ವಿಚಾರಣೆಗೆ ಒಳಪಡಿಸಲು ಪೂರ್ವ ತಯಾರಿ ನಡೆಸಿಕೊಂಡಿರುವ ಸಿಸಿಬಿ ಪೊಲೀಸರು ಇಂದು ನ್ಯಾಯಾಲಯದ ಆದೇಶದ ಮೂಲಕ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಬರುವ ಬುಧವಾರದಂದು ಜಾಕೀರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕಿದೆ. ಅಲ್ಲಿಯ ವರೆಗೂ ಸಿಸಿಬಿ ಪೊಲೀಸರ ತನಿಖೆ ಎದುರಿಸಲಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತರಾಗಿರುವ ಜಾಕೀರ್ ಶಿವಾಜಿನಗರ ಕ್ಷೇತ್ರದಿಂದ ಶಾಸಕರಾಗಲು ಬಯಿಸಿದ್ದರು. ಮೇಯರ್ ಆಗಿದ್ದ ಸಂಪತ್ ರಾಜ್ ಅಖಂಡ ಅವರ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಲು ಬಯಿಸಿದ್ದರು. ಒಂದೇ ಪಕ್ಷದ ನಾಯಕನಾಗಿರುವ ಕಾರಣ ಅಖಂಡ ರಾಜಕೀಯ ಭವಿಷ್ಯವನ್ನು ಪರೋಕ್ಷವಗಿ ಮುಗಿಸಲು ಸಂಚು ರೂಪಿಸಿದ್ದರು. ಅದರ ಭಾಗವಾಗಿಯೇ ಅವರ ಮನೆಗೆ ಬೆಂಕಿ ಬಿದ್ದಿತ್ತು ಎಂಬುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸಂಪತ್ ರಾಜ್ ಅವರಿಗೆ ಆಪ್ತನಾಗಿದ್ದ ಜಾಕೀರ್ ಅವರ ನೆರವಿನಿಂದ ಎಸ್ಡಿಪಿಐ ಕಾರ್ಯಕರ್ತರ ಸಹಾಯ ಪಡೆದು ಗಲಭೆಗೆ ಕಾರಣವಾದರಾ ಎಂಬ ಸಂಗತಿಯ ಬಗ್ಗೆ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಗಲಭೆ ನಡೆದ ಮೂರು ತಿಂಗಳ ಮೊದಲಿನಿಂದಲೂ ಜಾಕೀರ್ ಯಾರನ್ನು ಸಂಪರ್ಕಿಸಿದ್ದರು, ಬಂಧಿತ ಆರೋಪಿಗಳ ಪೈಕಿ ಯಾರ ಜತೆ ನಿಕಟ ಸಂಪರ್ಕ ಹೊಂದಿದ್ದರು. ಅವರೆಲ್ಲರ ದೂರವಾಣಿ ಕರೆಗಳ ಮಾಹಿತಿ ಪಡೆದು ಸಿಬಿಬಿ ಪೊಲೀಸರು ವಿಶ್ಲೇಷಣೆ ನಡೆಸಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಜಾಕೀರ್ ಸಿಸಿಬಿ ಪ್ರಶ್ನೆಗಳಿಗೆ ಏನು ಉತ್ತರ ಕೊಡುತ್ತಾರೆ. ಇಲ್ಲವೇ ತಪ್ಪು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕು. ಆದರೆ, ಈಗಾಗಲೇ ಡಿ.ಜಿ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ನೂರಾರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ಮುಗಿಯುತ್ತಿದ್ದಂತೆ ಜಾಕೀರ್ ಮತ್ತು ಸಂಪತ್ ರಾಜ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.