ಎಸ್ಸಿ ಮೀಸಲು ಸಂಬಂಧ ಆರ್ಎಸ್ಎಸ್ ಜೊತೆ ಚರ್ಚೆ: ನಾರಾಯಣಸ್ವಾಮಿ
ಬೆಂಗಳೂರು, ಮೇ 14: "ಎಸ್ಸಿ ಆಂತರಿಕ ಮೀಸಲು ಸಂಬಂಧ ಆರ್ಎಸ್ಎಸ್ನ ನಾಯಕರು, ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಲಾಗುತ್ತಿದೆ", ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ವಿಶ್ವ ಮಾದಿಗ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಸಂಬಂಧ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪಿ. ರಾಮಚಂದ್ರ ವರದಿ, ಮಹಾರಾಷ್ಟ್ರದಲ್ಲಿ ಉಹೂಜಿ ಸಾಳ್ವೆ ಅವರ ಆಯೊಗದ ವರದಿಗಳನ್ನು ಈ ಸಂದರ್ಭದಲ್ಲಿ ಗಮನಕ್ಕೆ ತಂದರು.
ಜನಾಂಗಕಕ್ಕೆ ಸಿಗಬೇಕಿದ್ದ ಸೌಲಭ್ಯಗಳು ಇನ್ನೂ ಸಿಗುತ್ತಿಲ್ಲ. ಕಳೆದ 20 ವರ್ಷಗಳಿಂದ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಆಗುತ್ತಿದೆ ಎಂದು ನನಗೆ ಗೊತ್ತಿದೆ. ನಾನು ಈ ಕಾರ್ಯಕ್ರಮದಲ್ಲಿ ಒಬ್ಬ ಕೇಂದ್ರ ಸಚಿವನಾಗಿ ನಿಮ್ಮ ಮುಂದೆ ಬಂದು ನಿಂತಿಲ್ಲ. ಬದಲಾಗಿ ಮಾದಿಗರ ಮಗನಾಗಿ, ಚಮ್ಮಾರರ ಮಗನಾಗಿ ಬಂದು ನಿಂತಿದ್ದೇನೆ. ನಮ್ಮ ಸಮುದಾಯದ ಏಳಿಗೆಗೆ ಬಗ್ಗೆ ನನಗೆ ಸಾಕಷ್ಟು ಕಾಳಜಿ ಇದೇ ಅದಕ್ಕಾಗಿ ನಾನು ಸಾಕಷ್ಟು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಆ ವಿಷಯದಲ್ಲಿ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ದೇಶದ ಉದಾಹರಣೆಯನ್ನು ತೆಗೆದುಕೊಂಡರೆ ಭಾರತದ ಉಚ್ಛ ನ್ಯಾಯಾಲಯ, ರಾಜ್ಯಗಳ ಉಚ್ಛ ನ್ಯಾಯಾಲಯ, ಐಐಟಿ, ಐಐಎಂನಂತಹ ಉನ್ನತ ಸಂಸ್ಥೆಗಳಲ್ಲಿ ಜನಾಂಗದ ಹಾಗೂ ನಿರ್ಲಕ್ಷಿಸಲ್ಪಟ್ಟ ಸಮುದಾಯದವರ ಸಂಖ್ಯೆ ತೀರ ಕಡಿಮೆ ಇದೆ. ಇದುವರೆಗೂ ಇತಿಹಾಸದಲ್ಲಿ ಹೆಚ್ಚು ಕಾಲ ಆಳಿದ ಪಕ್ಷಗಳ ಅವಧಿಯಲ್ಲಿ ಹಿಂದುಳಿದವರಿಗೆ, ದಲಿತರಿಗೆ ಏನೆಲ್ಲಾ ಯೋಜನೆಗಳು ಜಾರಿಯಾದವು. ಯಾರೆಲ್ಲಾಸೌಲಭ್ಯ ಪಡೆದುಕೊಂಡರು ಎಂಬುದೇ ಗೊತ್ತಾಗುವುದಿಲ್ಲ. ಕೇವಲ ಕೆಲವೇ ಕೆಲವು ಮಂದಿಗಷ್ಟೇ ಸೌಲಭ್ಯಗಳು ದೊರೆಯುತ್ತಿವೆ ಎಂದು ಹೇಳಿದರು.
ಮಾದಿಗ ಸಮಾಜದ ವೇದಿಕೆಯಿಂದ ಇದೇ ಸಂದರ್ಭದಲ್ಲಿ ಜನಾಂಗದ ಸಮಗ್ರ ಅಭಿವೃದ್ಧಿ ಹಾಗೂ ಬೆಳವಣಿಗೆ ಸಂಬಂಧ ಕಯಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.