ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಕಾರ್ಪೋರೇಟರ್ ಜಾಕೀರ್ ಬಂಧನ
ಬೆಂಗಳೂರು, ಡಿಸೆಂಬರ್ 03: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಜನ ಪ್ರತಿನಿಧಿ ಬಂಧನಕ್ಕೆ ಒಳಗಾಗಿದ್ದಾನೆ. ಡಿ.ಜೆ. ಹಳ್ಳಿ ಗಲೆಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಕಾರ್ಪೋರೇಟರ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿತ್ತು. ವಿಚಾರಣೆ ಎದುರಿಸದೇ ತಲೆ ಮರೆಸಿಕೊಂಡಿದ್ದರು. ಬುಧವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಅಂದಹಾಗೆ ಬಂಧನಕ್ಕೆಒಳಗಾಗಿರುವುದು ಪುಲಿಕೇಶಿನಗರ ಕಾರ್ಪೋರೇಟರ್ ಜಾಕೀರ್. ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಕಾರ್ಪೋರೇಟರ್ ಅಬ್ದುಲ್ ರಕೀಬ್ ಜಾಕೀರ್ ಅವರ ಪಾತ್ರ ಇರುವ ಬಗ್ಗೆ ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡುತ್ತಿದ್ದಂತೆ ಇಬ್ಬರೂ ತಲೆ ಮರೆಸಿಕೊಂಡಿದ್ದರು.
ಅನಾರೋಗ್ಯ ನೆಪ ನೀಡಿ ಆಸ್ಪತ್ರೆ ದಾಖಲಾಗಿದ್ದ ಸಂಪತ್ ರಾಜ್ ರಾತ್ರೋ ರಾತ್ರಿ ತಲೆ ಮರೆಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಜಾಕೀರ್ ಕೂಡ ನಾಪತ್ತೆಯಾಗಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಪತ್ ರಾಜ್ ಬಂಧನಕ್ಕೆ ಒಳಗಾಗಿದ್ದರು. ಇದೀಗ ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತರಾದ ಎ.ಆರ್. ಜಾಕೀರ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.
ಜಾಕೀರ್ ಪಾತ್ರ ಏನು ? ಜಾಕೀರ್ ಮತ್ತು ಸಂಪತ್ ರಾಜ್ ಕಾಂಗ್ರೆಸ್ ಪಕ್ಷದ ಮುಖಂಡರು. ಮೇಯರ್ ಆಗಿದ್ದ ಸಂಪತ್ ರಾಜ್ ಫುಲಿಕೇಶಿನಗರ ಕ್ಷೇತ್ರದಲ್ಲಿ ಶಾಸಕನಾಗುವ ಹಂಬಲ. ಅದೇ ರೀತಿ ಜಾಕೀರ್ಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗುವ ಹೆಬ್ಬಯಕೆ. ಈ ಇಬ್ಬರು ನಾಯಕರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದರು. ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದರು. ಇದರ ಭಾಗವಾಗಿಯೇ ಡಿ.ಜೆ.ಹಳ್ಳಿ ಗಲಭೆ ಸೂತ್ರದಾರರು ಆದರೇಎಂಬ ಅನುಮಾನ ಮೂಡಿಸುತ್ತದೆ.
ಇನ್ನು ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಸಂಪತ್ ರಾಜ್ ಮತ್ತು ಜಾಕೀರ್ ಅವರ ಪಾತ್ರ ಇರುವ ಬಗ್ಗೆ ಉಲ್ಲೇಖವಾಗಿದೆ. ಸಂಪತ್ ರಾಜ್ ಮುಸ್ಲಿಂ ಸಮುದಾಯದ ಬೆಂಬಲಕ್ಕಾಗಿ ಎಸ್ಡಿಪಿಐ ಜತೆ ನಿಕಟ ಸಂಪರ್ಕ ಹೊಂದಿದ್ದರು. ಫುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಅವರನ್ನು ಟಾರ್ಗೆಟ್ ಮಾಡುವಂತೆ ಎಸ್ಡಿಪಿಐ ಕಾರ್ಯಕರ್ತರಿಗೆ ಸಂಪತ್ ರಾಜ್ ಸೂಚಿಸಿದ್ದರು. ಅದರಂತೆ ಅಖಂಡ ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಅಚ್ಚರಿ ಏನೆಂದರೆ ಅಖಂಡ ಶ್ರೀನಿವಾಸ್ ಅವರಿಗೆ ತೊಂದರೆ ಕೊಡುವ ಬಗ್ಗೆ ಮೂರು ತಿಂಗಳ ಹಿಂದೆ ರೂಪಗೊಂಡಿದ್ದ ಸಂಚಿನಲ್ಲಿ ಸಂಪತ್ ರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಸಂಪತ್ ರಾಜ್ ಅವರ ಆಪ್ತರಾಗಿದ್ದ, ಬಿಬಿಎಂಪಿಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದ ಫುಲಿಕೇಶಿನಗರ ಕಾರ್ಪೋರೇಟರ್ ಜಾಕೀರ್ ಕೂಡ ಸಂಚಿನ ಭಾಗವಾಗಿ ಯೋಜನೆ ಕಾರ್ಯಗತಗೊಳಿಸಲು ಕಾಯುತ್ತಿದ್ದರು.
ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗ ಅರುಣ್ ಹಾಕಿದ ಪೋಸ್ಟ್ ನಿಂದ ಗಲಭೆ ಉಂಟಾಗಲು ಮೂಲ ಕಾರಣವಾಯಿತು. ಇದೇ ಅವಕಾಶ ಬಳಸಿ, ಸಾಧ್ಯವಾದರೆ ಅಖಂಡ ಶ್ರೀನಿವಾಸ್ ಅವರ ರಾಜಕೀಯ ಭವಿಷ್ಯ ಮುಗಿಸಲು ಎಸ್ಡಿಪಿಐ ಕಾರ್ಯಕರ್ತರನ್ನು ಪುಸಲಾಯಿಸಿದ್ದರು. ಅದರ ಭಾಗವಾಗಿಯೇ ಎಸ್ಡಿಪಿಐ ಕಾರ್ಯಕರ್ತರು ಜಮಾಯಿಸಿ ಅಖಂಡ ಶ್ರೀನಿವಾಸ್ ಮನೆಗೆ ದುರುದ್ದೇಶ ಪೂರ್ವಕವಾಗಿಯೇ ಬೆಂಕಿ ಹಚ್ಚಿದ್ದರು. ಬಳಿಕ ಡಿ.ಜೆ.ಹಳ್ಳಿ ಠಾಣೆಗೆ ಬೆಂಕಿ ಇಟ್ಟು ಉದ್ಧಟತನ ಮೆರೆದಿದ್ದರು ಎಂಬುದು ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಸಂಪತ್ ರಾಜ್ ಪುಲಿಕೇಶಿನಗರ ಕ್ಷೇತ್ರದಲ್ಲಿ ಶಾಸಕನಾಗುವ ಹೆಬ್ಬಯಕೆ, ಜಾಕೀರ್ ಗೆ ಶಿವಾಜಿನಗರ ಶಾಸಕನಾಗುವ ಹೆಬ್ಬಯಿಕೆ. ಸಮಾನ ಮನಸ್ಕ ಉದ್ದೇಶ ಈಡೇರಿಸಿಕೊಳ್ಳಲು ಮೊದಲ ಹಂತದಲ್ಲಿಫುಲಿಕೇಶಿನಗರ ಶಾಸಕರನ್ನುಟಾರ್ಗೆಟ್ ಮಾಡಿದ್ದರೇ ಎಂಬ ಅನುಮಾನ ಹುಟ್ಟು ಹಾಕಿದೆ.
ಎನ್ಐಎ ವಿಚಾರಣೆ: ಇನ್ನು ಡಿ.ಜೆ.ಹಳ್ಳಿ ಠಾಣೆಗೆ ಬೆಂಕಿ ಇಟ್ಟು ಸಾರ್ವಜಿಕ ಆಸ್ತಿ ಪಾಸ್ತಿಗೆ ನಷ್ಟ ವುಂಟು ಮಾಡಿದ, ಜನರಲ್ಲಿ ಭೀತಿ ಹುಟ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಎಸ್ಡಿಪಿಐ ಮತ್ತು ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. ಇದೀಗ ಬಂಧಿತ ಜಾಕೀರ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ಮುಗಿಸಿದ ಬಳಿಕ ಎನ್ಐಎ ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಈಗಾಗಲೇ ಬಂಧಿತ ಸಂಪತ್ ರಾಜ್ ಅವರನ್ನು ವಿಚಾರಣೆಗೆ ಒಳಡಪಿಸಿದ್ದಾರೆ. ಎನ್ಐಎ ತನಿಖೆಯಲ್ಲಿ ಸಂಪತ್ ರಾಜ್ ಮತ್ತು ಜಾಕೀರ್ ಅವರ ಹೆಸರು ಸೇರ್ಪಡೆಯಾದಲ್ಲಿ ಶಾಸಕರಾಗಲು ಸಂಚು ರೂಪಿಸಿ ಕಾರ್ಯಗತಗೊಳಿಸಲು ಹೋಗಿದ್ದ ಇಬ್ಬರ ಭವಿಷ್ಯವೂ ರಾಜಕೀಯವಾಗಿ ಮುಗಿದಂತೆಯೇ. ಶಾಸಕರಾಗುವ ಹೆಬ್ಬಯಕೆಗಾಗಿ ಹಾಲಿ ಶಾಸಕರನ್ನು ಮುಗಿಸಲು ಸಂಚು ರೂಪಿಸಿ ನಾಯಕರಾಗಲು ಹೊರಟಿದ್ದವರೇ ರಾಜಕೀಯ ಭವಿಷ್ಯವೇ ಮುಗಿದು ಹೋಗುವುದು ಖಚಿತ.