ಉಕ್ಕು ಸೇತುವೆ ವಿರೋಧಿಸಿ ಕಿರುಚಿತ್ರ ಮಾಡಿ: ಪವನ್
ಬೆಂಗಳೂರು, ನವೆಂಬರ್, 2: ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದ ವರೆಗೆ ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ವಿವಾದಿತ ಉಕ್ಕು ಸೇತುವೆ ಯೋಜನೆ ವಿರೋಧಿಸಿ ಕಿರುಚಿತ್ರ ತಯಾರಿಸುವಂತೆ ಚಲನಚಿತ್ರ ನಿರ್ದೇಶಕ ಪವನ್ ಕುಮಾರ್ ಕಿರುಚಿತ್ರ ಸ್ಪರ್ಧೆ ಏರ್ಪಡಿಸಿದ್ದಾರೆ.
ಉಕ್ಕಿನ ಸೇತುವೆ ವಿರೋಧಿಸಿ ಸ್ವತಃ ಪವನ್ ಅವರೇ ಒಂದು ಕಿರುಚಿತ್ರ ನಿರ್ಮಿಸಿದ್ದು, ಅದನ್ನು ಅವರ ಫೇಸ್ ಬುಕ್ ಪೇಜ್ ಗೆ ಅಪ್ ಲೋಡ್ ಮಾಡಿದ್ದಾರೆ. ಚಿತ್ರದಲ್ಲಿ ಬೆಂಗಳೂರು ಜನತೆಗೆ ಬೇಕಿರುವುದು ಮರಗಳೇ ಹೊರತು ಉಕ್ಕು ಸೇತುವೆ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅದೇ ರೀತಿ ಉಕ್ಕು ಸೇತುವೆ ವಿರೋಧಿಸಿ ನೀವು ಸಹ ಕಿರುಚಿತ್ರ ಮಾಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತಾವು ನಿರ್ದೇಶಿಸುವ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಅವರು ಹೇಳಿದ್ದಾರೆ.
ಉತ್ತಮ ಕಾನ್ಸೆಪ್ಟ್ ನೊಂದಿಗೆ ಭಿನ್ನವಾಗಿ ಯೋಚಿಸಿ ಉಕ್ಕಿನ ಸೇತುವೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಿರುಚಿತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಅವರು ಹೇಳಿದ್ದಾರೆ.
'ಉಕ್ಕಿನ ಸೇತುವೆ ಏಕೆ ಬೇಡ' ಎಂಬ ಹೆಸರಿನಲ್ಲಿ ಕೇವಲ ಒಂದು ನಿಮಿಷ ಕಾಲಾವಧಿಯ ಕಿರುಚಿತ್ರ ನಿರ್ಮಿಸಿ ನವೆಂಬರ್ 10 ರೊಳಗೆ ಈ ಲಿಂಕ್ http://bit.ly/steelflyovershortfilm ಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಕಿರುಚಿತ್ರಗಳ ಪೈಕಿ ಅತ್ಯುತ್ತಮವಾದ ಮೂರು ಚಿತ್ರಗಳನ್ನು ಮಾಡಿರುವ ವ್ಯಕ್ತಿಗೆ ಪವನ್ ಕುಮಾರ್ ಅವರ ಮುಂದಿನ ಚಿತ್ರದ ನಿರ್ದೇಶಕ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದಾಗಿ ಅವರು ತಿಳಿಸಿದ್ದಾರೆ.
ಉತ್ತಮ ಕಿರುಚಿತ್ರಗಳನ್ನು ಪ್ರಕಾಶ್ ಬೆಳವಾಡಿ ಮತ್ತು ಪವನ್ ಕುಮಾರ್ ಅವರು ಆಯ್ಕೆಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪವನ್ ಅವರು "ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ ಹೆಚ್ಚು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಬಹುಬೇಗ ಜನರನ್ನು ತಲುಪುತ್ತದೆ" ಎಂದು ಹೇಳಿದ್ದಾರೆ.
ಪವನ್ ಅವರು ತಯಾರಿಸಿರುವ ಕಿರುತ್ರವನ್ನು ಕೇವಲ ಒಂದು ದಿನದಲ್ಲಿ ಎಂಟು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕಿರುಚಿತ್ರದ ಕುರಿತು ಮಾತನಾಡಿರುವ ಅವರು "ನಾನು ನಿರ್ಮಿಸಿರುವ ಕಿರುಚಿತ್ರಕ್ಕೆ ಇಷ್ಟೊಂದು ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ. 100ಜನ ನಿರ್ಮಿಸಿದರೆ ಮತ್ತಷ್ಟು ಜನರಿಗೆ ತಲುಪುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.