ತಂದೆ ಹಕ್ಕಿಗೆ ವಿಚ್ಛೇದಿತ ಗಂಡಂದಿರ ಉಪವಾಸ ಸತ್ಯಾಗ್ರಹ
ಬೆಂಗಳೂರು, ಮಾ. 5 : ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳು, ಮಹಿಳೆಯರು, ಹಿಂದುಳಿದವರು, ರೈತರು, ನೌಕರರು, ಮಂಗಳಮುಖಿಯರು ಹೀಗೆ ಅನೇಕ ವರ್ಗದವರು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಈಗ ಅದೇ ಸಾಲಿಗೆ ಮತ್ತೊಂದು ಹೊಸ ವರ್ಗ ಸೇರ್ಪಡೆಯಾಗಿದೆ. ಈಗ ವಿಚ್ಛೇದಿತ ಅಪ್ಪಂದಿರು ಸಹ ತಮ್ಮ ಹಕ್ಕಿಗಾಗಿ ಹೋರಾಟದ ಹಾದಿ ಹಿಡಿದಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕುಟುಂಬ ಸಂರಕ್ಷಣಾ ಪ್ರತಿಷ್ಠಾನದದ ನೇತೃತ್ವದಲ್ಲಿ ಮಾ.7 ಮತ್ತು 8ರಂದು ವಿಚ್ಛೇದಿತ ಅಪ್ಪಂದಿರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.[ಕೊಲ್ಲೂರಲ್ಲಿ ಕೇಮಾರು ಶ್ರೀ ಉಪವಾಸ ಸತ್ಯಾಗ್ರಹ]
ವಿಚ್ಛೇದಿತ ಅಪ್ಪಂದಿರಿಗೆ ಹಾಗೂ ಅಜ್ಜ-ಅಜ್ಜಿಯಂದಿರಿಗೆ ಮೊಕದ್ದಮೆ ಹೂಡಿದ ಹದಿನೈದು ದಿನಗಳೊಳಗೆ ಮಕ್ಕಳನ್ನು ಭೇಟಿಯಾಗಲು ಅವಕಾಶ ನೀಡಬೇಕು. ಅಪ್ಪಂದಿರಿಂದ ದೂರಾದ ಮಕ್ಕಳು ಮತ್ತು ಅವರಿಂದ ಸಮಾಜದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ. ನರಸಿಂಗ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಚ್ಛೇದಿತ ಪ್ರಕರಣಗಳಲ್ಲಿ ಮಕ್ಕಳನ್ನು ದಾಳವಾಗಿ ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳೊಂದಿಗಿನ ಬಾಂಧವ್ಯಕ್ಕೆ ಚ್ಯುತಿ ತರುವಂಥ ಕೆಲಸ ಮಾಡಬಾರದು ಎಂದು ಸಂಘಟನೆ ಒತ್ತಾಯಿಸಿದೆ.[ಸ್ವಾಮೀಜಿಗಳ ಉಪವಾಸಕ್ಕೆ ಬೆಲೆ ಸಿಕ್ಕಿತೆ]
ನ್ಯಾಯಾಲಯ ಅನುಮತಿ ನೀಡಿದ್ದರೂ ಮಕ್ಕಳನ್ನು ಭೇಟಿಯಾಗಲು ಸಾಧ್ಯವಾಗದೆ ಮನನೊಂದ ವಿಚ್ಛೇದಿತ ಅಪ್ಪಂದಿರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥವರ ಪರವಾಗಿ ಸ್ವಯಂಸೇವಾ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾರಕ್ಕೊಮ್ಮೆ ಮಕ್ಕಳನ್ನು ಭೇಟಿ ಮಾಡುವುದು ಕಷ್ಟವಾಗುತ್ತಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕುಮಾರ್ ದೂರಿದ್ದಾರೆ.
ಮಹಿಳೆಯರು ತಂದೆ ಮಕ್ಕಳ ಬಾಂಧವ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ನ್ಯಾಯಾಲಯ ಆದೇಶ ನೀಡಿದ್ದರೂ ತಮ್ಮ ಮಕ್ಕಳನ್ನು ನೋಡಲಾಗದ ಸ್ಥಿತಿ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಪ್ಪಂದಿರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಬರೆದಿಕೊಂಡಿದ್ದಾರೆ.