ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
ಬೆಂಗಳೂರು, ಫೆಬ್ರವರಿ 28: ಒಂದಡೆ ಜನ್ಮ ಕೊಟ್ಟ ತಂದೆಯಿಂದಲೇ ಮಾರಣಾಂತಿಕ ಹಲ್ಲೆ. ಇನ್ನೊಂದಡೆ ದೂರು ಕೊಟ್ಟರೂ ಬಂಧಿಸುವ ನಾಟಕವಾಡಿದ ಪೊಲೀಸರಿಂದ ಅನ್ಯಾಯ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಯಿಂದಲೇ ಫೇಸ್ ಬುಕ್ ಲೈವ್ ಮಾಡಿ ಪೊಲೀಸರು ಮಾಡಿದ ಅನ್ಯಾಯದ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಆಕೆ ಹೆಸರು ಅಮೃತ. ಮೂಲತಃ ತಿಪಟೂರಿನವರಾಗಿದ್ದು, ಕಾವಲ್ ಭೈರಸಂದ್ರದಲ್ಲಿ ವಾಸವಾಗಿದ್ದಾರೆ. ಆಸ್ತಿ ವಿಚಾರವಾಗಿ ತಂದೆ ಭೈರಪ್ಪ ಇತ್ತೀಚೆಗೆ ಅಮೃತಾ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಈ ಕುರಿತು ತಿಪಟೂರಿನಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಭೈರಪ್ಪನ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದರು. ಎಫ್ಐಆರ್ ದಾಖಲಾದ ಬಳಿಕ ಪ್ರಕರಣವನ್ನು ವಾಪಸು ತೆಗೆದುಕೊಳ್ಳುವಂತೆ ತಂದೆ ಬೈರಪ್ಪ ಅಮೃತಾರಿಗೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಭೈರಪ್ಪ ತನ್ನ ಸಹಚರರೊಂದಿಗೆ ಬಂದು ಹೆದರಿಸಿದ್ದ. ಈ ಕುರಿತು ಅಮೃತಾ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೋಸದ ಬಗ್ಗೆ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಸಾವಿಗೆ ಶರಣಾದ ಯುವಕ !
ದೂರು ದಾಖಲಿಸಿಕೊಳ್ಳದೇ ಎನ್ಸಿಆರ್ ಮಾಡಿ ಪೊಲೀಸರು ಸುಮ್ಮನಾಗಿದ್ದರು. ಪೊಲೀಸರ ಕ್ರಮದಿಂದ ಬೇಸತ್ತ ಅಮೃತಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಡಿಜಿ ಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದೇ ರೀತಿ ಆರೋಪಿತ ತಂದೆ ಮತ್ತು ಅವರ ಸಹಚರರನ್ನು ಬಂಧಿಸುವಂತೆ ಅಮೃತಾ ಒತ್ತಾಯ ಮಾಡಿದ್ದರು.
ಆರೋಪಿಗಳನ್ನು ಬಂಧಿಸಬೇಕಾದರೆ ಎರಡು ವಾಹನ ಬೇಕು ಎಂದು ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕಾಗಿ ಎರಡು ವಾಹನವನ್ನು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಆರೋಪಿತ ತಂದೆಯನ್ನು ಠಾಣೆಗೆ ಕರೆಸಿದ ಪೊಲೀಸರು ಕೂಡಲೇ ಬಿಟ್ಟು ಕಳಿಸಿದ್ದಾರೆ. ಪೊಲೀಸ್ ಠಾಣೆಗೆ ಹೋದ ಕೂಡಲೇ ಅಮೃತಾ ಅವರಿಗೆ ಈ ಸಂಗತಿ ಗೊತ್ತಾಗಿದ್ದು ತನಗಾದ ಅನ್ಯಾಯದ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ.
Recommended Video
ಪೊಲೀಸ್ ಠಾಣೆಯಲ್ಲಿ ಪೊಲೀಸರು ನಡೆದುಕೊಂಡ ರೀತಿ, ಮಾಡಿದ ಅನ್ಯಾಯದ ಬಗ್ಗೆ ವಿಡಿಯೋದಲ್ಲಿ ಅಮೃತಾ ಕಿಡಿ ಕಾರಿದ್ದಾರೆ. ಇಷ್ಟಾದರೂ ಅಮೃತಾ ಅವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಿಲ್ಲ. ನ್ಯಾಯಾಲಯ ಆದೇಶದ ಬಳಿಕವೂ ಆರೋಪಿಗಳನ್ನು ಬಂಧಿಸಲು ವಾಹನ ವ್ಯವಸ್ಥೆ ಮಾಡಿಸಿಕೊಂಡಿದ್ದಾರೆ. ಕರೆ ತಂದ ಕೂಡಲೇ ಠಾಣಾ ಜಾಮೀನು ಆಧಾರದ ಮೇಲೆ ಬಿಟ್ಟು ಕಳಿಸಿದ್ದು, ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿದೆ.