ಬಡ ಅರ್ಚಕರ ನೆರವಿಗೆ ನಿಂತ ದಿನೇಶ್, ದಿನಸಿ ಕಿಟ್ ವಿತರಣೆ
ಬೆಂಗಳೂರು, ಮೇ 7: ''ರಾಜ್ಯದ ಮುಜರಾಯಿ ದೇವಾಲಯಗಳು ಕೋವಿಡ್ ಸೋಂಕಿನ ಕಾರಣ ಮುಚ್ಚಲ್ಪಟ್ಟಿದ್ದು ಅರ್ಚಕರುಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ಸಂಧರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯವೆಂದು ಭಾವಿಸಿ, ಎನ್ಜಿಒವೊಂದರ ನೆರವಿನಿಂದ 1700 ಅರ್ಚಕರಿಗೆ ದಿನಸಿ ಕಿಟ್ ವಿತರಿಸಿದೆ'' ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.
ನನ್ನ ಪೂಜ್ಯ ತಂದೆಯವರಾದ ದಿವಂಗತ ಆರ್.ಗುಂಡೂರಾವ್ ರವರು ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದ ಅವಧಿಯಲ್ಲಿ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿನ ಅರ್ಚಕರುಗಳಿಗೆ ದೇವಾಲಯಗಳ ಪೂಜಾ ಕಾರ್ಯ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ತಸ್ತೀಕ್ ಮೊತ್ತವನ್ನು ನಿಗಧಿಗೊಳಿಸಿ ಜಾರಿಗೊಳಿಸಿದರು. ಅಂದಿನಿಂದಲೂ ಇದು ಅರ್ಚಕರಿಗೆ ಅನುಕೂಲಕರವಾಗಿದೆ. ಅರ್ಚಕರ ಆಗಮಿಕರ ಒಕ್ಕೂಟವು ಕಳೆದ ನಲವತ್ತು ವರ್ಷಗಳಿಂದ ಅರ್ಚಕರ ಕ್ಷೇಮಕ್ಕಾಗಿ ಶ್ರಮಿಸುತ್ತಿದೆ.
ಈ ಹಿಂದೆ ಮಾನ್ಯ ಸಿದ್ದರಾಮಯ್ಯ ರವರ ಸರ್ಕಾರದಲ್ಲಿ ಈ ತಸ್ತೀಕ್ ಮೊತ್ತವನ್ನು ಎರಡು ಬಾರಿ ಪರಿಷ್ಕರಿಸಲು ನಾನೇ ಖುದ್ದಾಗಿ ಆಸಕ್ತಿ ವಹಿಸಿ, ತಸ್ತೀಕ್ ಮೊತ್ತವನ್ನು ವಾರ್ಷಿಕ ರೂ.48000 ಗಳಿಗೆ ಹೆಚ್ಚಳ ಮಾಡಲಾಯಿತು. ನನ್ನ ಪೂಜ್ಯ ತಂದೆಯವರು ಹಾಕಿಕೊಟ್ಟ ದಾರಿ ಮತ್ತು ಅವರು ತೆಗೆದುಕೊಳ್ಳುತ್ತಿದ್ದ ಜನಪರವಾದ ನಿರ್ಣಯಗಳ ರೀತಿಯನ್ನು ಮುಂದುವರೆಸಬೇಕೆಂದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ದೇವಾಲಯಗಳು ಕೋವಿಡ್ ಸೋಂಕಿನ ಕಾರಣ ಮುಚ್ಚಲ್ಪಟ್ಟಿದ್ದು ಅರ್ಚಕರುಗಳು ಸಂಕಷ್ಟಕ್ಕೆ ಈಡಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ನನ್ನ ಕ್ಷೇತ್ರದ ಜನತೆಯ ಪರಿಹಾರ ಕಾರ್ಯಗಳ ಒತ್ತಡದ ನಡುವೆಯೂ ನಾನು ಮತ್ತು ಕಲ್ಕಿ ಫೌಂಡೇಶನ್ ಹಾಗೂ ಇತರೆ ದಾನಿಗಳ ನೆರವಿನಿಂದ ರಾಜ್ಯದ ಗ್ರಾಮೀಣ ಭಾಗಗಳಲ್ಲಿನ ದೇವಾಲಯ ಅರ್ಚಕರುಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಒಂದು ಸಣ್ಣ ಪ್ರಯತ್ನ ನಡೆಸಿದ್ದೇನೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವಿತರಣೆ ಕಾರ್ಯ ನಡೆದಿದೆ.
ಇನ್ನು ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶದ ದೇವಾಲಯಗಳ ಅರ್ಚಕರುಗಳಿಗೆ ನಮ್ಮ ಅರ್ಚಕರ ಒಕ್ಕೂಟ ಹಾಗೂ ಕಲ್ಕಿ ಫೌಂಡೇಶನ್ ವತಿಯಿಂದ ನೆರವು ನೀಡುವ ಯೋಜನೆಗಳನ್ನು ರೂಪಿಸಿದ್ದು, ಇದಕ್ಕಾಗಿ ಒಂದು ವೆಬ್ ಸೈಟ್ ಸಹ ತಯಾರಿಸಿದ್ದು ಇದಕ್ಕೆ ಇಂದು ಚಾಲನೆ ನೀಡಿದೆನು. ಹಾಗೆಯೇ ಸಾಂಕೇತಿಕವಾಗಿ ನಗರದ ಅರ್ಚಕರುಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿದೆನು. ಈ ಎಲ್ಲಾ ಕಾರ್ಯಗಳಿಗೆ ಸಹಕಾರ ನೀಡಿದವರೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ.