ಡಿಜೆ ಹಳ್ಳಿ ಗಲಭೆ: ಬಂಧಿತ ನವೀನ್ ಫೇಸ್ಬುಕ್ ನಲ್ಲಿ ಅನುಮಾನಕ್ಕೆ ಕಾರಣವಾದ ಮತ್ತೊಂದು ಶೇರ್
ಬೆಂಗಳೂರು, ಆ 13: ನಗರದ ಪೂರ್ವ ಭಾಗದ ಡಿಜೆ ಹಳ್ಳಿ, ಕೆಜಿ ಹಳ್ಳಿ ಹೊತ್ತು ಹುರಿಯಲು ಕಾರಣ ಎನ್ನಲಾಗುತ್ತಿರುವ, ನವೀನ್ ಎನ್ನುವಾತನನ ಫೇಸ್ ಬುಕ್ ಅಕೌಂಟ್ ನಲ್ಲಿ ಮತ್ತೊಂದು ವಿವಾದಕಾರಿ ಪೋಸ್ಟ್ ಶೇರ್ ಆಗಿದೆ.
Recommended Video
ಗಲಭೆ ಆರಂಭವಾದ ದಿನವೇ, ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಅಕ್ಕನ ಮಗ ನವೀನ್ ನನ್ನು ಪೊಲೀಸರು ಬಂಧಿಸಿದ್ದರು. ಆ ವೇಳೆಯಿಂದಲೇ, ಮೊಬೈಲ್ ಕಳೆದು ಹೋಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾನೆ.
ಬೆಂಗಳೂರಿನಲ್ಲಿ ನಡೆದ ಗಲಭೆಗೆ ಫೇಸ್ಬುಕ್ ಪೋಸ್ಟ್ ಮಾತ್ರ ಕಾರಣವಾ?
ಈಗ, ಆತನ ಬಂಧನವಾಗಿ ಮೂವತ್ತು ಗಂಟೆಯ ಮೇಲಾಗಿದೆ. ಆದರೆ, ಹದಿನೈದು ಗಂಟೆಯ ಹಿಂದೆ ನವೀನ್ ಅಕೌಂಟ್ ನಲ್ಲಿ, ಇನ್ನೊಂದು ಪೋಸ್ಟ್ ಶೇರ್ ಆಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಹಿಂದೆ, ದೊಡ್ಡ ಸುದ್ದಿಯಾಗಿದ್ದ ಬೀಳಗಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಮುರುಗೇಶ್ ನಿರಾಣಿ, ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಮಾಡಿದ್ದಾರೆ ಎನ್ನಲಾಗುವ ವಾಟ್ಸಾಪ್ ಸಂದೇಶ, ನವೀನ್ ಫೇಸ್ ಬುಕ್ ನಲ್ಲಿ ಶೇರ್ ಆಗಿದೆ.
ನವೀನ್ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಭಾರೀ ಹಿಂಸಾಚಾರ ನಡೆದಿತ್ತು. ಫೇಸ್ಬುಕ್ ಪೋಸ್ಟ್ ಸ್ಕ್ರೀನ್ ಶಾಟ್ಗಳು ವಾಟ್ಸಪ್ ಮೂಲಕ ಹರಿದಾಡಿ, ಸಾವಿರಾರು ಜನರು ಶಾಸಕರ ಮನೆಯನ್ನು, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು.
"ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ, ಆತ ಬಿಜೆಪಿಯ ಬೆಂಬಲಿಗ. ಈತ, ನಮ್ಮ ಶಾಸಕರ ಸಂಬಂಧಿಯಾಗಿದ್ದರೂ, ಇವರಿಬ್ಬರ ನಡುವೆ ರಾಜಕೀಯ ಸಂಬಂಧವಿರಲಿಲ್ಲ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಹೇಳಿದ್ದರು.