ಅಕ್ರಮ ಆಸ್ತಿ ಗಳಿಕೆ ಕೇಸ್ : ಡಿ.ಕೆ. ಶಿವಕುಮಾರ್ ಸಿಬಿಐ ಮುಂದೆ ಹಾಜರು
ಬೆಂಗಳೂರು, ನವೆಂಬರ್ 25: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಕೆಲಸ ನಿಮಿತ್ತ ರಾಯಚೂರಿಗೆ ಹೋಗಿದ್ದ ಡಿ.ಕೆ. ಶಿವಕುಮಾರ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ದಾಖಲೆಗಳ ಸಮೇತ ಡಿಕೆಶಿ ವಿಚಾರಣೆಗೆ ಹಾಜರಾಗಲಿದ್ದಾರೆ. ನವೆಂಬರ್ 23 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಬಿಐ ಅಧಿಕಾರಿಗಳುನೋಟಿಸ್ ನೀಡಿದ್ದರು. ಪುತ್ರಿ ಐಶ್ವರ್ಯ ನಿಶ್ಚಿತಾರ್ಥ ಕಾರ್ಯಕ್ರಮ ನಿಮಿತ್ತ ಎರಡು ದಿನ ಕಾಲಾವಕಾಶ ನೀಡಲು ಕೇಳಿದ್ದರು. ನಿಶ್ಚಿತಾರ್ಥವೂ ಮುಗಿದಿದ್ದು, ಇಂದು ಡಿ.ಕೆ. ಶಿವಕುಮಾರ್ ಅವರು ಸಿಬಿಐ ವಿಚಾರಣೆ ಎದುರಿಸಲಿದ್ದಾರೆ.
Recommended Video
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಡಿ.ಕೆ. ಶಿವಕುಮಾರ್ ಎರಡು ದಿನ ತಯಾರಿ ನಡೆಸಿದ್ದಾರೆ. ವಕೀಲರೊಂದಿಗೆ ಚರ್ಚಿಸಿ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಡಿ.ಕೆ. ಶಿವಕುಮಾರ್, ಆಪ್ತರ ಮನೆ ಸೇರಿದಂತೆ ಹದಿನಾಲ್ಕು ಕಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ದೆಹಲಿಯ ಫ್ಲಾಟ್ ಮತ್ತು ಮುಂಬಯಿನಲ್ಲೂ ಸಿಬಿಐ ದಾಳಿ ನಡೆದಿತ್ತು. ದಾಳಿ ವೇಳೆ 57 ಲಕ್ಷ ರೂ. ನಗದು ಪತ್ತೆಯಾಗಿತ್ತು. ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಕೆಲ ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದರು. ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ಕೇಸು ದಾಖಲಿಸಿತ್ತು.
ಸಿಬಿಐನಿಂದ ಡಿ.ಕೆ. ಶಿವಕುಮಾರ್ ವಿಚಾರಣೆ ರಾಜಕೀಯ ಪ್ರೇರಿತ!
ಸಿಬಿಐ ನೋಟಿಸ್ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್, ಸಿಬಿಐ ನೋಟಿಸ್ ನೀಡಿರುವುದು ನಿಜ. ಸಿಬಿಐ ಅಧಿಕಾರಿಗಳು ನಮ್ಮ ಮನೆಗೆ ಬಂದು ನೋಟಿಸ್ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮ ನಿಗಧಿಯಾಗಿದ್ದರಿಂದ ಮರುದಿನ ನನಗೂ ನೋಟಿಸ್ ನೀಡಿದ್ದಾರೆ. ಸಿಬಿಐ ವಿಚಾರಣೆ ನನಗೆ ಹೊಸದೇನಲ್ಲ, ಎದುರಿಸುತ್ತೇನೆ ಎಂದು ಹೇಳಿದ್ದರು.
ಕಳೆದ ಅಕ್ಟೋಬರ್ 5 ರಂದು ಸಿಬಿಐ ಅಧಿಕಾರಿಗಳು ಬೆಂಗಳೂರು, ಮುಂಬಯಿ, ದೆಹಲಿ ಸೇರಿ ಹದಿನಾಲ್ಕು ಕಡೆ ಶೋಧ ನಡೆಸಿದ್ದರು. 2013 ರಿಂದ 2018 ರ ವರೆಗೂ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪವಿದೆ. ಈ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕುಟುಂಬ 74 .93 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪವಿದ್ದು, ಈ ಸಂಬಂಧ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಡಿ.ಕೆ. ಶಿವಕುಮಾರ್ ಸಲ್ಲಿಸಲಿರುವ ದಾಖಲೆಗಳ ಪರಿಶೀಲನೆ ಬಳಿಕ ವಿಚಾರಣೆ ಎದುರಿಸಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್ ಅವರನ್ನು ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ವಿಚಾರಣೆ ನಡೆಸಿತ್ತು. ಐದು ದಿನಗಳ ವಿಚಾರಣೆ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ತೆರಿಗೆ ವಂಚನೆ ಹಾಗೂ ಹಣ ಅಕ್ರಮ ವಹಿವಾಟು ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಕೇಸು ದಾಖಲಿಸಿದ್ದನ್ನು ಸ್ಮರಿಸಬಹುದು.