ಡಿ ಜೆ ಹಳ್ಳಿ ಗಲಭೆ ಪ್ರಕರಣ: ಎನ್ಐಎ ನ್ಯಾಯಾಲಯ ಆದೇಶ ರದ್ದು, 115 ಆರೋಪಿತರಿಗೆ ಜಾಮೀನು
ಬೆಂಗಳೂರು, ಜೂ. 18: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಕಳೆದ ವರ್ಷದ ಆಗಸ್ಟ್ನಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ 115 ಆರೋಪಿಗಳಿಗೆ ಜಾಮೀನು ನೀಡಲು ಎನ್ಐಎ ನ್ಯಾಯಾಲಯ ನಿರಾಕರಿಸಿ, ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಕಾಲಾವಕಾಶ ನೀಡಿತ್ತು. ಈ ಸದರಿ ಆದೇಶವನ್ನು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿಯ ಏಕಸದಸ್ಯ ಪೀಠ ತಳ್ಳಿಹಾಕಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 167(2)ರ ಅಡಿ ಈ 115 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ಇಬ್ಬರ ಶ್ಯೂರಿಟಿ ಮತ್ತು ರೂ. 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ನಿರ್ದೇಶಿಸಿದೆ. ಹಾಗೆಯೇ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2020ರ ನವೆಂಬರ್ 3ರ ಆದೇಶ ಮತ್ತು ಸಿಆರ್ಪಿಸಿ ಸೆಕ್ಷನ್ 167(2)ರ ಅಡಿ ಅರ್ಜಿದಾರರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2021ರ ಜನವರಿ 5ರಂದು ಎನ್ಐಎ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ.
ಡಿ.ಜೆ ಹಳ್ಳಿ ಗಲಭೆ: ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿ
ತನ್ನ ಆದೇಶದಲ್ಲಿ ಹೈಕೋರ್ಟ್, ಕಾನೂನಿನ ಹೊರತಾಗಿ ಸಂವಿಧಾನದ 21ನೇ ವಿಧಿಯಡಿ ವ್ಯಕ್ತಿಯೋರ್ವನಿಗೆ ಲಭಿಸಿರುವ ಮೂಲಭೂತ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡಲು ಪ್ರಾಸಿಕ್ಯೂಷನ್ ಕೋರಿರುವುದಕ್ಕೆ ಅನುಮತಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಈಗಾಗಲೇ ಹೇಳಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಿ 90 ದಿನಗಳಾಗಿದೆ. ಈ ಕಾರಣದಿಂದಾಗಿ ಶಾಸನಬದ್ಧವಾಗಿ ಸಿಆರ್ಪಿಸಿ ಸೆಕ್ಷನ್ 167(2)ರ ಅಡಿ ಭದ್ರತೆ ನೀಡಲು ಸಿದ್ಧವಾಗಿದ್ದು, ಜಾಮೀನು ನಿರಾಕರಿಸಲಾಗದು ಎಂದು ತಿಳಿಸಿದೆ.
ತನಿಖೆಗೆ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿ ವಿಚಾರಣೆಯ ವೇಳೆ ಆರೋಪಿಗಳಾಗಿರುವ ಈ ಅರ್ಜಿದಾರರಿಗೆ ವಾದ ಮಂಡಿಸಲು ಯಾವುದೇ ಅವಕಾಶ ನೀಡಿಲ್ಲ. ಅರ್ಜಿದಾರರು ಇಲ್ಲದೆಯೇ ಪ್ರಾಸಿಕ್ಯೂಷನ್ ಮನವಿಯ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್ ಮನವಿ ಸಲ್ಲಿಸಿದ್ದಾರೆ. ಅದನ್ನು ನ್ಯಾಯಾಲಯ ಪರಿಗಣಿಸುತ್ತಿದೆ ಎಂದು ಅರ್ಜಿದಾರರಿಗೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆ ಯುಎಪಿಎ ಸೆಕ್ಷನ್ 43-ಡಿ(2)(ಬಿ)ರ ಮೊದಲ ನಿಬಂಧನೆಯಡಿ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಗೆ ಕಾನೂನು ಮಾನ್ಯತೆ ನೀಡಲಾಗದು ಎಂದು ತೀರ್ಪಿನಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಹೇಳಿದ್ದಾರೆ. ಹಾಗೆಯೇ ತನಿಖೆಗೆ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯ ಬಗ್ಗೆ ಆರೋಪಿಗಳಿಗೆ ಅಥವಾ ಆರೋಪಿಗಳ ಪರ ವಕೀಲರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುದನ್ನು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ನ್ಯಾಯಾಲಯವು ಬಿಕ್ರಮ್ಜಿತ್ ಸಿಂಗ್ ಪ್ರಕರಣದಲ್ಲಿ ಹೇಳಿರುವಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಅರ್ಜಿದಾರರ ಪರವಾಗಿದ್ದರೆ ಹಕ್ಕನ್ನು ಕಸಿಯಲಾಗದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಡಿಜೆ ಹಳ್ಳಿ ಗಲಭೆಗೆ ನವೀನ್ ಫೇಸ್ಬುಕ್ ಪೋಸ್ಟ್ ಕಾರಣವಲ್ಲ: ಸಚಿವ ಅರವಿಂದ್ ಲಿಂಬಾವಳಿ!
ಕಳೆದ ವರ್ಷದ ಆಗಸ್ಟ್ನಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿ ಪಿ ನವೀನ್ ತನ್ನ ಫೇಸ್ಬುಕ್ನಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದನ್ನು ವಿರೋಧಿಸಿ ಬೆಂಗಳೂರು ಈಶಾನ್ಯದಲ್ಲಿರುವ ಡಿ ಜೆ ಹಳ್ಳಿ ಪೊಲೀಸ್ ಠಾಣೆಯ ಮುಂಭಾಗ ಸುಮಾರು 300 ಮಂದಿ ಸೇರಿದ್ದು, ಈ ಸಂದರ್ಭ ಪೊಲೀಸರು ಮತ್ತು ಆ ಗುಂಪಿನ ನಡುವೆ ಘರ್ಷಣೆ ಉಂಟಾಗಿದೆ.
ಈ ಸಂದರ್ಭದಲ್ಲಿ ಭಾರೀ ಹಿಂಸಾಚಾರ ನಡೆದಿದ್ದು, ಪೊಲೀಸರು ಗುಂಡೇಟಿಗೆ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರು ಹಾಗೂ ಪತ್ರಕರ್ತರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮುಜಾಮಿಲ್ ಪಾಷಾ ಮತ್ತು ಇತರರನ್ನು ಯುಎಪಿಎ, ಭಾರತೀಯ ದಂಡ ಸಂಹಿತೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್ಗಳ ಅಡಿ ದೂರು ದಾಖಲಿಸಿ, ಆಗಸ್ಟ್ 12ರಂದು ಬಂಧಿಸಲಾಗಿದೆ.
Recommended Video
ಈ ಪ್ರಕರಣದಲ್ಲಿ 90 ದಿನಗಳು ಪೂರ್ಣಗೊಂಡಿದೆ. ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ಕೋರಿ ಕಳೆದ ನವೆಂಬರ್ 3ರಂದು ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಎನ್ಐಎ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಆದರೆ ಬಳಿಕ ಆರೋಪಿಗಳು ಡೀಫಾಲ್ಟ್ ಜಾಮೀನು ಕೋರಿ ನವೆಂಬರ್ 11ರಂದು ಸಲ್ಲಿಸಿದ್ದ ಮನವಿಯನ್ನು ಎನ್ಐಎ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ 115 ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿ, ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಕಾಲಾವಕಾಶ ನೀಡಿದ್ದ ವಿಶೇಷ ಎನ್ಐಎ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ್ದು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 167(2)ರ ಅಡಿ ಈ 115 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)