ತಡರಾತ್ರಿ ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿ ಅತೃಪ್ತರ ರಹಸ್ಯ ಸಭೆ: ಆತಂಕದಲ್ಲಿ ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 19: ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಅಸಮಾಧಾನ ಗುಪ್ತಗಾಮಿನಿಯಾಗಿ ಬಿಜೆಪಿಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ನಿನ್ನೆ ತಡರಾತ್ರಿ ಬಿಜೆಪಿಯ ಹಲವು ಶಾಸಕರು ರಹಸ್ಯ ಸಭೆಯೊಂದನ್ನು ಮಾಡಿದ್ದಾರೆ.
ಪಂಚಮಸಾಲಿ ಲಿಂಗಾಯತ ಶಾಸಕರು ಈ ಸಭೆ ನಡೆಸಿದ್ದು, ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಈ ರಹಸ್ಯ ಸಭೆ ನಡೆದಿದೆ.
ಸಚಿವ ಸ್ಥಾನದಿಂದ ವಂಚಿತರಾಗಿರುವ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಕರಡಿ ಸಂಗಣ್ಣ, ಮಹೇಶ್ ಕುಮಟಳ್ಳಿ, ಮುರಗೇಶ ನಿರಾಣಿ, ಅರವಿಂದ ಬೆಲ್ಲದ್, ಅರುಣ್ ಕುಮಾರ್ ಪೂಜಾರ್, ಮೋಹನ್ ಲಿಂಬಿಕಾಯಿ, ಸಿ.ಎಂ.ಲಿಂಬಣ್ಣವರ್, ಶಂಕರ್ ಪಾಟೀಲ್ ಮುನೇನಕುಪ್ಪ ಮುಂತಾದವರು ಭಾಗವಹಿಸಿದ್ದರು ಎನ್ನಲಾಗಿದೆ.
ಪಂಚಮಸಾಲಿ ಲಿಂಗಾಯತ ನಾಯಕರಿಗೆ ಸಚಿವ ಸ್ಥಾನ
ಪಂಚಮಸಾಲಿ ಲಿಂಗಾಯದ ಸಮುದಾಯದ ಇಬ್ಬರು ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಯಡಿಯೂರಪ್ಪ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಲ್ಲದೆ ಜೂನ್ ನಲ್ಲಿ ನಡೆಯಲಿರುವ ಪರಿಷತ್ ಚುನಾವಣೆಗೆ ಸಮುದಾಯದ ಮೋಹನ್ ಲಿಂಬಿಕಾಯಿ ಅವರನ್ನು ಪರಿಗಣಿಸುವಂತೆ ಕೋರಲು ತೀರ್ಮಾನಿಸಲಾಗಿದೆ.
ಓಬಿಸಿ ಮೀಸಲಾತಿಗೆ ಸಚಿವರ ಮೇಲೆ ಒತ್ತಡ
ಓಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲೂ ಸಹ ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಸಮುದಾಯದ ಏಳಿಗೆ ಕುರಿತಂತೆ ಇನ್ನೂ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ವಚನಾನಂದ ಸ್ವಾಮೀಜಿ ಬಹಿರಂಗ ಬೆದರಿಕೆ
ಕೆಲವು ದಿನಗಳ ಹಿಂದಷ್ಟೆ ದಾವಣಗೆರೆಯಲ್ಲಿ ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಅವರು ಯಡಿಯೂರಪ್ಪ ಅವರಿಗೆ ನೇರವಾಗಿಯೇ 'ರಾಜಕೀಯವಾಗಿ ಕೈಬಿಡುವ' ಬೆದರಿಕೆಯನ್ನು ಹಾಕಿದ್ದರು. ಇದಕ್ಕೆ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಹಸ್ಯ ರಾಜಕೀಯ ಮೂಲಕ ಒತ್ತಡ
ಇದೀಗ ಪಂಚಮಸಾಲಿ ರಾಜಕೀಯ ಮತ್ತೊಂದು ಹಂತಕ್ಕೆ ಹೋಗಿದ್ದು, ರಹಸ್ಯ ಸಭೆಗಳನ್ನು ನಡೆಸಿ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ.